
ಜಾತಸ್ಯ ಮರಣಂ ಧ್ರುವಂ – ಮನುಷ್ಯನಿಗೆ ಹುಟ್ಟು ಎಷ್ಟು ಸತ್ಯವೋ ಸಾವು ಅಷ್ಟೇ ಸತ್ಯ. ಈ ಭೂಮಿ ಮೇಲೆ ಹುಟ್ಟಿದ ಪ್ರತಿಯೊಬ್ಬರೂ ಒಂದು ದಿನ ದೇಹವನ್ನು ತ್ಯಜಿಸಬೇಕಾಗುತ್ತದೆ. ಜನನ ಅನಿಶ್ಚಿತವಾದರೆ, ಮರಣ ಶಾಶ್ವತ ಎಂದು ಹೇಳಲಾಗುತ್ತದೆ. ಅಂತಹ ಮರಣಿಸಿದ ವ್ಯಕ್ತಿಗಳು ಕನಸಿನಲ್ಲಿ ಬಂದಾಗ, ಅದರ ಹಿಂದಿನ ಶುಭ ಅಥವಾ ಅಶುಭ ಫಲಗಳು ಏನು ಎಂದು ಗರುಡ ಪುರಾಣ ವಿವರಿಸುತ್ತದೆ. ಸಾಕ್ಷಾತ್ ಶ್ರೀಮನ್ನಾರಾಯಣರು ಗರುಡರಿಗೆ ಅನೇಕ ವಿಷಯಗಳನ್ನು ತಿಳಿಸಿದ್ದು, ಅದರಲ್ಲಿ ಇದೂ ಸಹ ಒಂದು. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.
ರಾತ್ರಿಯ ನಿದ್ರಾವಸ್ಥೆಯಲ್ಲಿ ಬೀಳುವ ಕನಸುಗಳಿಗೆ ಜ್ಯೋತಿಷ್ಯ, ಪುರಾಣ, ವಿಶೇಷವಾಗಿ ಗರುಡ ಪುರಾಣಗಳಲ್ಲಿ ಮಹತ್ವದ ಸ್ಥಾನವಿದೆ. ಕನಸಿನಲ್ಲಿ ಕಾಣಿಸುವ ಮರಣಿಸಿದವರ ರೀತಿಯ ಆಧಾರದ ಮೇಲೆ, ಅವುಗಳ ಅರ್ಥ ಮತ್ತು ಫಲಿತಾಂಶಗಳು ಭಿನ್ನವಾಗಿರುತ್ತವೆ.
ನಮ್ಮದೇ ಆದ ಪಿತೃಗಳು, ಕುಟುಂಬದಲ್ಲಿ ಮರಣಿಸಿದ ತಂದೆ ಅಥವಾ ತಾಯಿ ಕಡೆಯ ಸಂಬಂಧಿಕರು ಕನಸುಗಳಲ್ಲಿ ಪದೇ ಪದೇ ಕಾಣಿಸಿಕೊಂಡರೆ, ಅವರ ಕಾರ್ಯಗಳನ್ನು ಮಾಡಬೇಕು ಎಂದರ್ಥ. “ನೀನು ನನ್ನನ್ನು ಮರೆಯುತ್ತಿದ್ದೀಯಾ” ಎಂದು ಅವರು ಸೂಚಿಸುತ್ತಿರಬಹುದು. ಅಮಾವಾಸ್ಯೆ, ಮಹಾಲಯ ಅಮಾವಾಸ್ಯೆ ಸಂದರ್ಭಗಳಲ್ಲಿ ಅವರ ಹೆಸರಿನಲ್ಲಿ ಕಾರ್ಯಗಳನ್ನು ನೆರವೇರಿಸುವುದು ಸೂಕ್ತ.
ಯಾವುದೇ ಪರಿಚಯಸ್ಥ ಅಥವಾ ಮರಣಿಸಿದ ವ್ಯಕ್ತಿ ಕೋಪಿಷ್ಠರಾಗಿ, ಕಿರುಚಾಡುತ್ತಾ, ಕೂಗಾಡುತ್ತಾ ಕನಸಿನಲ್ಲಿ ಕಾಣಿಸಿಕೊಂಡರೆ ಅದು ಅಶುಭದ ಸಂಕೇತ. ಇಂತಹ ಕನಸುಗಳ ಪರಿಣಾಮ ಮೂರು ದಿನಗಳವರೆಗೆ ಮಾತ್ರ ಇರುತ್ತದೆ ಎಂದು ಹೇಳಲಾಗುತ್ತದೆ. ಇಂತಹ ಕನಸು ಬಿದ್ದಾಗ, ಇಷ್ಟದೇವರು ಅಥವಾ ಕುಲದೇವರ ದರ್ಶನ ಪಡೆದು ಪ್ರಾರ್ಥಿಸಬೇಕು. ಉದಾಹರಣೆಗೆ, ಕುಲದೇವರು ವೆಂಕಟೇಶ್ವರನಾಗಿದ್ದರೆ, ತಿರುಪತಿ ಅಥವಾ ಹತ್ತಿರದ ವೆಂಕಟೇಶ್ವರ ದೇವಾಲಯಕ್ಕೆ ಹೋಗಿ ಅರ್ಚನೆ ಮಾಡಿಸುವುದರಿಂದ ಶುಭವಾಗುತ್ತದೆ.
ಇದನ್ನೂ ಓದಿ: ಫ್ಯಾಶನ್ಗಾಗಿ ವಜ್ರ ಧರಿಸುವ ಮುನ್ನ ಎಚ್ಚರ! ಈ ರಾಶಿಯವರು ವಜ್ರ ಧರಿಸಿದರೆ ಕಷ್ಟ ತಪ್ಪಿದ್ದಲ್ಲ!
ಮರಣಿಸಿದ ವ್ಯಕ್ತಿಗಳು ಕನಸಿನಲ್ಲಿ ಸೈಲೆಂಟ್ ಆಗಿ ಅಥವಾ ಶಾಂತವಾಗಿ ಬಂದರೆ, ಅದು ನಮಗೆ ಒಂದು ಎಚ್ಚರಿಕೆ ಅಥವಾ ಸೂಚನೆಯಾಗಿರುತ್ತದೆ. “ನಿನ್ನ ಜವಾಬ್ದಾರಿಗಳನ್ನು ನಿನಗೆ ಗುರುತಿಸುತ್ತಿದ್ದೇನೆ, ಎಚ್ಚೆತ್ಕೋ, ಅಲರ್ಟ್ ಆಗು” ಎಂದು ಅವರು ತಿಳಿಸುತ್ತಿರಬಹುದು. ಇದು ಜೀವನದ ವಿವಿಧ ವಿಚಾರಗಳ ಬಗ್ಗೆ ಗಮನ ಹರಿಸಲು ಪ್ರೇರೇಪಿಸುತ್ತದೆ.
ಕನಸಿನಲ್ಲಿ ಯಾರಾದರೂ ಅಳುತ್ತಿರುವುದು, ರೋದನೆ ಮಾಡುವುದು ಅಥವಾ ಸಂಕಟ ಪಡುತ್ತಿರುವುದು ಕಂಡರೆ, ಅದು ಮನೆಯಲ್ಲಿ ಯಾರಿಗೋ ತೊಂದರೆ ಎದುರಾಗಲಿದೆ ಎಂಬುದರ ಸೂಚನೆ. ಅಂತಹ ಕನಸು ಬಿದ್ದಾಗ, ಯಾವುದೇ ಪ್ರಮುಖ ಪ್ರಯಾಣಗಳು ಅಥವಾ ಕಾರ್ಯಕ್ರಮಗಳನ್ನು ಆದಷ್ಟು ಮುಂದೂಡುವುದು ಒಳ್ಳೆಯದು.
ಒಟ್ಟಾರೆಯಾಗಿ, ಯಾವುದೇ ವ್ಯಕ್ತಿಗಳು ಮರಣಿಸಿದ ನಂತರ ಕನಸಿನಲ್ಲಿ ಕಾಣಿಸಿಕೊಂಡಾಗ ಅದಕ್ಕೊಂದು ನಿರ್ದಿಷ್ಟ ಅರ್ಥವಿರುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ