AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ವಿಶ್ವ ಭಯೋತ್ಪಾದಕ ಕಪ್’; ವಿಶ್ವಕಪ್​ಗೆ ಖಲಿಸ್ತಾನಿ ಭಯೋತ್ಪಾದಕನ ಬೆದರಿಕೆ..!

ICC World Cup 2023: ವಾಸ್ತವವಾಗಿ ಖಲಿಸ್ತಾನಿ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಗುರುಪತ್‌ವಂತ್ ಸಿಂಗ್ ಪನ್ನುನ್ ಈ ಬೆದರಿಕೆ ಹಾಕಿದ್ದು, ಅಕ್ಟೋಬರ್ 5 ರಿಂದ 'ವಿಶ್ವ ಭಯೋತ್ಪಾದಕ ಕಪ್' ಪ್ರಾರಂಭವಾಗಲಿದೆ, ವಿಶ್ವಕಪ್ ಅಲ್ಲ ಎಂದು ಹೇಳಿಕೆ ನೀಡಿದ್ದಾನೆ.

‘ವಿಶ್ವ ಭಯೋತ್ಪಾದಕ ಕಪ್'; ವಿಶ್ವಕಪ್​ಗೆ ಖಲಿಸ್ತಾನಿ ಭಯೋತ್ಪಾದಕನ ಬೆದರಿಕೆ..!
ಖಲಿಸ್ತಾನಿ ಭಯೋತ್ಪಾದಕ ಗುರುಪತ್‌ವಂತ್ ಸಿಂಗ್
ಪೃಥ್ವಿಶಂಕರ
|

Updated on:Sep 28, 2023 | 11:23 PM

Share

13ನೇ ಏಕದಿನ ವಿಶ್ವಕಪ್ (ICC World Cup) ಅಕ್ಟೋಬರ್ 5 ರಿಂದ ಭಾರತದಲ್ಲಿ ಆರಂಭವಾಗಲಿದೆ. ಇದೇ ಮೊದಲ ಬಾರಿಗೆ ಇಡೀ ಟೂರ್ನಿಯನ್ನು ಭಾರತದಲ್ಲಿ ಆಡಲಾಗುತ್ತಿದೆ. ಈ 10 ತಂಡಗಳ ವಿಶ್ವಕಪ್‌ಗಾಗಿ ಬಹುತೇಕ ಎಲ್ಲಾ ತಂಡಗಳು ಭಾರತವನ್ನು ತಲುಪಿವೆ, ಇದರಲ್ಲಿ ನೆರೆಯ ರಾಷ್ಟ್ರ ಪಾಕಿಸ್ತಾನವೂ ಸೇರಿದೆ. ಹೀಗಾಗಿ ಇಷ್ಟು ದೊಡ್ಡ ಟೂರ್ನಮೆಂಟ್‌ಗಾಗಿ ಭಾರತದ ಪ್ರತಿಯೊಂದು ನಗರ ಮತ್ತು ಮೈದಾನದಲ್ಲಿ ಬಿಗಿ ಭದ್ರತೆಯನ್ನು ಆಯೋಜಿಸಿದೆ. ಆದರೆ ಇದರ ನಡುವೆ ಬೆದರಿಕೆಯೊಂದು ಬಂದಿದ್ದು ಎಲ್ಲರಲ್ಲೂ ಆತಂಕ ಹುಟ್ಟಿಸಿದೆ. ವಾಸ್ತವವಾಗಿ ಖಲಿಸ್ತಾನಿ ಭಯೋತ್ಪಾದಕ (Khalistan Terrorist) ಸಂಘಟನೆಯ ಮುಖ್ಯಸ್ಥ ಗುರುಪತ್‌ವಂತ್ ಸಿಂಗ್ ಪನ್ನುನ್ (Gurpatwant Singh Pannun) ಈ ಬೆದರಿಕೆ ಹಾಕಿದ್ದು, ಅಕ್ಟೋಬರ್ 5 ರಿಂದ ‘ವಿಶ್ವ ಭಯೋತ್ಪಾದಕ ಕಪ್’ ಪ್ರಾರಂಭವಾಗಲಿದೆ, ವಿಶ್ವಕಪ್ ಅಲ್ಲ ಎಂದು ಹೇಳಿಕೆ ನೀಡಿದ್ದಾನೆ.

ಕಳೆದ ಕೆಲವು ದಿನಗಳಿಂದ, ಖಾಲಿಸ್ತಾನಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಕೆನಡಾ ನಡುವಿನ ಸಂಬಂಧವು ಹದಗೆಟ್ಟಿದೆ. ಕೆನಡಾದ ಪ್ರಜೆ ಹರ್ದೀಪ್ ಸಿಂಗ್ ನಿಜ್ಜಾರ್ ಅವರನ್ನು ಭಾರತ ಸರ್ಕಾರ ತನ್ನ ಏಜೆಂಟ್​ಗಳ ಮೂಲಕ ಕೊಂದಿದೆ ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಆರೋಪಿಸಿದ್ದರು. ಆದರೆ ಭಾರತ ಸರ್ಕಾರವು ಈ ಆರೋಪವನ್ನು ತಳ್ಳಿ ಹಾಕಿ, ನಿಜ್ಜರ್ ಒಬ್ಬ ಖಲಿಸ್ತಾನಿ ಭಯೋತ್ಪಾದಕ ಎಂದು ಹೇಳಿಕೆ ನೀಡುವ ಮೂಲಕ ಕೆನಡಾಕ್ಕೆ ತಕ್ಕ ಉತ್ತರವನ್ನು ನೀಡಿತ್ತು.

ODI World Cup 2023: ಏಕದಿನ ವಿಶ್ವಕಪ್​ಗಾಗಿ ಅಂತಿಮ ತಂಡಗಳನ್ನು ಪ್ರಕಟಿಸಿದ ಎಲ್ಲಾ 10 ದೇಶಗಳು..!

ಬೆದರಿಕೆ ಹಾಕಿದ ಗುರುಪತ್‌ವಂತ್ ಸಿಂಗ್

ಈ ನಡುವೆ ಕೆನಡಾದಲ್ಲಿ ರೂಪುಗೊಂಡ ‘ಸಿಖ್ ಫಾರ್ ಜಸ್ಟಿಸ್’ ಹೆಸರಿನ ಖಲಿಸ್ತಾನಿ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಗುರುಪತ್‌ವಂತ್ ಸಿಂಗ್ ಪನ್ನುನ್ ಭಾರತಕ್ಕೆ ನಿರಂತರವಾಗಿ ಬೆದರಿಕೆಯೊಡ್ಡುತ್ತಿದ್ದು, ಇದೀಗ ವಿಶ್ವಕಪ್ ಹೆಸರಿನಲ್ಲಿ ಬೆದರಿಕೆ ಹಾಕಿದ್ದಾನೆ. ವರದಿಗಳ ಪ್ರಕಾರ, ಭಾರತದಲ್ಲಿ ನಡೆಯಲಿರುವ ವಿಶ್ವಕಪ್ ಅನ್ನು ಗುರಿಯಾಗಿಸಿಕೊಂಡು ಆಡಿಯೋ ಸಂದೇಶ ಬಿಡುಗಡೆ ಮಾಡಿರುವ ಪನ್ನುನ್, ಅಕ್ಟೋಬರ್ 5 ರಿಂದ ಭಾರತದಲ್ಲಿ ವಿಶ್ವಕಪ್ ಪ್ರಾರಂಭವಾಗುತ್ತಿದೆ. ಆದರೆ ಅಕ್ಟೋಬರ್ 5 ರಿಂದ ತನ್ನ ಸಂಸ್ಥೆಯು ವಿಶ್ವ ಭಯೋತ್ಪಾದಕ ಕಪ್ ಅನ್ನು ಪ್ರಾರಂಭಿಸಲಿದೆ ಎಂದು ಈ ಸಂದೇಶದಲ್ಲಿ ಹೇಳಿದ್ದಾನೆ ಎಂದು ವರದಿಯಾಗಿದೆ.

ವಿಶ್ವಕಪ್‌ನ ಮೊದಲ ಪಂದ್ಯ ಅಕ್ಟೋಬರ್ 5 ರಂದು ನಡೆಯಲಿದ್ದು, ಇದರಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ಮುಖಾಮುಖಿಯಾಗಲಿವೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದ್ದು, ಖಲಿಸ್ತಾನಿ ಭಯೋತ್ಪಾದಕರು ಅದನ್ನು ಗುರಿಯಾಗಿಸಿಕೊಂಡು ಬೆದರಿಕೆ ಹಾಕುತ್ತಿದ್ದಾರೆ.

12 ನಗರಗಳಲ್ಲಿ ಸ್ಪರ್ಧೆ, ಬಿಗಿ ಭದ್ರತೆ

ಈ ಬಾರಿಯ ಏಕದಿನ ವಿಶ್ವಕಪ್ ಅಕ್ಟೋಬರ್ 5 ರಿಂದ ಪ್ರಾರಂಭವಾಗಲಿದೆ. ಇದಕ್ಕಾಗಿ ಎಲ್ಲಾ ತಂಡಗಳು ಈಗಾಗಲೇ ಭಾರತಕ್ಕೆ ಆಗಮಿಸಿವೆ. ಏಕೆಂದರೆ ಅಭ್ಯಾಸ ಪಂದ್ಯಗಳು ಸೆಪ್ಟೆಂಬರ್ 29 ರಿಂದ ಪ್ರಾರಂಭವಾಗುತ್ತವೆ. ಈ ಮೂಲಕ ಎಲ್ಲ ತಂಡಗಳು ಸುಮಾರು 50-55 ದಿನಗಳ ಕಾಲ ಭಾರತದಲ್ಲಿ ಇರುತ್ತವೆ. ಅಭ್ಯಾಸ ಪಂದ್ಯಗಳು ಮತ್ತು ಮುಖ್ಯ ಪಂದ್ಯಗಳಿಗಾಗಿ ದೇಶಾದ್ಯಂತ 12 ಸ್ಥಳಗಳನ್ನು ನಿಗದಿಪಡಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಈ ಎಲ್ಲಾ ಸ್ಥಳಗಳಲ್ಲಿ ಭದ್ರತಾ ವ್ಯವಸ್ಥೆ ತುಂಬಾ ಬಿಗಿಯಾಗಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:21 pm, Thu, 28 September 23