IPL 2024: ಕಾವ್ಯಾ ಮಾರನ್ ಕಣ್ಣೀರಿಗೆ ಮರುಗಿದ ಬಿಗ್ ಬಿ ಅಮಿತಾಭ್ ಬಚ್ಚನ್

IPL 2024: ಈ ಸಲ ಕಪ್ ನಮ್ಮದೆ ಎಂಬ ಭರವಸೆ ಇಟ್ಟಿದ್ದ ಕಾವ್ಯಾಗೆ ಫೈನಲ್ ಪಂದ್ಯ ಸೋಲು ಭಾರಿ ಆಘಾತ ನೀಡಿತ್ತು. ಹೀಗಾಗಿ ಕಾವ್ಯಾಗೆ ಎಸ್​ಆರ್​ಹೆಚ್ ಸೋತ ಬಳಿಕ ಕಣ್ಣೀರನ್ನು ಬಚ್ಚಿಡಲು ಸಾಧ್ಯವಾಗಲಿಲ್ಲ. ಸೋಲಿನ ಆಘಾತದ ನಡುವೆಯೂ ಪ್ರೇಕ್ಷಕರತ್ತ ಕೈಬೀಸಿದ ಕಾವ್ಯಾ ಅಳುತ್ತಲೆ ತಂಡವನ್ನು ಚಪ್ಪಾಳೆ ತಟ್ಟುತ್ತ ಪ್ರೋತ್ಸಾಹಿಸಿದರು.

IPL 2024: ಕಾವ್ಯಾ ಮಾರನ್ ಕಣ್ಣೀರಿಗೆ ಮರುಗಿದ ಬಿಗ್ ಬಿ ಅಮಿತಾಭ್ ಬಚ್ಚನ್
ಅಮಿತಾಭ್ ಬಚ್ಚನ್, ಕಾವ್ಯಾ ಮಾರನ್

Updated on: May 27, 2024 | 6:57 PM

ಸನ್ ರೈಸರ್ಸ್ ಹೈದರಾಬಾದ್ (SRH) ತಂಡದ ಮಾಲಕಿ ಕಾವ್ಯಾ ಮಾರನ್ (Kavya Maran) ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಪ್ರತಿಯೊಬ್ಬ ಐಪಿಎಲ್ (IPL) ಅಭಿಮಾನಿಗೂ ಈ ಚೆಂದುಳ್ಳಿ ಚೆಲುವೆಯ ಮುಖ ಪರಿಚಯ ಇದ್ದೇ ಇರುತ್ತದೆ. ಇದಕ್ಕೆ ಕಾರಣ ಪಂದ್ಯದ ವೇಳೆ ಕಾವ್ಯಾ ಮಾರನ್ ಹೈದರಾಬಾದ್ ತಂಡಕ್ಕೆ ನೀಡುವ ಪ್ರೋತ್ಸಾಹ, ತಂಡ ಗೆದ್ದಾಗ ಅವರ ಸಂಭ್ರಮಾಚರಣೆ, ತಂಡ ಸೋತಗ ಅವರು ನೀಡುವ ಬೇಸರದ ನೋಟ ಎಂತಹವರ ಮನಸ್ಸು ಕರಗುವಂತೆ ಮಾಡುತ್ತದೆ. ನಿನ್ನೆಯ ಪಂದ್ಯದಲ್ಲೂ ಅಷ್ಟೇ, ಚೆನ್ನೈನ ಚಿದಂಬರಂ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ತನ್ನ ಒಡೆತನದ ಸನ್‌ರೈಸರ್ಸ್ ಹೈದರಾಬಾದ್ ತಂಡ ಗೆದ್ದೇ ಗೆಲ್ಲುತ್ತದೆ ಎಂಬ ನಿರೀಕ್ಷೆಯೊಂದಿಗೆ ಕಾವ್ಯಾ ಮೈದಾನಕ್ಕೆ ಬಂದಿದ್ದರು. ಆದರೆ ಅಲ್ಲಿ ನಡೆದಿದ್ದೆ ಬೇರೆ. ಇಡೀ ಪಂದ್ಯದಲ್ಲಿ ಎಸ್​ಆರ್​ಹೆಚ್ ತಂಡದ ಗೆಲುವಿನ ಹಸಿವು ಎಲ್ಲಿಯೂ ಕಾಣಲಿಲ್ಲ. ಹೀಗಾಗಿ ತಂಡ ಹೀನಾಯ ಸೋಲು ಅನುಭವಿಸಿತ್ತು. ತಂಡದ ಈ ಸೋಲು ಕಾವ್ಯಾಗೆ ಎಷ್ಟು ಬೇಸರ ತರಿಸಿತ್ತೆಂದರೆ, ಪಂದ್ಯ ಮುಗಿದ ಬಳಿಕ ಕಾವ್ಯಾ ಮಾರನ್ ಗ್ಯಾಲರಿಯಲ್ಲಿ ಕುಳಿತು ಕಣ್ಣೀರು ಸುರಿಸಿದ್ದರು. ಇದು ನೋಡುಗರಿಗೆ ಭಾರಿ ನೋವು ತರಿಸಿತ್ತು.

ಕಣ್ಣೀರಿಟ್ಟ ಕಾವ್ಯಾ ಮಾರನ್

ಈ ಸಲ ಕಪ್ ನಮ್ಮದೆ ಎಂಬ ಭರವಸೆ ಇಟ್ಟಿದ್ದ ಕಾವ್ಯಾಗೆ ಫೈನಲ್ ಪಂದ್ಯ ಸೋಲು ಭಾರಿ ಆಘಾತ ನೀಡಿತ್ತು. ಹೀಗಾಗಿ ಕಾವ್ಯಾಗೆ ಎಸ್​ಆರ್​ಹೆಚ್ ಸೋತ ಬಳಿಕ ಕಣ್ಣೀರನ್ನು ಬಚ್ಚಿಡಲು ಸಾಧ್ಯವಾಗಲಿಲ್ಲ. ಸೋಲಿನ ಆಘಾತದ ನಡುವೆಯೂ ಪ್ರೇಕ್ಷಕರತ್ತ ಕೈಬೀಸಿದ ಕಾವ್ಯಾ ಅಳುತ್ತಲೆ ತಂಡವನ್ನು ಚಪ್ಪಾಳೆ ತಟ್ಟುತ್ತ ಪ್ರೋತ್ಸಾಹಿಸಿದರು. ಕಾವ್ಯಾ ಅವರ ಈ ಕಣ್ಣೀರಿನ ವಿಡಿಯೋ ಸೋಶೀಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿತ್ತು. ಇದೀಗ ಆ ವಿಡಿಯೋ ನೋಡಿದ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಕೂಡ ತೀವ್ರ ಬೇಸರಗೊಂಡಿದ್ದಾರೆ.

ಮರುಗಿದ ಅಮಿತಾಭ್

ಈ ಬಗ್ಗೆ ತಮ್ಮ ಬ್ಲಾಗ್‌ನಲ್ಲಿ ಬರೆದುಕೊಂಡಿರುವ ಅಮಿತಾಭ್, ಕೆಕೆಆರ್​ ಗೆಲುವಿಗೆ ಶುಭ ಹಾರೈಸಿದ್ದಾರೆ. ಇದರೊಂದಿಗೆ ಹೈದರಾಬಾದ್ ಸೋಲಿನಿಂದ ನಿರಾಸೆಯಾಗಿದೆ ಎಂದು ಬರೆದುಕೊಂಡಿದ್ದಾರೆ. ‘ಐಪಿಎಲ್ ಫೈನಲ್ ಮುಗಿದಿದೆ ಮತ್ತು ಕೆಕೆಆರ್ ಅದ್ಭುತ ಗೆಲುವು ಸಾಧಿಸಿದೆ. ಫೈನಲ್ ಪಂದ್ಯದಲ್ಲಿ ಎಸ್‌ಆರ್‌ಹೆಚ್ ತಂಡವನ್ನು ಕೆಕೆಆರ್‌ ಏಕಪಕ್ಷೀಯವಾಗಿ ಸೋಲಿಸಿತು. ಎಸ್‌ಆರ್‌ಹೆಚ್ ಉತ್ತಮ ತಂಡವಾಗಿರುವುದರಿಂದ ಮತ್ತು ಇತರ ಪಂದ್ಯಗಳನ್ನು ಆಡುವಾಗ ಅವರಿಂದ ಉತ್ತಮ ಪ್ರದರ್ಶನಗಳನ್ನು ಕಂಡಿದ್ದರಿಂದ ಅನೇಕ ರೀತಿಯಲ್ಲಿ ನಿರಾಶೆಯಾಗಿದೆ’.

‘ಅದರಲ್ಲೂ ತಂಡದ ಮಾಲಕಿ ಕಾವ್ಯಾ ಮಾರನ್ ಕಣ್ಣೀರಿಡುವುದನ್ನು ನೋಡುವುದು ನೋವಿನ ಸಂಗತಿಯಾಗಿದೆ. ತಂಡದ ಸೋಲಿನ ನಂತರ ಭಾವುಕಳಾದ ಕಾವ್ಯಾ ಕಣ್ಣೀರು ಸುರಿಸತೊಡಗಿದಳು. ತನ್ನ ಭಾವನೆಗಳನ್ನು ಕ್ಯಾಮರಾಗೆ ತೋರಿಸಲು ಸಾಧ್ಯವಾಗದೆ ಮುಖವನ್ನು ಮರೆಮಾಚಿದರು. ಚಿಂತಿಸುವ ಅಗತ್ಯವಿಲ್ಲ, ನಾಳೆ ನಿನ್ನದಮ್ಮಾ’ ಎಂದು ಬರೆಯುವ ಮೂಲಕ ಅಮಿತಾಭ್, ಕಾವ್ಯಾಗೆ ಸಮಾಧಾನ ಮಾಡುವ ಕೆಲಸ ಮಾಡಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:53 pm, Mon, 27 May 24

pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Follow Us