
ಇರಾನಿ ಕಪ್ ಪಂದ್ಯದಲ್ಲಿ ಶೇಷ ಭಾರತ ಮತ್ತು ವಿದರ್ಭ ತಂಡಗಳು ಮುಖಾಮುಖಿಯಾಗಿದೆ. ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ವಿದರ್ಭ ತಂಡವು ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.
ಝಡ್.ಆರ್ ಇರಾನಿ ಅಥವಾ ಝಲ್ ಇರಾನಿ, ಇವರು ಬಿಸಿಸಿಐನ ಮಾಜಿ ಅಧ್ಯಕ್ಷರು. ಲಂಡನ್ನಲ್ಲಿ ಚಾರ್ಟರ್ಡ್ ಅಕೌಂಟೆನ್ಸಿ ಅಧ್ಯಯನ ಮಾಡಿದ್ದ ಇರಾನಿ ಅವರು ಸ್ವಾತಂತ್ರ್ಯ ಪೂರ್ವದಲ್ಲಿ ದೆಹಲಿಯ ರೋಶನಾರಾ ಕ್ಲಬ್ ಮತ್ತು ಮುಂಬೈನ ಪಾರ್ಸಿ ಜಿಮ್ಖಾನಾ ಕ್ಲಬ್ ಪರ ಕ್ರಿಕೆಟ್ ಆಡುತ್ತಿದ್ದರು. ಅಷ್ಟೇ ಅಲ್ಲದೆ 1928-29 ರಿಂದ 1945-46 ಮತ್ತು 1948-49 ರಿಂದ 1961-62 ಅವರು ಭಾರತ ಕ್ರಿಕೆಟ್ ಮಂಡಳಿಯ ಖಜಾಂಚಿಯಾಗಿ ಸೇವೆ ಸಲ್ಲಿಸಿದ್ದರು.
1966 ರಲ್ಲಿ ಬಿಸಿಸಿಐ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ಇರಾನಿ ಅವರು ಭಾರತೀಯ ಕ್ರಿಕೆಟ್ ಅನ್ನು ಪ್ರಗತಿಪಥದತ್ತ ಸಾಗಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಈ ಮೂಲಕ ಸ್ವಾತಂತ್ರ ಭಾರತದಲ್ಲಿ ಕ್ರಿಕೆಟ್ ಅನ್ನು ಉತ್ತೇಜಿಸುವಲ್ಲಿ ತಮ್ಮದೆಯಾದ ಕೊಡುಗೆ ನೀಡಿದ್ದಾರೆ. ಅವರ ಸ್ಮರಾರ್ಥ ಇರಾನಿ ಕಪ್ ಅನ್ನು ಆಯೋಜಿಸಲಾಗುತ್ತದೆ.
ವಿಶೇಷ ಎಂದರೆ ಇರಾನಿ ಕಪ್ನಲ್ಲಿ ಹಾಲಿ ರಣಜಿ ಚಾಂಪಿಯನ್ ತಂಡ ಹಾಗೂ ಶೇಷ ಭಾರತ ತಂಡ ಏಕೈಕ ಟೆಸ್ಟ್ ಪಂದ್ಯದಲ್ಲಿ ಮುಖಾಮುಖಿಯಾಗುತ್ತದೆ. ಅಂದರೆ ಇಲ್ಲಿ ಶೇಷ ಭಾರತ ತಂಡದಲ್ಲಿ ರಣಜಿ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ವಿವಿಧ ರಾಜ್ಯಗಳ ಆಟಗಾರರನ್ನು ಬಿಸಿಸಿಐ ಆಯ್ಕೆ ಮಾಡುತ್ತದೆ.
ಅದರಂತೆ ಇದೀಗ ಹಾಲಿ ರಣಜಿ ಚಾಂಪಿಯನ್ ವಿದರ್ಭ ಹಾಗೂ ಶೇಷ ಭಾರತ ತಂಡ ಇರಾನಿ ಕಪ್ ಪಂದ್ಯದಲ್ಲಿ ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಕಣಕ್ಕಿಳಿದಿರುವ ಆಟಗಾರರ ಪಟ್ಟಿ ಈ ಕೆಳಗಿನಂತಿವೆ…
ವಿದರ್ಭ ಪ್ಲೇಯಿಂಗ್ ಇಲೆವೆನ್: ಧ್ರುವ ಶೋರೆ , ಅಥರ್ವ ತೈಡೆ , ಅಮನ್ ಮೊಖಡೆ , ದಾನಿಶ್ ಮಾಲೆವಾರ್ , ಯಶ್ ರಾಥೋಡ್ , ಅಕ್ಷಯ್ ವಾಡ್ಕರ್ (ನಾಯಕ) , ಪಾರ್ಥ್ ರೇಖಾಡೆ , ಹರ್ಷ ದುಬೆ , ಯಶ್ ಠಾಕೂರ್ , ದರ್ಶನ್ ನಲ್ಕಂಡೆ , ಆದಿತ್ಯ ಠಾಕರೆ.
ಇದನ್ನೂ ಓದಿ: Dinesh Karthik: ಹೊಸ ತಂಡದತ್ತ ಮುಖ ಮಾಡಿದ ದಿನೇಶ್ ಕಾರ್ತಿಕ್..!
ಶೇಷ ಭಾರತ ಪ್ಲೇಯಿಂಗ್ ಇಲೆವೆನ್: ಅಭಿಮನ್ಯು ಈಶ್ವರನ್ , ರುತುರಾಜ್ ಗಾಯಕ್ವಾಡ್ , ಆರ್ಯನ್ ಜುಯಲ್ , ರಜತ್ ಪಾಟಿದಾರ್ (ನಾಯಕ) , ಯಶ್ ಧುಲ್ , ಇಶನ್ ಕಿಶನ್ ( ವಿಕೆಟ್ ಕೀಪರ್ ) , ಮಾನವ್ ಸುತಾರ್ , ಸರನ್ಶ್ ಜೈನ್ , ಅನ್ಶುಲ್ ಕಂಬೋಜ್ , ಆಕಾಶ್ ದೀಪ್ , ಗುರ್ನೂರ್ ಬ್ರಾರ್.