IPL 2027: ಇಬ್ಬರು ಆಟಗಾರರು+10 ಕೋಟಿ: ಕುತೂಹಲ ಕೆರಳಿಸಿದ ಬಿಗ್ ಟ್ರೇಡ್ ಪ್ರಕ್ರಿಯೆ

IPL 2027: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-20ರ ಮಿನಿ ಹರಾಜಿಗೂ ಮುನ್ನ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್​ ನಡುವೆ ಬಿಗ್ ಟ್ರೇಡ್ ನಡೆಸುವ ಸಾಧ್ಯತೆಯಿದೆ. ಹಾರ್ದಿಕ್ ಪಾಂಡ್ಯ ಮತ್ತು ಆಯುಷ್ ಮ್ಹಾತ್ರೆ ಅವರ ಸುತ್ತ ಸುತ್ತುತ್ತಿರುವ ಈ ಮೆಗಾ ಡೀಲ್ ಸದ್ಯ ಕ್ರಿಕೆಟ್ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. 

IPL 2027: ಇಬ್ಬರು ಆಟಗಾರರು+10 ಕೋಟಿ: ಕುತೂಹಲ ಕೆರಳಿಸಿದ ಬಿಗ್ ಟ್ರೇಡ್ ಪ್ರಕ್ರಿಯೆ
Hardik Dewald Dube (1)

Updated on: Jul 27, 2026 | 1:57 PM

ಇಂಡಿಯನ್ ಪ್ರೀಮಿಯರ್ ಲೀಗ್ (IPL) ಇತಿಹಾಸದಲ್ಲೇ ಹಿಂದೆಂದೂ ಕಾಣದಂತಹ ಬಿಗ್ ಟ್ರೇಡಿಂಗ್ ಪ್ರಕ್ರಿಯೆಗೆ ತೆರೆಮರೆಯಲ್ಲಿ ಸಿದ್ಧತೆಗಳು ನಡೆಯುತ್ತಿವೆ. ಐಪಿಎಲ್‌ನ ಅತ್ಯಂತ ಯಶಸ್ವಿ ಫ್ರಾಂಚೈಸಿಗಳಾದ ಚೆನ್ನೈ ಸೂಪರ್ ಕಿಂಗ್ಸ್ (CSK) ಮತ್ತು ಮುಂಬೈ ಇಂಡಿಯನ್ಸ್ (MI) ನಡುವೆ ಸ್ಟಾರ್ ಆಟಗಾರ ಹಾರ್ದಿಕ್ ಪಾಂಡ್ಯ ವಿನಿಮಯಕ್ಕೆ ಮಾತುಕತೆ ನಡೆಯುತ್ತಿದ್ದು, ಉಭಯ ಫ್ರಾಂಚೈಸಿಗಳ ಬೇಡಿಕೆಗಳೇನು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಮುಂಬೈ ಬೇಡಿಕೆ ಏನು?

ವರದಿಗಳ ಪ್ರಕಾರ, ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ಬಿಟ್ಟುಕೊಡಲು ಎಂಐ ಮ್ಯಾನೇಜ್‌ಮೆಂಟ್ ಒಪ್ಪಿಗೆ ಸೂಚಿಸಿದೆ. ಆದರೆ, ಇದಕ್ಕೆ ಪ್ರತಿಯಾಗಿ ಅವರು ಸಿಎಸ್‌ಕೆಯಿಂದ ಕೇಳಿರುವುದು ಇಬ್ಬರು ಪ್ರಮುಖ ಆಟಗಾರರನ್ನು. ಅವರೆಂದರೆ…

  • ಶಿವಂ ದುಬೆ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅತ್ಯಂತ ನಂಬಿಕಸ್ಥ ಮತ್ತು ಸ್ಪಿನ್ ದಾಳಿಯನ್ನು ಧೂಳೀಪಟು ಮಾಡುವ ಬ್ಯಾಟರ್ ಶಿವಂ ದುಬೆಗಾಗಿ ಎಂಐ ಬೇಡಿಕೆಯಿಟ್ಟಿದೆ.
  • ಆಯುಷ್ ಮ್ಹಾತ್ರೆ: ಸಿಎಸ್‌ಕೆ ತಂಡದ ಯುವ ಸ್ಫೋಟಕ ಆಟಗಾರ ಆಯುಷ್ ಮ್ಹಾತ್ರೆಯನ್ನು ಕೂಡ ನೀಡುವಂತೆ ಎಂಐ ಫ್ರಾಂಚೈಸಿ ಬೇಡಿಕೆ ಮುಂದಿಟ್ಟಿದೆ.

ಅಂದರೆ ಇಲ್ಲಿ ಶಿವಂ ದುಬೆ ಹಾಗೂ ಆಯುಷ್ ಮ್ಹಾತ್ರೆಯನ್ನು ನೀಡಿದರೆ, ಹಾರ್ದಿಕ್ ಪಾಂಡ್ಯರನ್ನು ನಿಮಗೆ (ಸಿಎಸ್​ಕೆ) ನೀಡುವುದಾಗಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ತಿಳಿಸಿದೆ.

ಸಿಎಸ್‌ಕೆ ನಿರಾಕರಣೆ ಏಕೆ?

ಚೆನ್ನೈ ಸೂಪರ್ ಕಿಂಗ್ಸ್ ಮ್ಯಾನೇಜ್‌ಮೆಂಟ್ ಭವಿಷ್ಯದ ತಾರೆ ಆಯುಷ್ ಮ್ಹಾತ್ರೆ ಅವರನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡಲು ಸಾಧ್ಯವೇ ಇಲ್ಲ ಎಂದು ಖಡಾಖಂಡಿತವಾಗಿ ನಿರಾಕರಿಸಿದೆ. ಮ್ಹಾತ್ರೆ ಅವರನ್ನು ತಂಡದ ಭವಿಷ್ಯದ ಪ್ರಮುಖ ಆಸ್ತಿ ಎಂದು ಸಿಎಸ್‌ಕೆ ಭಾವಿಸಿರುವುದೇ ಇದಕ್ಕೆ ಮುಖ್ಯ ಕಾರಣ.

ಸಿಎಸ್‌ಕೆಯ ಕೌಂಟರ್-ಆಫರ್!

ಆಯುಷ್ ಮ್ಹಾತ್ರೆ ಅವರನ್ನು ತನ್ನಲ್ಲೇ ಉಳಿಸಿಕೊಳ್ಳಲು ಸಿಎಸ್‌ಕೆ ಬಯಸಿದ್ದು, ಬದಲಾಗಿ ಮುಂಬೈ ಇಂಡಿಯನ್ಸ್‌ಗೆ ಬರೋಬ್ಬರಿ ₹20 ಕೋಟಿ ಮೌಲ್ಯದ ಬೃಹತ್ ಕೌಂಟರ್-ಆಫರ್ ನೀಡಿದೆ. ಈ ಆಫರ್‌ನಲ್ಲಿ ಏನೇನಿದೆ?

  • ಶಿವಂ ದುಬೆ (ಸ್ಟಾರ್ ಆಲ್-ರೌಂಡರ್)
  • ಡೆವಾಲ್ಡ್ ಬ್ರೆವಿಸ್ (ಸೌತ್ ಆಫ್ರಿಕಾದ ಯುವ ಬ್ಯಾಟರ್)
  • ₹10 ಕೋಟಿ ನಗದು ಹಣ (ಕ್ಯಾಶ್ ಡೀಲ್)

ಅಂದರೆ ಹಾರ್ದಿಕ್ ಪಾಂಡ್ಯರನ್ನು ನೀಡಿದರೆ, ಶಿವಂ ದುಬೆ, ಡೆವಾಲ್ಡ್ ಬ್ರೆವಿಸ್ ಅವರನ್ನು ನೀಡುವುದಾಗಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಮುಂಬೈ ಇಂಡಿಯನ್ಸ್​ಗೆ ತಿಳಿಸಿದೆ. ಇದರ ಜೊತೆಗೆ ಹೆಚ್ಚುವರಿಯಾಗಿ 10 ಕೋಟಿ ರೂ. ನಗದು ಮೊತ್ತ ನೀಡುವುದಾಗಿಯೂ ಹೇಳಿಕೊಂಡಿದೆ.

ಮುಂಬೈ ಇಂಡಿಯನ್ಸ್ ಡಿಮ್ಯಾಂಡ್!

ಚೆನ್ನೈ ಸೂಪರ್ ಕಿಂಗ್ಸ್ ನೀಡಿದ ಇಬ್ಬರು ಆಟಗಾರರು + 10 ಕೋಟಿ ರೂ. ಮೌಲ್ಯದ ಕೌಂಟರ್ ಆಫರ್‌ಗೆ ಮುಂಬೈ ಇಂಡಿಯನ್ಸ್ ಸದ್ಯಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ.  ಬದಲಾಗಿ ಆಯುಷ್ ಮ್ಹಾತ್ರೆ ಅವರಿಗಾಗಿ ಪಟ್ಟು ಹಿಡಿದಿದೆ. ಅಂದರೆ ಇಲ್ಲಿ ಮುಂಬೈ ಇಂಡಿಯನ್ಸ್ ಭವಿಷ್ಯದ ದೃಷ್ಟಿಯಿಂದ ಮ್ಹಾತ್ರೆಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಬಯಸಿದೆ.

ಇದಕ್ಕೆ ಮುಖ್ಯ ಕಾರಣ ಆಯುಷ್ ಮ್ಹಾತ್ರೆಯ ಸ್ಫೋಟಕ ಬ್ಯಾಟಿಂಗ್ ಶೈಲಿ. ಅದರಲ್ಲೂ ರೋಹಿತ್ ಶರ್ಮಾ ರೀತಿಯಲ್ಲಿ ಬ್ಯಾಟ್ ಬೀಸುತ್ತಿರುವ ಯುವ ದಾಂಡಿಗ ಮುಂಬರುವ ದಿನಗಳಲ್ಲಿ ಹಿಟ್​ಮ್ಯಾನ್ ಅವರ ಸ್ಥಾನ ತುಂಬಲಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಇದೇ ಕಾರಣದಿಂದಾಗಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಆಯುಷ್ ಮ್ಹಾತ್ರೆಗಾಗಿ ಪಟ್ಟು ಹಿಡಿದಿದೆ.

ಇದನ್ನೂ ಓದಿ: IND vs SL: ಟೀಮ್ ಇಂಡಿಯಾದಿಂದ ಮೂವರು ಔಟ್!

ಒಟ್ಟಾರೆಯಾಗಿ ಹೇಳುವುದಾರೆ, ಐಪಿಎಲ್ ಇತಿಹಾಸದಲ್ಲೇ ಹಿಂದೆಂದೂ ಕಾಣದ ಈ ಮೆಗಾ ಟ್ರೇಡ್ ಸದ್ಯ ಆಯುಷ್ ಮ್ಹಾತ್ರೆ ಅವರ ಭವಿಷ್ಯದ ಮೇಲೆಯೇ ನಿಂತಿದೆ. ಸಿಎಸ್‌ಕೆಯ ಬಂಪರ್ ಆಫರ್ ಅನ್ನು ಮುಂಬೈ ನಿರಾಕರಿಸಿರುವುದರಿಂದ ಈ ಹಗ್ಗಜಗ್ಗಾಟ ಮತ್ತಷ್ಟು ರೋಚಕವಾಗಿದೆ. ಮುಂಬರುವ ದಿನಗಳಲ್ಲಿ ಉಭಯ ಫ್ರಾಂಚೈಸಿಗಳು ಒಮ್ಮತಕ್ಕೆ ಬಂದು ಈ ಇತಿಹಾಸ ಪ್ರಸಿದ್ಧ ಡೀಲ್ ಅನ್ನು ಅಂತಿಮಗೊಳಿಸುತ್ತವಾ ಅಥವಾ ಈ ಮಾತುಕತೆ ಇಲ್ಲಿಗೇ ಮುಕ್ತಾಯವಾಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.

 

Loading...
Unable to load recommendations.
Follow Us