ಟೀಮ್ ಇಂಡಿಯಾ ಸಿಬ್ಬಂದಿ ವರ್ಗಗಳ ಆಯ್ಕೆಗೆ ಮುಂದಾದ ಗಂಭೀರ್: ಪಟ್ಟಿಯಲ್ಲಿ ನಾಲ್ವರು ಮಾಜಿ ಕ್ರಿಕೆಟಿಗರು

Gautam Gambhir: ಟೀಮ್ ಇಂಡಿಯಾದ ನೂತನ ಕೋಚ್ ಆಗಿ ಆಯ್ಕೆಯಾಗಿರುವ ಗೌತಮ್ ಗಂಭೀರ್ ಶ್ರೀಲಂಕಾ ವಿರುದ್ಧದ ಸರಣಿಯೊಂದಿಗೆ ಕಾರ್ಯಾರಂಭ ಮಾಡಲಿದ್ದಾರೆ. ಆದರೆ ಅದಕ್ಕೂ ಮುನ್ನ ಸಿಬ್ಬಂದಿ ವರ್ಗಗಳ ಆಯ್ಕೆಗೆ ಗಂಭೀರ್ ಮುಂದಾಗಿದ್ದಾರೆ. ಈ ಸಿಬ್ಬಂದಿ ವರ್ಗಗಳ ಪಟ್ಟಿಯಲ್ಲಿ ಟೀಮ್ ಇಂಡಿಯಾದ ನಾಲ್ವರು ಮಾಜಿ ಆಟಗಾರರ ಹೆಸರು ಮುಂಚೂಣಿಯಲ್ಲಿದೆ.

ಟೀಮ್ ಇಂಡಿಯಾ ಸಿಬ್ಬಂದಿ ವರ್ಗಗಳ ಆಯ್ಕೆಗೆ ಮುಂದಾದ ಗಂಭೀರ್: ಪಟ್ಟಿಯಲ್ಲಿ ನಾಲ್ವರು ಮಾಜಿ ಕ್ರಿಕೆಟಿಗರು
Vinay-Zaheer-Balaji

Updated on: Jul 11, 2024 | 8:20 AM

ಭಾರತ ತಂಡದ ಕೋಚ್ ಗೌತಮ್ ಗಂಭೀರ್ (Gautam Gambhir) ಆಯ್ಕೆಯಾಗಿದ್ದಾರೆ. ಈ ನೇಮಕದ ಬೆನ್ನಲ್ಲೇ ಇದೀಗ ಗಂಭೀರ್ ತನ್ನ ಸಿಬ್ಬಂದಿ ವರ್ಗಗಳ ಆಯ್ಕೆಗೆ ಮುಂದಾಗಿದ್ದಾರೆ. ಈ ಆಯ್ಕೆ ಪಟ್ಟಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಸಹಾಯಕ ಕೋಚ್ ಅಭಿಷೇಕ್ ನಾಯರ್ ಹೆಸರು ಮುಂಚೂಣಿಯಲ್ಲಿದೆ. ಕ್ರಿಕ್​ಬಝ್ ವರದಿ ಪ್ರಕಾರ, ಟೀಮ್ ಇಂಡಿಯಾದ ಮಾಜಿ ಆಟಗಾರ ಅಭಿಷೇಕ್ ನಾಯರ್ ಭಾರತ ತಂಡದ ಸಹಾಯಕ ಕೋಚ್ ಆಗಿ ಕಾಣಿಸಿಕೊಳ್ಳುವುದು ಬಹುತೇಕ ಖಚಿತ.

ಈ ಹಿಂದೆ ಕೆಕೆಆರ್ ತಂಡದಲ್ಲಿ ಜೊತೆಯಾಗಿ ಕಾರ್ಯ ನಿರ್ವಹಿಸಿರುವ ಕಾರಣ ಅಭಿಷೇಕ್ ಅವರನ್ನು ರಾಷ್ಟ್ರೀಯ ತಂಡದ ಸಿಬ್ಬಂದಿ ವರ್ಗಕ್ಕೆ ಸೇರಿಸಲು ಗಂಭೀರ್ ಆಸಕ್ತಿ ಹೊಂದಿದ್ದಾರೆ. ಹೀಗಾಗಿ ಸಹಾಯಕ ಕೋಚ್ ಅಥವಾ ಬ್ಯಾಟಿಂಗ್ ಕೋಚ್ ಆಗಿ ಅಭಿಷೇಕ್ ನಾಯರ್ ಟೀಮ್ ಇಂಡಿಯಾ ಜೊತೆ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ಹಾಗೆಯೇ ಬೌಲಿಂಗ್ ಕೋಚ್​ ಪಟ್ಟಿಯಲ್ಲಿ ಮೂವರ ಹೆಸರು ಹೆಸರು ಕಾಣಿಸಿಕೊಂಡಿದೆ. ಇಲ್ಲಿ ಕರ್ನಾಟಕದ ಮಾಜಿ ವೇಗಿ ವಿನಯ್ ಕುಮಾರ್ ಹೆಸರು ಮುಂಚೂಣಿಯಲ್ಲಿದ್ದರೆ, ಪ್ರತಿ ಸ್ಪರ್ಧಿಗಳಾಗಿ ಭಾರತ ತಂಡದ ಮಾಜಿ ವೇಗಿಗಳಾದ ಝಹೀರ್ ಖಾನ್ ಹಾಗೂ ಲಕ್ಷ್ಮಿಪತಿ ಬಾಲಾಜಿ ಹೆಸರುಗಳು ಕೂಡ ಕಾಣಿಸಿಕೊಂಡಿದೆ.

ವಿನಯ್ ಕುಮಾರ್ ಹಾಗೂ ಲಕ್ಷ್ಮಿಪತಿ ಬಾಲಾಜಿ ಈ ಹಿಂದೆ ಗೌತಮ್ ಗಂಭೀರ್ ನಾಯಕತ್ವದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಪರ ಆಡಿದ್ದರು. ಹೀಗಾಗಿ ಇವರಿಬ್ಬರಲ್ಲಿ ಒಬ್ಬರು ಭಾರತ ತಂಡದ ಬೌಲಿಂಗ್ ಕೋಚ್ ಆಗಿ ಕಾಣಿಸಿಕೊಂಡರೂ ಅಚ್ಚರಿಪಡಬೇಕಿಲ್ಲ.

ಹಾಗೆಯೇ ಫೀಲ್ಡಿಂಗ್ ಕೋಚ್ ಆಗಿ ಟಿ ದಿಲೀಪ್ ಮುಂದುವರೆಯಲಿದ್ದಾರೆ ಎಂದು ಕ್ರಿಕ್​ಬಝ್ ವರದಿ ಹೇಳಿದೆ. ದಿಲೀಪ್ ಅವರು ಈ ಹಿಂದೆ ರಾಹುಲ್ ದ್ರಾವಿಡ್ ಅವರ ಸಾರಥ್ಯದಲ್ಲಿ ಟೀಮ್ ಇಂಡಿಯಾದ ಫೀಲ್ಡಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು. ಅವರ ಕಾರ್ಯ ವೈಖರಿ ಬಗ್ಗೆ ಮೆಚ್ಚುಗೆ ಹೊಂದಿರುವ ಗಂಭೀರ್ ಇದೀಗ ಅವರನ್ನೇ ಫೀಲ್ಡಿಂಗ್ ಕೋಚ್ ಆಗಿ ಮುಂದುವರೆಸುವ ಸಾಧ್ಯತೆಯಿದೆ.

ಅದರಂತೆ ಶೀಘ್ರದಲ್ಲೇ ಗೌತಮ್ ಗಂಭೀರ್ ತಮ್ಮ ಸಿಬ್ಬಂದಿ ವರ್ಗಗಳ ಪಟ್ಟಿಯನ್ನು ಬಿಸಿಸಿಐಗೆ ಸಲ್ಲಿಸಲಿದ್ದು, ಈ ಪಟ್ಟಿಗೆ ಅನುಮೋದನೆ ಸಿಕ್ಕ ಬಳಿಕ ಕೋಚ್ ಹಾಗೂ ಸಿಬ್ಬಂದಿಗಳು ಮುಂದಿನ ಸರಣಿಗಾಗಿ ತಯಾರಿ ಆರಂಭಿಸಲಿದ್ದಾರೆ.

ಇದನ್ನೂ ಓದಿ: KL Rahul: ಕೆಎಲ್ ರಾಹುಲ್ RCBಗೆ ನಾಯಕರಾಗ್ತಾರಾ?

ಗಂಭೀರ್ ಪದಗ್ರಗಹಣ ಯಾವಾಗ?

ಶ್ರೀಲಂಕಾ ವಿರುದ್ಧದ ಸರಣಿಯ ಮೂಲಕ ಗೌತಮ್ ಗಂಭೀರ್ ಭಾರತ ತಂಡದ ಕೋಚ್ ಆಗಿ ಹೊಸ ಇನಿಂಗ್ಸ್ ಆರಂಭಿಸಲಿದ್ದಾರೆ. ಈ ಸರಣಿಯು ಜುಲೈ 27 ರಿಂದ ಶುರುವಾಗುವ ಸಾಧ್ಯತೆಯಿದೆ. ಅಂದರೆ ಝಿಂಬಾಬ್ವೆ ವಿರುದ್ಧದ ಸರಣಿ ಮುಕ್ತಾಯದ ಬೆನ್ನಲ್ಲೇ ಭಾರತ ತಂಡವು ಶ್ರೀಲಂಕಾ ವಿರುದ್ಧ 6 ಪಂದ್ಯಗಳ ಸರಣಿ ಆಡಲಿದೆ. ಈ ಸರಣಿಯಲ್ಲಿ 3 ಏಕದಿನ ಮತ್ತು 3 ಟಿ20 ಪಂದ್ಯಗಳನ್ನಾಡಲಾಗುತ್ತದೆ. ಈ ಸರಣಿಯ ಮೂಲಕ ಗಂಭೀರ್ ಕೋಚ್ ಆಗಿ ಪಾದರ್ಪಣೆ ಮಾಡಲಿದ್ದಾರೆ.