AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

India vs Australia Test Series | 5 ವಿಕೆಟ್​ ಪಡೆದ ಸಿರಾಜ್​ ಅಪರೂಪದ ಸಾಧನೆಗೆ ಅಪ್ಪನ ನೆನಪೇ ಆಸರೆ

ಸಾಂಪ್ರದಾಯಿಕ ಕ್ರಿಕೆಟ್ ಅವೃತ್ತಿಗೆ ಕಾಲಿಟ್ಟ ಮೆಲ್ಬರ್ನ್ ​ಟೆಸ್ಟ್ ಪಂದ್ಯದಲ್ಲಿ 5 ವಿಕೆಟ್​ ಪಡೆದು ಅತ್ಯುತ್ತಮ ನೋಟ್​ನೊಂದಿಗೆ ಕರೀಯರ್​ ಆರಂಭಿಸಿದ ಸಿರಾಜ್ ಅದಕ್ಕೆ ಮೊದಲು ಅನುಭವಿಸಿದ ಯಾತನೆ ಸಾಮಾನ್ಯವಾದುದಲ್ಲ.

India vs Australia Test Series | 5 ವಿಕೆಟ್​ ಪಡೆದ ಸಿರಾಜ್​ ಅಪರೂಪದ ಸಾಧನೆಗೆ ಅಪ್ಪನ ನೆನಪೇ ಆಸರೆ
ಬ್ರಿಸ್ಬೇನ್​ನಲ್ಲಿ ಇಂದು ಸ್ಮಿತ್​ರನ್ನು ಸಿರಾಜ್ ಔಟ್​ ಮಾಡಿದ ಕ್ಷಣ
ಅರುಣ್​ ಕುಮಾರ್​ ಬೆಳ್ಳಿ
| Edited By: |

Updated on:Jan 18, 2021 | 9:42 PM

Share

ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಉಮೇಶ್ ಯಾದವ್ ಮೊದಲಾದ ಪ್ರಮುಖ ಬೌಲರ್​ಗಳು ಗಾಯಗೊಂಡು ಸರಣಿಯಿಂದ ಹೊರನಡೆದ ಕಾರಣ ಟೀಮಿನಲ್ಲಿ ಸ್ಥಾನ ಗಿಟ್ಟಿಸಿದ ಹೈದರಾಬಾದಿನ 26 ವರ್ಷದ ಮೊಹಮ್ಮದ್ ಸಿರಾಜ್, ಕೇವಲ ತನ್ನ ಮೂರನೇ ಟೆಸ್ಟ್​ನಲ್ಲಿ ಇನ್ನಿಂಗ್ಸ್​ ಒಂದರಲ್ಲಿ 5 ವಿಕೆಟ್​ ಪಡೆಯುವ ಸಾಧನೆ ಮಾಡಿದ್ದಾರೆ. ನಿಮಗೆ ಗೊತ್ತಿರಲಿ, ಭಾರತೀಯ ಬೌಲರ್​ನೊಬ್ಬ 17 ವರ್ಷಗಳ ನಂತರ ಬ್ರಿಸ್ಬೇನ್​ನಲ್ಲಿ 5 ವಿಕೆಟ್ ಪಡೆಯುವ ಸಾಧನೆ ಮಾಡಿದ್ದಾನೆ. ಎಡಗೈ ವೇಗದ ಬೌಲರ್ ಜಹೀರ್​ ಖಾನ್ 2003ರಲ್ಲಿ 93 ರನ್​ಗಳಿಗೆ 5 ವಿಕೆಟ್​ ಪಡೆದಿದ್ದರು.

ಟೆಸ್ಟ್ ಕ್ರಿಕೆಟ್ ಆಡಿರದ ಇಬ್ಬರು (ನಟರಾಜನ್ ಮತ್ತು ಸುಂದರ್) ಮತ್ತು ತನ್ನ ಪಾದಾರ್ಪಣೆಯ ಟೆಸ್ಟ್​ನಲ್ಲಿ ಕೇವಲ 10 ಎಸೆತಗಳನ್ನು ಬೌಲ್ ಮಾಡಿದ ನಂತರ ಗಾಯಗೊಂಡು ನೇಫಥ್ಯಕ್ಕೆ ಸರಿದ ಒಬ್ಬ ಬೌಲರ್ (ಠಾಕೂರ್) ಮತ್ತು ಕೇವಲ ಎರಡನೇ ಟೆಸ್ಟ್​ ಆಡುತ್ತಿರುವ (ನವದೀಪ್ ಸೈನಿ) ಬೌಲರ್​ಗಳ ಪಡೆಯ ನೇತೃತ್ವವಹಿಸಿದ ಸಿರಾಜ್ ಸೋಮವಾರದಂದು ನೀಡಿರುವ ಪ್ರದರ್ಶನ ಕ್ರಿಕೆಟ್ ಪ್ರೇಮಿಗಳ ಮನದಲ್ಲಿ ಬಹಳ ದಿನ ಉಳಿಯಲಿದೆ.

ಮೆಲ್ಬರ್ನ್​ ಟೆಸ್ಟ್ ಪಂದ್ಯದಲ್ಲಿ 5 ವಿಕೆಟ್​ ಪಡೆದು ಅತ್ಯುತ್ತಮ ನೋಟ್​ನೊಂದಿಗೆ ಟೆಸ್ಟ್​ ಬದುಕು ಆರಂಭಿಸಿದ ಸಿರಾಜ್ ಪಾದಾರ್ಪಣೆಗೆ ಮೊದಲು ಅನುಭವಿಸಿದ ಯಾತನೆ ಸಾಮಾನ್ಯವಾದುದಲ್ಲ. ಸರಣಿ ಆರಂಭಕ್ಕೆ ಕೆಲವೇ ದಿನಗಳ ಮೊದಲು ಅವರ ತಂದೆ ತೀರಿಕೊಂಡರು. ಕೊವಿಡ್​-19ಗೆ ಸಂಬಂಧಿಸಿದ ಶಿಷ್ಟಾಚಾರಗಳಿಂದಾಗಿ ಅವರು ಅಪ್ಪನನ್ನು ಕೊನೆಯ ಬಾರಿ ನೋಡಲೂ ಸಾಧ್ಯವಾಗಲಿಲ್ಲ. ಒತ್ತರಿಸಿಕೊಂಡು ಬರುತ್ತಿದ್ದ ದುಃಖದೊಂದಿಗೆ ಅಮ್ಮನೊಂದಿಗೆ ಮಾತಾಡಿದಾಗ ಆಕೆಯೇ ಮಗನಲ್ಲಿ ಧೈರ್ಯ ತುಂಬಿದರು.

ತಂದೆಯೊಂದಿಗೆ ಸಿರಾಜ್

‘ನಾನು ಬಿಳಿಯುಡುಗೆ ತೊಟ್ಟು ಭಾರತಕ್ಕಾಗಿ ಟೆಸ್ಟ್​ ಆಡುವುದನ್ನು ನೋಡುವ ಮಹತ್ವಾಕಾಂಕ್ಷೆ ನನ್ನ ತಂದೆ ಇಟ್ಟುಕೊಂಡಿದ್ದರು. ಆದರೆ ಅವರಿಗದು ಸಾಧ್ಯವಾಗಲಿಲ್ಲ. ನಾವು ಏನೋ ಅಂದುಕೊಳ್ಳುತ್ತೇವೆ, ಆದರೆ ವಿಧಿ ತನ್ನ ಆಟವನ್ನು ನಮ್ಮ ಬದುಕಿನಲ್ಲಿ ಆಡಿಬಿಡುತ್ತದೆ’ ಎಂದು ತಂದೆ ಸಾವಿನ ನಂತರ ಸಿರಾಜ್ ಹೇಳಿದ್ದರು.

ಬ್ರಿಸ್ಬೇನ್​ ಟೆಸ್ಟ್​ನ ಮೊದಲ ಇನ್ನಿಂಗ್ಸ್​ನಲ್ಲಿ 77ರನ್​ಗಳಿಗೆ 1 ವಿಕೆಟ್​ ಪಡೆದಿದ್ದ ಸಿರಾಜ್ ಎರಡನೆ ಇನ್ನಿಂಗ್ಸ್​​ನಲ್ಲಿಂದು, ಮೊದಲ ಇನ್ನಿಂಗ್ಸ್​ನಲ್ಲಿ ಆಕರ್ಷಕ ಶತಕ ಬಾರಿಸಿದ್ದ ಲಬುಶೇನ್ ಅವರ ವಿಕೆಟ್ ಮೊದಲು ಕಬಳಿಸಿದರು. ಮೂರು ಎಸೆತಗಳ ನಂತರ ಎಡಚ ಮ್ಯಾಥ್ಯೂ ವೇಡ್ ಅವರ ವಿಕೆಟ್ ಕಿತ್ತರು. ಲಂಚ್​ ವಿರಾಮದ ನಂತರ ಅತ್ಯಂತ ಬೆಲೆಬಾಳುವ ವಿಕೆಟ್ ಅವರಿಗೆ ದೊರಕಿತು. 55 ರನ್​ ಗಳಿಸಿ ಸೆಟ್ಲ್​ ಆಗಿದ್ದ ಆಸ್ಸೀಗಳ ರನ್ ಮಶೀನ್ ಸ್ಟೀವ್ ಸ್ಮಿತ್ ಅವರನ್ನು ಹೈದರಾಬಾದಿ ಔಟ್​ ಮಾಡಿದರು. ಆಮೇಲೆ ಕಾಂಗರೂಗಳ ಬಾಲವನ್ನೂ ಕತ್ತರಿಸಿ 5 ವಿಕಟ್​ ಪಡೆಯುವ ಸಾಧನೆ ಮಾಡಿದರು.

ಸಿರಾಜ್ ಮತ್ತು ಜಹೀರ್​ ಅವರನ್ನು ಬಿಟ್ಟರೆ ಕೇವಲ ಮೂವರು ಭಾರತೀಯ ಬೌಲರ್​ಗಳು ಬ್ರಿಸ್ಬೇನ್​ನಲ್ಲಿ ಇನ್ನಿಂಗ್ಸೊಂದರಲ್ಲಿ 5 ವಿಕೆಟ್ ಪಡೆಯುವ ಸಾಧನೆ ಮಾಡಿದ್ದಾರೆ. 1968ರಲ್ಲಿ ಕರ್ನಾಟಕದ ಇಎಎಸ್ ಪ್ರಸನ್ನ (6/104), ಬಿಷನ್ ಸಿಂಗ್ ಬೇಡಿ (5/55) ಈ ಸಾಧನೆ ಮಾಡಿದ್ದರು. 1977ರ ಸರಣಿಯಲ್ಲಿ, ಅದೇ ಸರಣಿ ಮತ್ತು ಅದೇ ಟೆಸ್ಟ್​ನ ಎರಡನೇ ಇನ್ನಿಂಗ್ಸ್​ನಲ್ಲಿ ಮದನ್ ಲಾಲ್ (5/72) ಐದು ವಿಕೆಟ್​ ಪಡೆದಿದ್ದರು.

ಗಬ್ಬಾ ಮೈದಾನದಲ್ಲಿ 5 ವಿಕೆಟ್ ಪಡೆದ ಪ್ರವಾಸಿ ತಂಡಗಳ ವೇಗದ ಬೌಲರ್​ಗಳಲ್ಲಿ ಇಂಗ್ಲೆಂಡಿನ ಹೆರಾಲ್ಟ್ ಲಾರ್​ವುಡ್​ 1928ರಲ್ಲಿ, ಅದೇ ದೇಶದವರಾದ ಕೆನ್ ಶಟ್ಲ್​ವರ್ತ್ 1970ರಲ್ಲಿ, ಗ್ರಹಾಂ ಡಿಲ್ಲಿ 1986ರಲ್ಲಿ, ಆಲನ್ ಮುಲ್ಲಾಲಿ 1998ರಲ್ಲಿ ಮತ್ತು ಶ್ರೀಲಂಕಾದ ಗ್ರೀಮ್ ಲ್ಯಾಬ್ರಾಯ್ (1998) ಕೂಡ ಈ ಸಾಧನೆ ಮಾಡಿದ್ದರು.

Published On - 7:21 pm, Mon, 18 January 21

Follow Us
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?