
ಸಾಕಷ್ಟು ಜನರು ತಮ್ಮ ಆಸೆ ಕನಸನ್ನು ಈಡೇರಿಸಿಕೊಳ್ಳಲು ದೇವರ ಮೊರೆ ಹೋಗುತ್ತಾರೆ. ದೇವರನ್ನು ಮೆಚ್ಚಿಸಲು ವಿವಿಧ ರೀತಿಯ ಪೂಜೆ ಪರಿಹಾರಗಳನ್ನೂ ಮಾಡುವುದುಂಟು. ಇದಕ್ಕಾಗಿ ಸಾಕಷ್ಟು ಹಣವನ್ನೂ ಸುರಿಯುವವರಿದ್ದಾರೆ. ಆದರೆ “ದೇವರು ಯಾರಿಗೆ ಸಹಾಯ ಮಾಡುತ್ತಾನೆ?” ಎಂಬ ಪ್ರಮುಖ ಪ್ರಶ್ನೆಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ ಬಸವರಾಜ ಗುರೂಜಿಯವರು ತಮ್ಮ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಉತ್ತರಿಸಿದ್ದಾರೆ.
ಅನೇಕ ಜನರು ದೇವರು ತಮ್ಮನ್ನು ಕೈಬಿಟ್ಟಿದ್ದಾನೆ ಎಂದು ಭಾವಿಸುತ್ತಾರೆ. ಆದರೆ ಧರ್ಮಗ್ರಂಥಗಳು ಮತ್ತು ಧರ್ಮಶಾಸ್ತ್ರಗಳು ದೇವರು ಎಲ್ಲರನ್ನೂ ಸಮಾನವಾಗಿ ನೋಡುತ್ತಾನೆ ಎಂದು ಹೇಳುತ್ತವೆ. ದೇವರ ಅನುಗ್ರಹವು ಶಾಶ್ವತವಾಗಿದ್ದು ಅದು ಮನುಷ್ಯನ ಪ್ರಯತ್ನಗಳಿಗೆ ಅನುಗುಣವಾಗಿರುತ್ತದೆ ಎಂದು ಗುರೂಜಿ ಹೇಳುತ್ತಾರೆ.
ಶ್ಲೋಕದಲ್ಲಿ ಉಲ್ಲೇಖಿಸಿರುವಂತೆ, “ಉದ್ಯಮ, ಸಾಹಸ, ಧೈರ್ಯ, ಬುದ್ಧಿ, ಶಕ್ತಿ ಮತ್ತು ಪರಾಕ್ರಮ” ಇರುವವರಿಗೆ ದೇವರ ಸಹಾಯ ಸಿಗುತ್ತದೆ. ಉದ್ಯಮ ಎಂದರೆ ಚುರುಕುತನ ಮತ್ತು ಬುದ್ಧಿಶಕ್ತಿ. ಸಾಹಸ ಎಂದರೆ ಆತ್ಮವಿಶ್ವಾಸ ಮತ್ತು ಗಟ್ಟಿತನ. ಧೈರ್ಯ ಎಂದರೆ ಕಷ್ಟದ ಸಮಯದಲ್ಲಿ ಸಹಾಯ ಮಾಡುವ ಮನೋಭಾವ. ಶಕ್ತಿ ಎಂದರೆ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ. ಪರಾಕ್ರಮ ಎಂದರೆ ಕೆಲಸದಲ್ಲಿ ನಿರತರಾಗಿರುವುದು ಮತ್ತು ಕಾಯಕಯೋಗಿಯಾಗಿರುವುದು.
ಇದನ್ನೂ ಓದಿ: ಸಂಖ್ಯೆ 7ರ ಹಿಂದಿನ ರಹಸ್ಯಗಳು; ಇದು ಶುಭವೋ, ಅಶುಭವೋ?
ಕಲಿಯುಗದಲ್ಲಿ, ರೈತರು ಮತ್ತು ಕಷ್ಟಪಡುವವರಿಗೆ ದೇವರು ಯಾವಾಗಲೂ ಸಹಾಯ ಮಾಡುತ್ತಾನೆ ಎಂದು ಹೇಳಲಾಗುತ್ತದೆ. ಬೆಳೆ ನಷ್ಟದ ಸಮಯದಲ್ಲಿ, ಭಗವಂತನ ಕೃಪೆಯಿಂದ ಮಳೆ ಬರುವುದು ಅನೇಕ ಬಾರಿ ಕಂಡುಬಂದಿದೆ. ಆದ್ದರಿಂದ, ಕೇವಲ ದೇವರನ್ನು ನಂಬುವುದಲ್ಲದೆ, ಪ್ರಯತ್ನ, ಸಂಕಲ್ಪ ಮತ್ತು ಕಾಯಕಯೋಗಿಗಳಾಗಿರುವುದು ಮುಖ್ಯವಾಗಿದೆ. ದೇವರ ಪೂಜೆ, ಸ್ಮರಣೆ, ದಾನ ಧರ್ಮಗಳು ಮತ್ತು ಸಹಾಯ ಮಾಡುವ ಮನೋಭಾವವು ದೇವರ ಅನುಗ್ರಹವನ್ನು ಪಡೆಯಲು ಸಹಾಯ ಮಾಡುತ್ತದೆ. ನಿಮ್ಮ ಪ್ರಯತ್ನಗಳು ಮತ್ತು ಸಂಕಲ್ಪಗಳು ಸರಿಯಾಗಿರುವಾಗ, ದೇವರ ಸಹಾಯ ಖಚಿತವಾಗಿ ಸಿಗುತ್ತದೆ ಎಂದು ಗುರೂಜಿ ವಿವರಿಸಿದ್ದಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:49 am, Wed, 18 June 25