
ಪ್ರತಿಯೊಬ್ಬರಿಗೂ ಜೀವನದಲ್ಲಿ ಎಂದಾದರೂ ಒಂದು ಬಾರಿಯಾದರೂ ಈ ಅನುಭವ ಆಗೇ ಇರುತ್ತದೆ. ಅತ್ಯಂತ ಆನಂದದಿಂದ ಊಟ ಮಾಡಲು ಕುಳಿತಾಗ, ಹಠಾತ್ ಆಗಿ ಬಾಯಿಗೆ ಸಣ್ಣ ಕಲ್ಲು ಸಿಗುತ್ತದೆ. ಹೆಚ್ಚಿನವರು ಇದನ್ನು ಕೇವಲ ಒಂದು ಸಾಮಾನ್ಯ ಸಂಗತಿ ಎಂದು ನಿರ್ಲಕ್ಷಿಸುತ್ತಾರೆ. ಆದರೆ ಶಕುನ ಶಾಸ್ತ್ರ ಮತ್ತು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಊಟ ಮಾಡುವಾಗ ಅನ್ನದಲ್ಲಿ ಕಲ್ಲು ಸಿಗುವುದು ಕೇವಲ ಆಕಸ್ಮಿಕವಲ್ಲ. ನಿಮ್ಮ ನಿತ್ಯದ ಊಟದಲ್ಲಿ ಪದೇ ಪದೇ ಕಲ್ಲು, ಕೂದಲು ಅಥವಾ ಇತರ ಅಶುದ್ಧ ವಸ್ತುಗಳು ಸಿಗುತ್ತಿದ್ದರೆ, ಅದು ನಿಮ್ಮ ಜಾತಕದಲ್ಲಿನ ಗ್ರಹಗಳ ದೋಷ ಅಥವಾ ನಿಮ್ಮ ಜೀವನದಲ್ಲಿ ಎದುರಾಗಲಿರುವ ಕೆಲವು ಸಮಸ್ಯೆಗಳ ಮುನ್ಸೂಚನೆಯಾಗಿರಬಹುದು. ಹಾಗಾದರೆ, ಇದರ ಹಿಂದಿರುವ ಅಸಲಿ ಜ್ಯೋತಿಷ್ಯ ಕಾರಣಗಳೇನು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಜ್ಯೋತಿಷ್ಯ ಶಾಸ್ತ್ರದಲ್ಲಿ ಮಂಗಳ ಗ್ರಹವನ್ನು ಧೈರ್ಯ, ಶಕ್ತಿ, ಭೂಮಿ ಮತ್ತು ಉತ್ಸಾಹದ ಕಾರಕ ಎಂದು ಪರಿಗಣಿಸಲಾಗುತ್ತದೆ. ಶಕುನ ಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯ ಊಟದಲ್ಲಿ ಪದೇ ಪದೇ ಕಲ್ಲುಗಳು ಸಿಗುತ್ತಿದ್ದರೆ, ಅವನ ಜಾತಕದಲ್ಲಿ ಮಂಗಳ ಗ್ರಹದ ಸ್ಥಿತಿ ದುರ್ಬಲವಾಗಿದೆ ಎಂದರ್ಥ. ಮಂಗಳನ ಅಶುಭ ಸ್ಥಿತಿಯಿಂದಾಗಿ ಜೀವನದಲ್ಲಿ ಸಣ್ಣಪುಟ್ಟ ವಿಷಯಗಳಿಗೂ ಅಡೆತಡೆಗಳು, ಅನಗತ್ಯ ವಿವಾದಗಳು, ಕೌಟುಂಬಿಕ ಕಲಹಗಳು ಮತ್ತು ಹಠಾತ್ ಮಾನಸಿಕ ಒತ್ತಡಗಳು ಎದುರಾಗಬಹುದು.
ಇದನ್ನೂ ಓದಿ: ಶ್ರಾದ್ಧದಲ್ಲಿ ಮೊದಲು ಕಾಗೆಗೆ ಅನ್ನ ಯಾಕೆ ನೀಡುತ್ತಾರೆ? ಇದರ ಹಿಂದಿದೆ ಗರುಡ ಪುರಾಣ ಮತ್ತು ರಾಮಾಯಣದ ಕುತೂಹಲಕಾರಿ ಕಥೆ
ಹಿಂದೂ ಧರ್ಮದಲ್ಲಿ ಪೂರ್ವಜರಿಗೆ (ಪಿತೃಗಳಿಗೆ) ಅತ್ಯುನ್ನತ ಸ್ಥಾನವನ್ನು ನೀಡಲಾಗಿದೆ. ಅವರ ಆಶೀರ್ವಾದವಿಲ್ಲದೆ ಮನೆಯಲ್ಲಿ ನೆಮ್ಮದಿ ಇರಲು ಸಾಧ್ಯವಿಲ್ಲ. ಊಟದಲ್ಲಿ ಪದೇ ಪದೇ ಕಲ್ಲು, ಕೂದಲು ಅಥವಾ ಧೂಳು ಸಿಗುವುದನ್ನು ಪಿತೃ ದೋಷಕ್ಕೆ ನೇರವಾಗಿ ಸಂಬಂಧವನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಇದು ನಿಮ್ಮ ಪೂರ್ವಜರು ನಿಮ್ಮ ಯಾವುದೋ ನಡವಳಿಕೆಯಿಂದ ಅಥವಾ ಧಾರ್ಮಿಕ ಕರ್ತವ್ಯ ಲೋಪದಿಂದ ಅಸಂತುಷ್ಟರಾಗಿದ್ದಾರೆ ಎಂಬುದರ ಸಂಕೇತವಾಗಿದೆ. ಇಂತಹ ಸಂದರ್ಭದಲ್ಲಿ ನಿಮ್ಮ ಪೂರ್ವಜರನ್ನು ಸ್ಮರಿಸಿ, ಅವರಿಗೆ ಪ್ರಿಯವಾದ ಆಹಾರವನ್ನು ದಾನ ಮಾಡಿ ಹಾಗೂ ಪಿತೃ ಕಾರ್ಯಗಳನ್ನು ಶ್ರದ್ಧೆಯಿಂದ ನೆರವೇರಿಸುವುದರಿಂದ ದೋಷ ನಿವಾರಣೆಯಾಗುತ್ತದೆ.
ರಾಹು ಗ್ರಹವನ್ನು ಜ್ಯೋತಿಷ್ಯದಲ್ಲಿ ಭ್ರಮೆ ಮತ್ತು ಹಠಾತ್ ಕಷ್ಟಗಳ ಕಾರಕ ಎನ್ನಲಾಗುತ್ತದೆ. ಜಾತಕದಲ್ಲಿ ರಾಹು ಕೆಟ್ಟ ಸ್ಥಾನದಲ್ಲಿದ್ದಾಗಲೂ ಊಟದಲ್ಲಿ ಕಲ್ಲು ಸಿಗುವ ಸಾಧ್ಯತೆ ಇರುತ್ತದೆ. ರಾಹುವಿನ ದುರ್ಬಲ ದೆಸೆಯಿಂದಾಗಿ ಜೀವನದಲ್ಲಿ ಅನಗತ್ಯ ಗೊಂದಲಗಳು, ಆರ್ಥಿಕ ನಷ್ಟ ಮತ್ತು ಮಾನಸಿಕ ನೆಮ್ಮದಿಯ ಭಂಗ ಉಂಟಾಗುತ್ತದೆ. ರಾಹುವನ್ನು ಶಾಂತಗೊಳಿಸಲು ಮನೆಯನ್ನು ಯಾವಾಗಲೂ ಸ್ವಚ್ಛವಾಗಿಟ್ಟುಕೊಳ್ಳಿ ಮತ್ತು ನಿಮ್ಮ ದೇಹದ ಶುದ್ಧತೆಗೆ ಆದ್ಯತೆ ನೀಡಿ. ಸಾಧ್ಯವಾದರೆ ಬೆಳ್ಳಿಯ ಆಭರಣ ಅಥವಾ ಬೆಳ್ಳಿಯ ವಸ್ತುವನ್ನು ಧರಿಸುವುದು ಒಳ್ಳೆಯದು.
ಗಮನಿಸಿ: ಯಾವುದೇ ಜ್ಯೋತಿಷ್ಯದ ಕಾರಣಗಳನ್ನು ಹುಡುಕುವ ಮುನ್ನ, ಮೊದಲು ನಿಮ್ಮ ಅಡುಗೆಮನೆಯ ಸ್ವಚ್ಛತೆ, ಧಾನ್ಯಗಳನ್ನು ಸರಿಯಾಗಿ ಆರಿಸಲಾಗಿದೆಯೇ ಮತ್ತು ಆಹಾರದ ಗುಣಮಟ್ಟ ಹೇಗಿದೆ ಎಂಬುದನ್ನು ಪರಿಶೀಲಿಸುವುದು ಅತ್ಯಂತ ಅಗತ್ಯ. ಒಂದು ವೇಳೆ ಎಲ್ಲವೂ ಸರಿಯಾಗಿದ್ದರೂ ಈ ಘಟನೆಗಳು ಪುನರಾವರ್ತನೆಯಾಗುತ್ತಿದ್ದರೆ, ಆಗ ಜ್ಯೋತಿಷ್ಯದ ಪರಿಹಾರಗಳ ಕಡೆ ಗಮನ ಹರಿಸಬಹುದು.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ