ಉಪ ರಾಷ್ಟ್ರಪತಿ ಚುನಾವಣೆಯ ಮತದಾನದಲ್ಲಿ ಭಾಗಿಯಾಗಲ್ಲ ಟಿಎಂಸಿ: ನಿರ್ಧಾರ ಪ್ರಕಟಿಸಿದ ಮಮತಾ

ಮಮತಾ  ಬ್ಯಾನರ್ಜಿ ಅವರು  ಧನ್​​ಖರ್  ಮತ್ತು  ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರನ್ನು ಡಾರ್ಜಲಿಂಗ್​​ನಲ್ಲಿ ಭೇಟಿ ಆದ ನಂತರ ಈ ನಿರ್ಧಾರ ಪ್ರಕಟಿಸಿದ್ದಾರೆ.

ಉಪ ರಾಷ್ಟ್ರಪತಿ ಚುನಾವಣೆಯ ಮತದಾನದಲ್ಲಿ ಭಾಗಿಯಾಗಲ್ಲ ಟಿಎಂಸಿ: ನಿರ್ಧಾರ ಪ್ರಕಟಿಸಿದ ಮಮತಾ
ಮಮತಾ ಬ್ಯಾನರ್ಜಿ
Updated By: ರಶ್ಮಿ ಕಲ್ಲಕಟ್ಟ

Updated on: Jul 21, 2022 | 7:11 PM

ಮುಂಬರುವ ಉಪ ರಾಷ್ಟ್ರಪತಿ ಚುನಾವಣೆಯ ಮತದಾನದಲ್ಲಿ(Vice Presidential election) ಮಮತಾ ಬ್ಯಾನರ್ಜಿ ನೇತೃತ್ವದ  ತೃಣಮೂಲ ಕಾಂಗ್ರೆಸ್ ಭಾಗಿಯಾಗುವುದಿಲ್ಲ ಎಂದು  ಹೇಳಿದೆ. ಆಗಸ್ಟ್ 6ರಂದು ಉಪರಾಷ್ಟ್ರಪತಿ ಚುನಾವಣೆ ನಡೆಯಲಿದೆ. ಚುನಾವಣಾ ಕಣದಲ್ಲಿ ಎನ್​​ಡಿಎ ಅಭ್ಯರ್ಥಿಯಾಗಿ   ಜಗದೀಪ್ ಧನ್​​​​ಖರ್ (Jagdeep Dhankhar) ಮತ್ತು ಯುಪಿಎ ಅಭ್ಯರ್ಥಿಯಾಗಿ ಮಾರ್ಗರೇಟ್ ಆಳ್ವ (Margaret Alva) ಇದ್ದಾರೆ. ಮಮತಾ ಬ್ಯಾನರ್ಜಿ ಅವರು  ಕಳೆದ ವಾರ ಧನ್​​ಖರ್  ಮತ್ತು  ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರನ್ನು ಡಾರ್ಜಲಿಂಗ್​​ನಲ್ಲಿ  ಭೇಟಿ ಆದ ನಂತರ ಈ ನಿರ್ಧಾರ ಪ್ರಕಟಿಸಿದ್ದಾರೆ ಎಂದು ಎನ್​​ಡಿಟಿವಿ ವರದಿ ಮಾಡಿದೆ. ಧನ್​​ಖರ್ ಅವರು ತಮ್ಮನ್ನು  ಬೆಂಬಲಿಸುವಂತೆ ಮಮತಾ ಬ್ಯಾನರ್ಜಿ ಅವರಲ್ಲಿ ಕೇಳಿದ್ದರು ಎಂದು ಮೂಲಗಳು ವರದಿ ಮಾಡಿವೆ.


ಟಿಎಂಸಿ ನಿರ್ಧಾರದ ಬಗ್ಗೆ ಮಾತನಾಡಿದ ಸಂಸದ ಮತ್ತು ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ, ಉಪರಾಷ್ಟ್ರಪತಿ ಹುದ್ದೆಗೆ ಸ್ಪರ್ಧಿಸುತ್ತಿರುವ ಎನ್ ಡಿಎ ಅಭ್ಯರ್ಥಿ ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲ ಧನ್ ಖರ್ ಅವರನ್ನು ಬೆಂಬಲಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ. ಅದೇ ವೇಳೆ ಉಪರಾಷ್ಟ್ರಪತಿ ಸ್ಥಾನಕ್ಕೆ ವಿಪಕ್ಷಗಳ ಅಭ್ಯರ್ಥಿ ಘೋಷಣೆ ಮಾಡುವಾಗ ಟಿಎಂಸಿಯನ್ನು ಸಂಪರ್ಕಿಸಿರಲಿಲ್ಲ ಎಂದು ಅವರು ಹೇಳಿದ್ದಾರೆ
ಎರಡೂ ಸದನದಲ್ಲಿ ಟಿಎಂಸಿಗೆ 35 ಸಂಸದರು ಇದ್ದಾರೆ. ಹೀಗಿರುವಾಗ ನಮ್ಮಲ್ಲಿ ಒಂದು ಮಾತು ಹೇಳದೆ ವಿಪಕ್ಷಗಳ ಅಭ್ಯರ್ಥಿಯನ್ನು ಘೋಷಣೆ ಮಾಡಲಾಗಿದೆ ಎಂದು ಬ್ಯಾನರ್ಜಿ ಹೇಳಿದ್ದಾರೆ.

 

Published On - 5:55 pm, Thu, 21 July 22