Om Temple: ವಿಶ್ವದ ಏಕೈಕ ‘ಓಂ’ ಆಕಾರದ ಶಿವ ದೇವಾಲಯ; ರಾಜಸ್ಥಾನದ ಪ್ರಸಿದ್ಧ ಆಧ್ಯಾತ್ಮಿಕ ಕೇಂದ್ರದ ಸಂಪೂರ್ಣ ಮಾಹಿತಿ

ರಾಜಸ್ಥಾನದ ಪಾಲಿ ಜಿಲ್ಲೆಯಲ್ಲಿರುವ ಓಂ ಆಕಾರದ ದೇವಾಲಯವು ವಿಶ್ವದ ಮೊದಲ 'ಓಂ' ಮಾದರಿಯ ರಚನೆಯಾಗಿದೆ. 250 ಎಕರೆ ವಿಸ್ತೀರ್ಣದಲ್ಲಿ ಹರಡಿರುವ ಈ ಭವ್ಯ ದೇವಾಲಯವು ನಾಗರ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲ್ಪಟ್ಟಿದೆ. 1008 ಶಿವಲಿಂಗಗಳು ಮತ್ತು 12 ಜ್ಯೋತಿರ್ಲಿಂಗಗಳ ಪ್ರತಿಕೃತಿಗಳನ್ನು ಒಳಗೊಂಡಿದೆ. ವಿಶ್ವಗುರು ಮಹೇಶ್ವರಾನಂದ ಪುರಿಜಿ ಮಹಾರಾಜ್ ಅವರ ದೃಷ್ಟಿಕೋನದ ಫಲವಾಗಿ, ಇದು ಆಧ್ಯಾತ್ಮಿಕ ಮತ್ತು ವಾಸ್ತುಶಿಲ್ಪದ ಅದ್ಭುತ ಕೇಂದ್ರವಾಗಿದೆ.

Om Temple: ವಿಶ್ವದ ಏಕೈಕ ಓಂ ಆಕಾರದ ಶಿವ ದೇವಾಲಯ; ರಾಜಸ್ಥಾನದ ಪ್ರಸಿದ್ಧ ಆಧ್ಯಾತ್ಮಿಕ ಕೇಂದ್ರದ ಸಂಪೂರ್ಣ ಮಾಹಿತಿ
'ಓಂ ಆಕಾರ'ದ ದೇವಾಲಯ

Updated on: Sep 01, 2026 | 12:33 PM

ರಾಜಸ್ಥಾನದ ಪಾಲಿ ಜಿಲ್ಲೆಯ ಜಾದನ್ ಗ್ರಾಮವು ತನ್ನ ಆಧ್ಯಾತ್ಮಿಕತೆ ಮತ್ತು ಭವ್ಯವಾದ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ. ಇಲ್ಲಿರುವ ‘ಓಂ ಆಕಾರ’ದ ದೇವಾಲಯವು ಓಂ ಸಂಕೇತದ ಮಾದರಿಯಲ್ಲಿ ನಿರ್ಮಿಸಲಾದ ವಿಶ್ವದ ಮೊದಲ ದೇವಾಲಯವೆಂದು ಪರಿಗಣಿಸಲಾಗಿದೆ. ಹಿಂದೂ ತತ್ವಶಾಸ್ತ್ರದಲ್ಲಿ ಅತ್ಯಂತ ಪವಿತ್ರವಾದ ‘ಓಂ’ ಅನ್ನು ವಿಶ್ವ, ಸೃಷ್ಟಿ ಮತ್ತು ಪ್ರಜ್ಞೆಯ ಸಂಕೇತವೆಂದು ಪೂಜಿಸಲಾಗುತ್ತದೆ. ಈ ಸಾರ್ವತ್ರಿಕ ಧ್ವನಿಯು ಸುಂದರ ಕಲ್ಲಿನ ರಚನೆಯಾಗಿ ಜೀವತಳೆದಂತೆ ಈ ಭವ್ಯ ದೇವಾಲಯವು ಕಂಗೊಳಿಸುತ್ತಿದೆ.

250 ಎಕರೆ ವಿಸ್ತೀರ್ಣ ಹಾಗೂ ಭವ್ಯ ವಾಸ್ತುಶಿಲ್ಪ:

ಈ ಅಪರೂಪದ ದೇವಾಲಯ ಸಂಕೀರ್ಣವು ಸುಮಾರು 250 ಎಕರೆ ವಿಶಾಲವಾದ ಪ್ರದೇಶದಲ್ಲಿ ಹರಡಿಕೊಂಡಿದೆ. ಸಾಂಪ್ರದಾಯಿಕ ನಾಗರ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾದ ಈ ದೇವಾಲಯವು ಭಕ್ತಿ, ಕಲಾತ್ಮಕತೆ ಮತ್ತು ಎಂಜಿನಿಯರಿಂಗ್ ಕೌಶಲ್ಯದ ಅತ್ಯುತ್ತಮ ಸಂಗಮವಾಗಿದೆ. ದೇವಾಲಯವು ಸುಮಾರು 2,000 ಸುಂದರವಾಗಿ ಕೆತ್ತಿದ ಕಂಬಗಳ ಮೇಲೆ ನಿಂತಿದ್ದು, ಇದರ ಮುಖ್ಯ ರಚನೆಯು 135 ಅಡಿ ಎತ್ತರವಿದೆ. ದೇವಾಲಯದ ಮೇಲ್ಭಾಗದಲ್ಲಿ ಸ್ಥಾಪಿಸಲಾದ ಅಪರೂಪದ ಕಲ್ಲಿನಿಂದ ಮಾಡಿದ ಶಿವಲಿಂಗವು ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ.

1,008 ಶಿವನ ವಿಗ್ರಹಗಳು ಮತ್ತು 12 ಜ್ಯೋತಿರ್ಲಿಂಗಗಳು:

ದೇವಾಲಯದ ಆವರಣದಲ್ಲಿ ಒಟ್ಟು 1,008 ಶಿವನ ವಿಗ್ರಹಗಳನ್ನು ಪ್ರ ಪ್ರತಿಷ್ಠಾಪಿಸಲಾಗಿದೆ. ಇವುಗಳಲ್ಲಿ ಭಾರತದ ಪ್ರಸಿದ್ಧ 12 ಜ್ಯೋತಿರ್ಲಿಂಗಗಳ ಸುಂದರ ಪ್ರತಿಕೃತಿಗಳೂ ಸೇರಿವೆ. ಜೊತೆಗೆ, ಹಿಂದೂ ಧರ್ಮದಲ್ಲಿ ಪವಿತ್ರವೆಂದು ಪರಿಗಣಿಸಲಾಗುವ 108 ಸಂಖ್ಯೆಗೆ ಅನುಗುಣವಾಗಿ ಇಲ್ಲಿ 108 ಕೊಠಡಿಗಳನ್ನು ನಿರ್ಮಿಸಲಾಗಿದೆ. ದೇವಾಲಯದ ಕೆಳಭಾಗದಲ್ಲಿ ಶುದ್ಧತೆ ಮತ್ತು ನಿರಂತರತೆಯ ಸಂಕೇತವಾಗಿ ನಿರ್ಮಿಸಲಾದ ಕೃತಕ ಸರೋವರವು ಈ ಸ್ಥಳದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ.

ಇದನ್ನೂ ಓದಿ: ಕೃಷ್ಣ ಜನ್ಮಾಷ್ಟಮಿ 2026: ಒಂದೇ ದಿನದಲ್ಲಿ ಬೆಂಗಳೂರಿನ 4 ಪ್ರಸಿದ್ಧ ಕೃಷ್ಣ ದೇವಾಲಯಗಳ ದರ್ಶನ ಪಡೆಯಿರಿ

ಓಂ ಆಶ್ರಮ ಸ್ಥಾಪಕರ ದೂರದೃಷ್ಟಿ:

ಈ ಅದ್ಭುತ ದೇವಾಲಯದ ನಿರ್ಮಾಣವು ವಿಶ್ವಗುರು ಮಹಾ ಮಂಡಲೇಶ್ವರ ಪರಮಹಂಸ ಸ್ವಾಮಿ ಮಹೇಶ್ವರಾನಂದ ಪುರಿಜಿ ಮಹಾರಾಜ್ ಅವರ ಸುಂದರ ಕಲ್ಪನೆಯಾಗಿದೆ. ಭಕ್ತರು ಧ್ಯಾನದಲ್ಲಿ ತೊಡಗಲು, ಆಧ್ಯಾತ್ಮಿಕ ಜ್ಞಾನವನ್ನು ಪಡೆಯಲು ಮತ್ತು ‘ಓಂ’ ಎಂಬ ಸಾರ್ವತ್ರಿಕ ಶಬ್ದದೊಂದಿಗೆ ಸಂಪರ್ಕ ಸಾಧಿಸಲು ಅವರು ‘ಓಂ ಆಶ್ರಮ’ವನ್ನು ಸ್ಥಾಪಿಸಿದರು. ಈ ದೇವಾಲಯದ ಹೃದಯಭಾಗದಲ್ಲಿ ಗುರು ಮಾಧವಾನಂದಜಿ ಅವರ ಸಮಾಧಿ ಸ್ಥಾಪಿತವಾಗಿದೆ.

ನಿರ್ಮಾಣದ ಇತಿಹಾಸ ಮತ್ತು ಭೇಟಿಯ ಸಮಯ:

ದೇವಾಲಯದ ನಿರ್ಮಾಣ ಕಾರ್ಯವು 1995 ರಲ್ಲಿ ಪ್ರಾರಂಭವಾಯಿತು. ಹಲವು ವರ್ಷಗಳ ನಿರಂತರ ಶ್ರಮದ ನಂತರ, ಇಂದು ಈ ಸ್ಥಳವು ಪ್ರಪಂಚದಾದ್ಯಂತದ ಭಕ್ತರು ಹಾಗೂ ಪ್ರವಾಸಿಗರನ್ನು ಆಕರ್ಷಿಸುವ ಪ್ರಮುಖ ಆಧ್ಯಾತ್ಮಿಕ ಕೇಂದ್ರವಾಗಿ ಹೊರಹೊಮ್ಮಿದೆ.

ಸಂದರ್ಶನದ ಸಮಯ: ಬೆಳಿಗ್ಗೆ 6:00 ರಿಂದ ಮಧ್ಯಾಹ್ನ 12:00 ರವರೆಗೆ ಮತ್ತು ಮಧ್ಯಾಹ್ನ 2:00 ರಿಂದ ರಾತ್ರಿ 8:00 ರವರೆಗೆ ಸಾರ್ವಜನಿಕರ ಭೇಟಿಗೆ ಅವಕಾಶವಿರುತ್ತದೆ.

ಅಧ್ಯಾತ್ಮಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us