‘ಪ್ರತಿಯೊಬ್ಬರಿಗೂ ಆ ಆಸೆ ಇದ್ದೇ ಇರುತ್ತದೆ’; ನಾಯಕತ್ವದ ಬಗ್ಗೆ ಮೌನ ಮುರಿದ ಜಸ್ಪ್ರೀತ್ ಬುಮ್ರಾ

|

Updated on: Aug 24, 2023 | 11:06 AM

Jasprit Bumrah: ನಾಯಕತ್ವದ ವಿಚಾರದ ಬಗ್ಗೆ ಮಾತನಾಡಿದ ಬುಮ್ರಾ, ತಂಡವನ್ನು ಮುನ್ನಡೆಸುವುದು ಯಾವಾಗಲೂ ಗೌರವದ ವಿಚಾರವಾಗಿದೆ. ಇದಕ್ಕಾಗಿ ಪ್ರತಿಯೊಬ್ಬ ಆಟಗಾರನು ಸಿದ್ಧನಾಗಿ ಕಾಯುತ್ತಿರುತ್ತಾನೆ. ತಂಡದಲ್ಲಿ ಯಾರಿಗಾದರೂ ಅಂತಹ ಅವಕಾಶ ಸಿಕ್ಕರೆ, ಅವರು ಅದನ್ನು ಬಿಡಲು ಬಯಸುವುದಿಲ್ಲ ಎಂದ ಬುಮ್ರಾ ಹೇಳಿದ್ದಾರೆ.

‘ಪ್ರತಿಯೊಬ್ಬರಿಗೂ ಆ ಆಸೆ ಇದ್ದೇ ಇರುತ್ತದೆ’; ನಾಯಕತ್ವದ ಬಗ್ಗೆ ಮೌನ ಮುರಿದ ಜಸ್ಪ್ರೀತ್ ಬುಮ್ರಾ
ಜಸ್ಪ್ರೀತ್ ಬುಮ್ರಾ
Follow us on

ಭಾರತ ಮತ್ತು ಐರ್ಲೆಂಡ್ (India vs Ireland) ನಡುವಿನ ಟಿ20 ಸರಣಿ ಮುಕ್ತಾಯವಾಗಿದೆ. ಮೂರನೇ ಮತ್ತು ಅಂತಿಮ ಟಿ20 ಪಂದ್ಯ ಮಳೆಯಿಂದ ರದ್ದಾಯಿತು. ಹೀಗಾಗಿ ಮೊದಲೆರಡು ಟಿ20 ಪಂದ್ಯಗಳನ್ನು ಗೆದ್ದಿದ್ದ ಟೀಂ ಇಂಡಿಯಾ 2-0 ಅಂತರದಲ್ಲಿ ಸರಣಿ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಜಸ್ಪ್ರೀತ್ ಬುಮ್ರಾ (Jasprit Bumrah) ನಾಯಕತ್ವದಲ್ಲಿ ಭಾರತಕ್ಕೆ ಇದು ಮೊದಲ ಟಿ20 ಸರಣಿ ಜಯವಾಗಿದೆ. ಇದು ನಾಯಕನಾಗಿ ಬುಮ್ರಾ ಅವರ ಚೊಚ್ಚಲ ಟಿ20 ಸರಣಿಯಾಗಿದ್ದು, ನಾಯಕತ್ವವಹಿಸಿದ ಮೊದಲ ಸರಣಿಯಲ್ಲೇ ಬುಮ್ರಾ ಮ್ಯಾನ್ ಆಫ್ ದಿ ಸಿರೀಸ್ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಇದರೊಂದಿಗೆ ನನಗೂ ಕೂಡ ಟೀಂ ಇಂಡಿಯಾವನ್ನು ಮುನ್ನಡೆಸುವ ಸಾಮಥ್ಯ್ರವಿದೆ ಎಂಬ ಸ್ಪಷ್ಟ ಸಂದೇಶವನ್ನು ಬುಮ್ರಾ ಬಿಸಿಸಿಐಗೆ (BCCI) ರವಾನಿಸಿದ್ದಾರೆ. ಇದಲ್ಲದೆ ಪೋಸ್ಟ್ ಮ್ಯಾಚ್ ಪ್ರೆಸೆಂಟೆಷನ್​ನಲ್ಲಿ ಮಾತನಾಡಿದ ಬುಮ್ರಾ, ನನಗೂ ಪೂರ್ಣಾವಧಿಯ ನಾಯಕನಾಗಬೇಕೆಂಬ ಬಯಕೆ ಇದೆ ಎಂಬುದನ್ನು ಸೂಕ್ಷ್ಮವಾಗಿ ಹೇಳಿದ್ದಾರೆ.

ಅಂದಹಾಗೆ, ಬುಮ್ರಾ ಈ ರೀತಿ ಹೇಳಿರುವುದು ಇದೇ ಮೊದಲಲ್ಲ. ಆದರೆ ಈಗ ಮತ್ತೊಮ್ಮೆ ತಮ್ಮ ಮಾತನ್ನು ಪುನರುಚ್ಚರಿಸಿರುವ ಬುಮ್ರಾ ಹಾರ್ದಿಕ್ ಪಾಂಡ್ಯ ಹಾಗೂ ಇತರ ಆಟಗಾರರೊಂದಿಗೆ ನಾನು ಕೂಡ ನಾಯಕತ್ವ ಆಕಾಂಕ್ಷಿ ಎಂಬುದನ್ನು ಬಹಿರಂಗ ಪಡಿಸಿದ್ದಾರೆ. ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಬಳಿಕ ಮಾತನಾಡಿದ ಬುಮ್ರಾ ನಾಯಕತ್ವದ ಬಗ್ಗೆ ಹೇಳಿದ್ದು ಹೀಗೆ.

IND vs IRE: ಟಿ20 ಕ್ರಿಕೆಟ್​ನಲ್ಲಿ ಹಾರ್ದಿಕ್- ಅಶ್ವಿನ್​ರನ್ನು ಹಿಂದಿಕ್ಕಿದ ಜಸ್ಪ್ರೀತ್ ಬುಮ್ರಾ..!

ಪ್ರತಿಯೊಬ್ಬರೂ ನಾಯಕತ್ವ ಬಯಸುತ್ತಾರೆ – ಬುಮ್ರಾ

ನಾಯಕತ್ವದ ವಿಚಾರದ ಬಗ್ಗೆ ಮಾತನಾಡಿದ ಬುಮ್ರಾ, ತಂಡವನ್ನು ಮುನ್ನಡೆಸುವುದು ಯಾವಾಗಲೂ ಗೌರವದ ವಿಚಾರವಾಗಿದೆ. ಇದಕ್ಕಾಗಿ ಪ್ರತಿಯೊಬ್ಬ ಆಟಗಾರನು ಸಿದ್ಧನಾಗಿ ಕಾಯುತ್ತಿರುತ್ತಾನೆ. ತಂಡದಲ್ಲಿ ಯಾರಿಗಾದರೂ ಅಂತಹ ಅವಕಾಶ ಸಿಕ್ಕರೆ, ಅವರು ಅದನ್ನು ಬಿಡಲು ಬಯಸುವುದಿಲ್ಲ ಎಂದ ಬುಮ್ರಾ ಹೇಳಿದ್ದಾರೆ.

ಈ ಹೇಳಿಕೆಯನ್ನು ಮತ್ತೊಮ್ಮೆ ಪುನರಾವರ್ತಿಸುವ ಮೂಲಕ ಬುಮ್ರಾ ಅವರು ನಾಯಕತ್ವದ ರೇಸ್‌ನಲ್ಲಿ ತಾವೂ ಇದ್ದಾರೆ ಎಂಬುದನ್ನು ಆಯ್ಕೆಗಾರರ ​​ಗಮನಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಇದಕ್ಕೆ ಪೂರಕವಾಗಿ ಏಷ್ಯಾಕಪ್‌ಗೆ ಟೀಂ ಇಂಡಿಯಾವನ್ನು ಆಯ್ಕೆ ಮಾಡುವ ಮೊದಲು, ಹಾರ್ದಿಕ್ ಪಾಂಡ್ಯ ಬದಲಿಗೆ ಬುಮ್ರಾ ಅವರನ್ನು ಉಪನಾಯಕರನ್ನಾಗಿ ಆಯ್ಕೆ ಮಾಡುವ ಸಾಧ್ಯತೆಗಳಿವೆ ಎಂಬ ಚರ್ಚೆ ಮುನ್ನಲೆಗೆ ಬಂದಿತ್ತು. ಆದರೆ ಮಹಾ ಈವೆಂಟ್​ಗಳು ಮುಂದಿರುವಾಗ ಉಪನಾಯಕತ್ವ ಬದಲಿಸುವುದು ಸರಿಯಲ್ಲ ಎಂಬ ನಿರ್ಧಾರಕ್ಕೆ ಆಯ್ಕೆ ಮಂಡಳಿ ಬಂದಿತ್ತು.

ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದ ಬುಮ್ರಾ

ವರ್ಷದ ಬಳಿಕ ಟೀಂ ಇಂಡಿಯಾಕ್ಕೆ ರೀ ಎಂಟ್ರಿ ಪಡೆದ ಬುಮ್ರಾ ತಮ್ಮ ಚೊಚ್ಚಲ ಟಿ20 ನಾಯಕತ್ವದಲ್ಲಿ ಸರಣಿಯನ್ನು ಗೆಲ್ಲುವಲ್ಲಿ ಯಶಸ್ವಿಯಾದರು. ಎರಡನೆಯದಾಗಿ, ಈ ಸರಣಿಯಲ್ಲಿ ಆಡಿದ ಎಲ್ಲಾ ಬೌಲರ್‌ಗಳಿಗಿಂತ ಬುಮ್ರಾ ಎಕಾನಮಿ ತೀರ ಕಡಿಮೆ ಇತ್ತು. ಟಿ20 ಸರಣಿಯಲ್ಲಿ 4.87 ರ ಎಕಾನಮಿಯಲ್ಲಿ ರನ್ ಬಿಟ್ಟುಕೊಟ್ಟ ಬುಮ್ರಾ, ಈ ಚುಟುಕು ಸರಣಿಯಲ್ಲಿ 1 ಓವರ್ ಮೇಡನ್ ಬೌಲಿಂಗ್ ಜೊತೆಗೆ 4 ವಿಕೆಟ್ ಪಡೆದ ಏಕೈಕ ಬೌಲರ್ ಆಗಿದ್ದರು. ಹೀಗಾಗಿ ಬುಮ್ರಾರನ್ನು ಸರಣಿಯ ಆಟಗಾರನಾಗಿ ಆಯ್ಕೆ ಮಾಡಲಾಯಿತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ