
ಓಂಕಾರವು ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರವಾದ ಸ್ಥಾನಮಾನವನ್ನು ಹೊಂದಿದೆ. ಅಕಾರ, ಉಕಾರ, ಮಕಾರಗಳ ಸಮ್ಮಿಲನವೇ ಓಂಕಾರವಾಗಿದ್ದು, ಇದನ್ನು ಇಡೀ ಬ್ರಹ್ಮಾಂಡದಲ್ಲಿ ಮೊದಲು ಉದ್ಭವಿಸಿದ ಶಬ್ದ ಎಂದು ನಂಬಲಾಗುತ್ತದೆ. ಇದನ್ನು ಪ್ರಣವ ಮಂತ್ರ ಎಂದೂ ಕರೆಯುತ್ತಾರೆ. ಈ ಓಂಕಾರವನ್ನು ಮಗುವಿನ ನಾಲಿಗೆಯ ಮೇಲೆ ಬರೆಯುವುದರಿಂದ ಸಾಕ್ಷಾತ್ ಶಾರದಾ ದೇವಿ, ಸರಸ್ವತಿ, ಗಣೇಶ ಮತ್ತು ಹಯಗ್ರೀವ ಸೇರಿದಂತೆ ವಿದ್ಯೆಗೆ ಸಂಬಂಧಿಸಿದ ಎಲ್ಲಾ ದೇವಾನುದೇವತೆಗಳ ಅನುಗ್ರಹ ಮಗುವಿಗೆ ದೊರೆಯುತ್ತದೆ ಎಂಬ ನಂಬಿಕೆಯಿದೆ. ಅಕ್ಷರಾಭ್ಯಾಸಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡುವ ನಮ್ಮ ಸಂಸ್ಕೃತಿಯಲ್ಲಿ, ವೇದಗಳಿಗೂ ಮತ್ತು ಮಂತ್ರಗಳಿಗೂ ಓಂಕಾರವು ಅತ್ಯಂತ ಪವಿತ್ರವಾಗಿದೆ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.
ಗುರೂಜಿಯವರು ಹೇಳುವಂತೆ, ಮಗುವಿನ ನಾಲಿಗೆ ಮೇಲೆ ಓಂಕಾರ ಬರೆಯುವುದು ಹಲವು ವಿಧಗಳಲ್ಲಿ ಶುಭಕರವಾಗಿದೆ. ಜಾತಕರ್ಮದ ಸಮಯದಲ್ಲಿ ತಂದೆ, ತಾಯಿ, ಗುರುಗಳು ಅಥವಾ ವೇದ ಮಂತ್ರಗಳನ್ನು ಪಠಿಸುವವರು ಈ ಓಂಕಾರವನ್ನು ಬರೆಯಬಹುದು. ಓಂಕಾರವನ್ನು ಬರೆಯಲು ತುಪ್ಪ ಮತ್ತು ಜೇನುತುಪ್ಪವನ್ನು ಬೆರೆಸಿ ಬಳಸಲಾಗುತ್ತದೆ. ಇದರ ಜೊತೆಗೆ, ಬಂಗಾರದ ಕಡ್ಡಿ, ತುಳಸಿಯ ರೆಂಬೆಯ ಕಡ್ಡಿ, ಶ್ರೀಗಂಧದ ಕಡ್ಡಿ, ಪವಿತ್ರ ಬಿಲ್ವಪತ್ರೆಯ ಕಡ್ಡಿ, ತಾಮ್ರದ ಕಡ್ಡಿ, ಬೆಳ್ಳಿಯ ಕಡ್ಡಿ ಅಥವಾ ಬಂಗಾರದ ಕಡ್ಡಿಗಳನ್ನು ಬಳಸಿ ಮಗುವಿನ ನಾಲಿಗೆ ಮೇಲೆ ಓಂಕಾರವನ್ನು ಬರೆಯಲಾಗುತ್ತದೆ.
ಈ ಕ್ರಿಯೆಯಿಂದ ಮಗುವಿನ ಸಪ್ತ ಚಕ್ರಗಳು ಜಾಗೃತಗೊಳ್ಳುತ್ತವೆ ಎಂದು ಹೇಳಲಾಗುತ್ತದೆ. ತುಪ್ಪವು ಪರಿಶುದ್ಧತೆಯ ಸಂಕೇತವಾಗಿದ್ದು, ಜೇನುತುಪ್ಪವು ಮಗುವಿಗೆ ಮಧುರವಾದ ಮಾತುಗಳನ್ನು ತಂದುಕೊಡುತ್ತದೆ. ಬಂಗಾರದಿಂದ ದೇಹಕ್ಕೆ ಕಾಂತಿ ದೊರೆತು, ಋಣಾತ್ಮಕ ಶಕ್ತಿಗಳು ದೂರವಾಗುತ್ತವೆ. ಆರೋಗ್ಯದ ದೃಷ್ಟಿಯಿಂದಲೂ ಈ ಓಂಕಾರವು ಮಗುವಿನ ಜ್ಞಾನ ವೃದ್ಧಿಗೆ ಸಹಕಾರಿಯಾಗಿದ್ದು, ಮೆದುಳಿನ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ಆಯುರ್ವೇದದಲ್ಲೂ ಸಹ ಓಂಕಾರಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ.
ಇದನ್ನೂ ಓದಿ: ಈ ವರ್ಷ ಯುಗಾದಿ ಹಬ್ಬ ಯಾವಾಗ ? ಈ ದಿನ ಏನು ಮಾಡಬೇಕು ಮತ್ತು ಏನು ಮಾಡಬಾರದು?
ಓಂಕಾರವನ್ನು ಬರೆಯಲು ಕೆಲವು ಶುಭ ದಿನಗಳು ಮತ್ತು ತಿಥಿಗಳನ್ನು ಸೂಚಿಸಲಾಗಿದೆ. ಗುರುವಾರ, ಸೋಮವಾರ ಮತ್ತು ಶುಕ್ರವಾರಗಳು ಸೂಕ್ತವಾಗಿವೆ. ಬುಧವಾರವೂ ಪ್ರಾಶಸ್ತ್ಯ ನೀಡಬಹುದು. ವಿಶೇಷವಾಗಿ ಅಕ್ಷಯ ತೃತೀಯ, ವಿಜಯದಶಮಿ, ಯುಗಾದಿ ಮತ್ತು ವಸಂತ ಪಂಚಮಿಯಂತಹ ಪವಿತ್ರ ದಿನಗಳಲ್ಲಿ ಈ ಸಂಸ್ಕಾರವನ್ನು ಮಾಡುವುದು ಉತ್ತಮ. ಅಕ್ಷಯ ತೃತೀಯ ಹೊಸ ಆರಂಭದ ಪ್ರತೀಕವಾಗಿದ್ದು, ವಿಜಯದಶಮಿ ವಿಜಯದ ಸಂಕೇತವಾಗಿದೆ. ವಸಂತ ಪಂಚಮಿಯು ಸರಸ್ವತಿ ದೇವಿಯ ಜನ್ಮದಿನವಾಗಿದೆ. ದ್ವಿತೀಯ, ತೃತೀಯ, ಪಂಚಮಿ, ಸಪ್ತಮಿ, ದಶಮಿಯಂತಹ ಶುಭ ತಿಥಿಗಳಲ್ಲಿ ಸಂಧ್ಯಾಕಾಲ ಅಥವಾ ಬ್ರಾಹ್ಮೀ ಮುಹೂರ್ತದಲ್ಲಿ ಓಂಕಾರವನ್ನು ಬರೆಸುವುದು ಅತ್ಯಂತ ಶ್ರೇಷ್ಠ. ಪುಷ್ಯ ನಕ್ಷತ್ರ ಮತ್ತು ರವಿಯೋಗವಿರುವ ಸಂದರ್ಭಗಳಲ್ಲೂ ಇದನ್ನು ಮಾಡಬಹುದು.
ಪೂರ್ವಾಭಿಮುಖವಾಗಿ ಕುಳಿತು, ದೀಪವನ್ನು ಸಾಕ್ಷಿಯಾಗಿಟ್ಟುಕೊಂಡು, ಜೇನುತುಪ್ಪ ಮತ್ತು ತುಪ್ಪವನ್ನು ಬೆರೆಸಿ ಮಗುವಿನ ನಾಲಿಗೆ ಮೇಲೆ ಓಂಕಾರ ಬರೆಯುವುದರಿಂದ ಅದಕ್ಕೆ ಅಪಾರ ಶಕ್ತಿ ದೊರೆಯುತ್ತದೆ. ಇದನ್ನು ಮೂರು, ಐದು, ಏಳು ಅಥವಾ ಒಂಬತ್ತು ವರ್ಷಗಳ ವಯಸ್ಸಿನಲ್ಲಿ ಮಾಡುವುದು ಉತ್ತಮ ಎಂದು ಹೇಳಲಾಗುತ್ತದೆ. “ಆಚಾರವೇ ಸ್ವರ್ಗ, ಅನಾಚಾರವೇ ನರಕ” ಎಂಬ ಮಾತಿನಂತೆ, ಈ ಆಚರಣೆಗಳು ಮಗುವಿನ ಉತ್ತಮ ಭವಿಷ್ಯಕ್ಕೆ ಪೂರಕವಾಗಿವೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ