IPL 2027: KKRಗೆ ಹಾರ್ದಿಕ್ ಪಾಂಡ್ಯ?

ಐಪಿಎಲ್ 2027ರ ಸೀಸನ್‌ಗೂ ಮುನ್ನವೇ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಕೋಲ್ಕತ್ತಾ ನೈಟ್ ರೈಡರ್ಸ್ (KKR) ಸೇರಲಿದ್ದಾರೆ ಎಂಬ ವದಂತಿಗಳು ಕ್ರಿಕೆಟ್ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಸಿವೆ. ಇತ್ತೀಚೆಗೆ ಕೆಕೆಆರ್ ಅಡ್ಮಿನ್ ಹಂಚಿಕೊಂಡ ವರುಣ್ ಚಕ್ರವರ್ತಿ ಮತ್ತು ಹಾರ್ದಿಕ್ ಪಾಂಡ್ಯ ಅವರ ಜಂಟಿ ವಿಡಿಯೋಗೆ "ವೈಟ್ ಆಫ್ ಇಟ್..." (White of it...) ಎಂಬ ನಿಗೂಢ ಟ್ಯಾಗ್ ಲೈನ್ ನೀಡಿರುವುದು ಈ ಅನುಮಾನಗಳಿಗೆ ಮತ್ತಷ್ಟು ಪುಷ್ಟಿ ನೀಡಿದೆ.

IPL 2027: KKRಗೆ ಹಾರ್ದಿಕ್ ಪಾಂಡ್ಯ?
Hardik Pandya
Image Credit source: x.com

Updated on: Aug 13, 2026 | 8:35 AM

ಐಪಿಎಲ್ 2027ರ ಸೀಸನ್‌ ಆರಂಭಕ್ಕೂ ಮುನ್ನ, ಮುಂಬೈ ಇಂಡಿಯನ್ಸ್ (MI) ತಂಡದ ನಾಯಕ ಹಾರ್ದಿಕ್ ಪಾಂಡ್ಯ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡವನ್ನು ಸೇರಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಇದಕ್ಕೆ ಮುಖ್ಯ ಕಾರಣ ಇತ್ತೀಚೆಗೆ ಕೆಕೆಆರ್ ತನ್ನ ಅಧಿಕೃತ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡ ಒಂದು ಸಣ್ಣ ವಿಡಿಯೋ.

ವೈರಲ್ ವಿಡಿಯೋದಲ್ಲಿ ಏನಿದೆ?

ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್ (CoE) ನಲ್ಲಿ ಕೆಕೆಆರ್ ತಂಡದ ಸ್ಟಾರ್ ಸ್ಪಿನ್ನರ್ ವರುಣ್ ಚಕ್ರವರ್ತಿ ಗಾಯದ ಸಮಸ್ಯೆಯಿಂದ ಚೇತರಿಸಿಕೊಳ್ಳಲು ತರಬೇತಿ ಪಡೆಯುತ್ತಿದ್ದರು. ಈ ವೇಳೆ ಅಲ್ಲಿಯೇ ಇದ್ದ ಹಾರ್ದಿಕ್ ಪಾಂಡ್ಯ, ವರುಣ್ ಚಕ್ರವರ್ತಿಯವರ ವೇಟ್ ಲಿಫ್ಟಿಂಗ್​ ಶೈಲಿಯನ್ನು ತಮಾಷೆಯಾಗಿ ನಕಲಿ ಮಾಡುತ್ತಿರುವುದು ವಿಡಿಯೋದ ಹಿನ್ನೆಲೆಯಲ್ಲಿ ಕಂಡುಬಂದಿದೆ. ಕೆಕೆಆರ್ ಈ ವಿಡಿಯೋವನ್ನು ಪೋಸ್ಟ್ ಮಾಡಿದ ಬೆನ್ನಲ್ಲೇ, ಹಾರ್ದಿಕ್ ಮುಂಬೈ ತಂಡವನ್ನು ತೊರೆದು ಕೆಕೆಆರ್ ಕ್ಯಾಂಪ್ ಸೇರುತ್ತಿದ್ದಾರೆ ಎಂಬ ವದಂತಿಗಳು ಹರಡಲಾರಂಭಿಸಿದವು.

ಈ ವಿಡಿಯೋಗೆ ಕೆಕೆಆರ್ ಖಾತೆಯ ಅಡ್ಮಿನ್ “ವೈಟ್ ಆಫ್ ಇಟ್…” (White of it…) ಎಂಬ ನಿಗೂಢ ಟ್ಯಾಗ್ ಲೈನ್ ನೀಡಿದ್ದಾರೆ. ಈ ವಿಶಿಷ್ಟ ಕ್ಯಾಪ್ಷನ್ ನೋಡಿದ ಕೆಕೆಆರ್ ಅಭಿಮಾನಿಗಳು, ಇದು ಖಂಡಿತವಾಗಿಯೂ ಹಾರ್ದಿಕ್ ಪಾಂಡ್ಯ ತಂಡಕ್ಕೆ ಎಂಟ್ರಿ ಕೊಡಲಿರುವ ಮುನ್ಸೂಚನೆ ಅಥವಾ ಸುಳಿವು ಎಂದೇ ಭಾವಿಸುತ್ತಿದ್ದಾರೆ. ಅಡ್ಮಿನ್ ಅವರ ಈ ಒಂದೇ ಒಂದು ಟ್ಯಾಗ್ ಲೈನ್ ಸೋಷಿಯಲ್ ಮೀಡಿಯಾದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದು, ವಿಡಿಯೋ ಭಾರಿ ಪ್ರಮಾಣದಲ್ಲಿ ವೈರಲ್ ಆಗಲು ಮುಖ್ಯ ಕಾರಣವಾಗಿದೆ.

ವರ್ಗಾವಣೆ ಚರ್ಚೆಯ ಹಿಂದಿನ ಅಸಲಿ ಸತ್ಯ:

ಮೂಲಗಳ ಪ್ರಕಾರ, ಈ ವರ್ಗಾವಣೆ ಕುರಿತು ಉಭಯ ಫ್ರಾಂಚೈಸಿಗಳ ನಡುವೆ ಮಾತುಕತೆಗಳು ನಡೆದಿದ್ದರೂ, ಸದ್ಯಕ್ಕೆ ಯಾವುದೇ ಅಧಿಕೃತ ಒಪ್ಪಂದ ಆಗಿಲ್ಲ. ಮುಂಬೈ ಇಂಡಿಯನ್ಸ್ ವಕ್ತಾರರು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, “ತಂಡವು ಪ್ರಸ್ತುತ ಕಳೆದ ಸೀಸನ್‌ನ ಪ್ರದರ್ಶನದ ವಿಮರ್ಶೆಯಲ್ಲಿದ್ದು, ಯಾವುದೇ ಆಟಗಾರರ ಟ್ರೇಡಿಂಗ್ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿಲ್ಲ” ಎಂದು ತಿಳಿಸಿದ್ದಾರೆ.

ಹೊಸ ನಾಯಕನ ಅಗತ್ಯತೆ!

ಶ್ರೇಯಸ್ ಅಯ್ಯರ್ ಮತ್ತು ಅಜಿಂಕ್ಯ ರಹಾನೆ ಅವರ ನಿರ್ಗಮನದ ಬಳಿಕ ಕೆಕೆಆರ್ ತಂಡಕ್ಕೆ ಒಬ್ಬ ಅನುಭವಿ ಭಾರತೀಯ ನಾಯಕನ ಅಗತ್ಯವಿದೆ. ಹಾರ್ದಿಕ್‌ರನ್ನು ತಂಡಕ್ಕೆ ಸೇರಿಸಿಕೊಳ್ಳಲು ಕೆಕೆಆರ್ ಉತ್ಸುಕವಾಗಿದ್ದರೂ, ಮುಂಬೈ ಇಂಡಿಯನ್ಸ್ ಇಟ್ಟ ಬದಲಿ ಆಟಗಾರರ ಬೇಡಿಕೆಗೆ ಕೆಕೆಆರ್ ಒಪ್ಪಿಲ್ಲ ಎನ್ನಲಾಗಿದೆ.

ಇದನ್ನೂ ಓದಿ: ಗಂಭೀರ್ ಪಾಲಿಗೆ ವರವಾದ ಆಟಗಾರರ ಗಾಯದ ಸಮಸ್ಯೆ!

ಹಾರ್ದಿಕ್ ಪಾಂಡ್ಯಗೆ ಪ್ರತಿಯಾಗಿ ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ ಅಥವಾ ರಿಂಕು ಸಿಂಗ್ ಅವರಂತಹ ಸ್ಟಾರ್ ಆಟಗಾರರನ್ನು ಬಿಟ್ಟುಕೊಡಲು ಕೆಕೆಆರ್ ನಿರಾಕರಿಸಿದ್ದು, ಕೇವಲ ನಗದು ಆಧಾರಿತ ಒಪ್ಪಂದಕ್ಕೆ ಮಾತ್ರ ಒಲವು ತೋರಿದೆ. ಈ ಒಪ್ಪಂದವನ್ನು ಮುಂಬೈ ಇಂಡಿಯನ್ಸ್ ಒಪ್ಪಿಕೊಂಡರೆ, ಐಪಿಎಲ್ 2027 ರಲ್ಲಿ ಹಾರ್ದಿಕ್ ಪಾಂಡ್ಯ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Published On - 8:32 am, Thu, 13 August 26

Loading...
Unable to load recommendations.
Follow Us