ಯಾವ ಶಾಲೆಗೆ ಹೋದರೂ ಮಕ್ಕಳು ಅಂಕಲ್ ಸೈಕಲ್ ಕೊಡಿಸಿ ಅಂತಾರೆ: ಜೆಡಿಎಸ್ ಶಾಸಕ ಗೌರಿಶಂಕರ್

| Updated By: Rakesh Nayak Manchi

Updated on: Feb 16, 2023 | 5:51 PM

ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಸರ್ಕಾರಿ ಶಾಲೆ ಮಕ್ಕಳಿಗೆ ಬಸ್ ವ್ಯವಸ್ಥೆ ಸಮಸ್ಯೆ ಇದೆ ಎಂದು ಶಾಲಾ ಮಕ್ಕಳಿಗೆ ಸೈಕಲ್ ವಿತರಣೆ ಮಾಡಿದರು. ಆದರೆ ದರಿದ್ರ ಸರ್ಕಾರ ಬಂದ ನಂತರ ಕಳೆದ ಮೂರು ವರ್ಷಗಳಿಂದ ಮಕ್ಕಳಿಗೆ ಸೈಕಲ್ ಸಿಗುತ್ತಿಲ್ಲ ಎಂದು ತುಮಕೂರು ತಾಲೂಕಿನ ಬೆಳ್ಳಾವಿಯಲ್ಲಿ ಶಾಸಕ ಡಿ.ಸಿ.ಗೌರಿಶಂಕರ್ ಹೇಳಿದರು.

ತುಮಕೂರು: ಬಸ್ ಸಮಸ್ಯೆ ಎದುರಿಸುವ ಮಕ್ಕಳಿಗೆ ಶಾಲೆಗೆ ಹೋಗಲು ಅನುಕೂಲವಾಗಲಿ ಎಂಬ ಉದ್ದೇಶದಿಂದ ಹೆಚ್​.ಡಿ.ಕುಮಾರಸ್ವಾಮಿ (H.D.Kumarswamy) ಅವರು ಮುಖ್ಯಮಂತ್ರಿ ಆಗಿದ್ದಾಗ ಸೈಕಲ್ (Cycle) ನೀಡುವ ಯೋಜನೆ ಜಾರಿ ಮಾಡಿದ್ದರು. ಆದರೆ ಈ ದರಿದ್ರ ಸರ್ಕಾರ ಬಂದ ನಂತರ ಮೂರು ವರ್ಷಗಳಿಂದ ಶಾಲಾ ಮಕ್ಕಳಿಗೆ ಸೈಕಲ್ ವಿತರಣೆ ಮಾಡುತ್ತಿಲ್ಲ. ಯಾವುದೇ ಶಾಲೆಗೆ ಹೋದರೂ ಸೈಕಲ್ ಕೊಡಿಸಿ ಅಂಕಲ್ ಅಂತಾರೆ ಎಂದು ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕ ಡಿ.ಸಿ.ಗೌರಿಶಂಕರ್ (MLA D.C. Gowri Shankar) ಹೇಳಿಕೆ ನೀಡಿದ್ದಾರೆ.

ತುಮಕೂರು ತಾಲೂಕಿನ ಬೆಳ್ಳಾವಿಯ ಕೆಪಿಎಸ್ ಶಾಲೆಯ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಈ ಹಿಂದೆ ಇದ್ದ ಮಕ್ಕಳಿಗೆ ಸೈಕಲ್ ಕೊಟ್ಟಿದ್ದೇವೆ, ಈ ಯೋಜನೆ ರದ್ದು ಮಾಡಬೇಡಿ ಸೈಕಲ್ ಕೊಡಿ ಅಂತಾ ಕೊರೋನಾ ಬಂದ ಮೇಲೆ ಸರ್ಕಾರಕ್ಕೆ ಹಲವು ಭಾರಿ ಮನವಿ ಕೊಟ್ಟಿದ್ದೇವೆ. ಆದರೆ ಇದೊಂಥರ ಪಾಪರ್ ಗೌರ್ನಮೆಂಟ್, ದರಿದ್ರ ಸರ್ಕಾರ. ಹಾಗಾಗಿ 3 ವರ್ಷಗಳಿಂದ ಮಕ್ಕಳಿಗೆ ಸೈಕಲ್ ನೀಡುತ್ತಿಲ್ಲ. ಯಾವ ಶಾಲೆಗೆ ಹೋದರೂ ಮಕ್ಕಳು ಅಂಕಲ್ ಸೈಕಲ್ ಕೊಡಿಸಿ ಅಂತಾರೆ ಎಂದರು.

ಇದನ್ನೂ ಓದಿ: 2004, 2018ರಂತೆ ವಿಕಲಾಂಗ ಮಗು ಹುಟ್ಟಬೇಕೆಂದು ಆಶಿಸಬೇಡಿ: ಜೆಡಿಎಸ್​ಗೆ ಟಾಂಗ್ ನೀಡಿದ ಸಿ.ಟಿ.ರವಿ

ಬೆಳ್ಳಾವಿ ಭಾಗದಲ್ಲಿ ಪದವಿ ಕಾಲೇಜು ಆಗಬೇಕು ಎಂದು ಬಹಳ ಬೇಡಿಕೆ ಇತ್ತು. ಈ ಭಾಗದ 28 ಹಳ್ಳಿ ಮಕ್ಕಳು ಡಿಗ್ರಿ ಓದಲು ತುಮಕೂರು ಹೋಗಬೇಕಿತ್ತು. ಆ ಕಷ್ಟ ತಪ್ಪಿಸಲು ನಮ್ಮ ಸರ್ಕಾರ ಇದ್ದಾಗ ಡಿಗ್ರಿ ಕಾಲೇಜು ತಂದು ಕೊಡುವ ಕೆಲಸ ಮಾಡಿದ್ದೆ. ಕಟ್ಟಡ ಅವಶ್ಯಕತೆ ಹಿನ್ನಲೆ ಇಲ್ಲಿ ಜಾಗ ಸಿಗಲಿಲ್ಲ. ಕೆಲವರು ಚಿಕ್ಕಬೆಳ್ಳಾವಿ ಬ್ಯಾಲದಲ್ಲಿ ಕಟ್ಟಿ ಅಂದರು. ಬ್ಯಾಲದಲ್ಲಿ ಬಸ್ ಸಮಸ್ಯೆ ಚಿಕ್ಕಬೆಳ್ಳಾವಿ ಇಂಟಿರಿಯರ್ ಆಗುತ್ತೆ ಅಂತಾ ಚರ್ಚೆ ಆಯ್ತು. ಆದರೆ ಕೊರೋನಾ ಬಂದು ತಡವಾಯಿತು ಎಂದರು.

ಸಚಿವರಿಗೆ ಈಗಾಗಲೇ 5 ಕೋಟಿ ಕೊಡಿ ಅಂತಾ ಪ್ರಸ್ತಾವನೆಯನ್ನ ಕೊಟ್ಟಿದ್ದೇನೆ. ಅತೀ ಶೀಘ್ರವಾಗಿ ಆಗುವ ಮುನ್ಸೂಚನೆ ಇದೆ. ಬಂದರೆ ಮುಗಿಸಿಕೊಡುತ್ತೇನೆ, ಅನುದಾನ ಬರದಿದ್ದರೆ ಮುಂದೆ ಚುನಾವಣೆಯಲ್ಲಿ ನಿಮ್ಮ ಆಶೀರ್ವಾದದಲ್ಲಿ ಗೆದ್ದು ಸಚಿವನಾಗಿ ಕೆಲಸ ಮುಗಿಸಿ ಕೊಡುತ್ತೇನೆ ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:54 pm, Thu, 16 February 23