ಅಂದು ಬಾಲ್ ಬಾಯ್, ಇಂದು ಸ್ಪೋಟಕ ಆರಂಭಿಕ: ಕನ್ನಡಿಗನ ಸಿಡಿಲಬ್ಬರದ ಶತಕ..!

Maharaja Trophy T20: ರೋಹನ್ ಪಾಟೀಲ್ ಮತ್ತು ಮಯಾಂಕ್ ಅಗರ್ವಾಲ್ ನಂತರ ಮಹಾರಾಜ ಟ್ರೋಫಿಯಲ್ಲಿ ಶತಕ ಬಾರಿಸಿದ ಮೂರನೇ ಬ್ಯಾಟ್ಸ್‌ಮನ್ ಚೇತನ್.

ಅಂದು ಬಾಲ್ ಬಾಯ್, ಇಂದು ಸ್ಪೋಟಕ ಆರಂಭಿಕ: ಕನ್ನಡಿಗನ ಸಿಡಿಲಬ್ಬರದ ಶತಕ..!
lr chethan
Updated By: ಝಾಹಿರ್ ಯೂಸುಫ್

Updated on: Aug 20, 2022 | 1:25 PM

ಒಂದು ಕಾಲದಲ್ಲಿ ಮಯಾಂಕ್ ಅಗರ್ವಾಲ್ , ಮನೀಶ್ ಪಾಂಡೆ, ಕರುಣ್ ನಾಯರ್ ಅವರಂತಹ ಸ್ಟಾರ್ ಆಟಗಾರರು ಬ್ಯಾಟ್ ಬೀಸುತ್ತಿದ್ದಾಗ ಬಾಲ್ ಬಾಯ್ ಆಗಿದ್ದ ಆಟಗಾರ, ಇದೀಗ ಅದೇ ಸ್ಟಾರ್ ಆಟಗಾರರ ಮುಂದೆ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ ಮೆಚ್ಚುಗೆಗಳಿಸಿದ್ದಾರೆ. ಹೌದು, ಕರ್ನಾಟಕ ಕ್ರಿಕೆಟ್ ಸಂಸ್ಥೆಯ ಮಹಾರಾಜ ಟ್ರೋಫಿಯ ಪಂದ್ಯದಲ್ಲಿ ಎಲ್​ಆರ್​ ಚೇತನ್ (LR Chethan) ಬಿರುಸಿನ ಶತಕ ಸಿಡಿಸಿ ಮಿಂಚಿದ್ದಾರೆ. ಅದು ಕೂಡ ನಾಯಕ ಮಯಾಂಕ್ ಅಗರ್ವಾಲ್ ಅವರ ಮುಂದೆ ಎಂಬುದು ವಿಶೇಷ.

ಬೆಂಗಳೂರು ಬ್ಲಾಸ್ಟರ್ಸ್ ಪರ ಮಯಾಂಕ್ ಅಗರ್ವಾಲ್ ಜೊತೆ ಇನಿಂಗ್ಸ್ ಆರಂಭಿಸುತ್ತಿರುವ ಎಲ್​ಆರ್​ ಚೇತನ್ ಶಿವಮೊಗ್ಗ ಸ್ಟ್ರೈಕರ್ಸ್ ವಿರುದ್ಧದ ಪಂದ್ಯದಲ್ಲಿ ಸ್ಪೋಟಕ ಸೆಂಚುರಿ ಬಾರಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದರು. ಕೇವಲ 55 ಎಸೆತಗಳನ್ನು ಎದುರಿಸಿದ ಚೇತನ್ ಅಜೇಯ 105 ರನ್​ ಬಾರಿಸಿದರು. ಈ ಮೂಲಕ ಬೆಂಗಳೂರು ತಂಡ 25 ರನ್‌ಗಳಿಂದ ಗೆಲ್ಲಲು ನೆರವಾಗಿದ್ದರು. ಅವರ ಈ ಬಿರುಸಿನ ಇನ್ನಿಂಗ್ಸ್‌ನಲ್ಲಿ 8 ಬೌಂಡರಿ ಮತ್ತು 6 ಭರ್ಜರಿ ಸಿಕ್ಸ್​ಗಳು ಮೂಡಿಬಂದಿತ್ತು.

ವಿಶೇಷ ಎಂದರೆ ಇದೇ ಚೇತನ್ ಒಂದು ಕಾಲದಲ್ಲಿ ಬಾಲ್ ಬಾಯ್ ಆಗಿ ಕಾಣಿಸಿಕೊಂಡಿದ್ದರು. 2017 ರಿಂದ 2019 ರವರೆಗೆ ಅವರು ಕರ್ನಾಟಕ ಪ್ರೀಮಿಯರ್ ಲೀಗ್‌ನಲ್ಲಿ ಬಾಲ್ ಬಾಯ್ ಆಗಿ ಕಾರ್ಯನಿರ್ವಹಿಸಿದ್ದರು. ಅಂದು ಬೌಂಡರಿ ಬಳಿ ಕುಳಿತು ಮಯಾಂಕ್, ಪಾಂಡೆ ಆಟ ನೋಡಿ ಸಮಯ ಕಳೆದಿದ್ದರು. ಅಷ್ಟೇ ಅಲ್ಲದೆ ನಾನು ಕೂಡ ಅವರಂತೆ ಆಗಬೇಕೆಂದು ಕನಸು ಕಟ್ಟಿಕೊಂಡಿದ್ದ. ಇದೀಗ 22 ವರ್ಷದ ಯುವ ಆಟಗಾರ ಶಿವಮೊಗ್ಗ ಸ್ಟ್ರೈಕರ್ಸ್ ತಂಡದ ಅನುಭವಿ ಬೌಲರ್​ಗಳ ಬೆಂಡೆತ್ತುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ
Team India: 7 ತಿಂಗಳಲ್ಲಿ 7 ನಾಯಕರು: ವಿಶೇಷ ದಾಖಲೆ ಬರೆದ ಟೀಮ್ ಇಂಡಿಯಾ
ಸಚಿನ್, ಧೋನಿಗೂ ಸಿಕ್ಕಿಲ್ಲ ಈ ಗೌರವ: ಇಂಗ್ಲೆಂಡ್ ಕ್ರಿಕೆಟ್ ಸ್ಟೇಡಿಯಂಗೆ ಭಾರತೀಯ ಕ್ರಿಕೆಟಿಗನ ಹೆಸರು..!
Cheteshwar Pujara: ಒಟ್ಟು 997 ರನ್​: ಕೌಂಟಿ ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ಬರೆದ ಪೂಜಾರ
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್

ಮಹಾರಾಜ ಟಿ20ಯಲ್ಲಿ ಮೂರನೇ ಶತಕ:

ರೋಹನ್ ಪಾಟೀಲ್ ಮತ್ತು ಮಯಾಂಕ್ ಅಗರ್ವಾಲ್ ನಂತರ ಮಹಾರಾಜ ಟ್ರೋಫಿಯಲ್ಲಿ ಶತಕ ಬಾರಿಸಿದ ಮೂರನೇ ಬ್ಯಾಟ್ಸ್‌ಮನ್ ಚೇತನ್. ರೋಹನ್ ಪಾಟೀಲ್ ಅವರ ಶತಕ ನೋಡಿದ ನಂತರವೇ ಅವರೂ ಶತಕ ಸಿಡಿಸಬಹುದು ಎಂದು ಅನಿಸಿತು ಎಂದು ಚೇತನ್ ಹೇಳಿದ್ದಾರೆ. ಈ ಯುವ ಬ್ಯಾಟ್ಸ್‌ಮನ್ ಈ ಪಂದ್ಯಾವಳಿಯಲ್ಲಿ 247 ರನ್ ಕಲೆಹಾಕಿದ್ದಾರೆ. ಅಲ್ಲದೆ ಈ ಬಾರಿಯ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.

ಈ ಭರ್ಜರಿ ಬ್ಯಾಟಿಂಗ್ ಪ್ರದರ್ಶನದ ನಂತರ, ಈಗ ಅವರ ಕನಸು ಕೂಡ ನನಸಾಗುವ ನಿರೀಕ್ಷೆಯಿದೆ. ಏಕೆಂದರೆ ಈ ವರ್ಷ ಮೊದಲ ಡಿವಿಷನ್ ಕ್ರಿಕೆಟ್ ಆಡಲು ಆರಂಭಿಸಿರುವ ಚೇತನ್ ಇದೀಗ ಸಿಕ್ಕ ಅವಕಾಶದಲ್ಲಿ ಶತಕ ಸಿಡಿಸಿ ಮಿಂಚಿದ್ದಾರೆ. ಈ ಮೂಲಕ ಕರ್ನಾಟಕ ಪರ ಆಡಬೇಕೆಂಬ ತಮ್ಮ ಬಹುದಿನಗಳ ಕನಸನ್ನು ಈಡೇರಿಸಿಕೊಳ್ಳುವತ್ತ ಹೆಜ್ಜೆಯಿಟ್ಟಿದ್ದಾರೆ ಯುವ ವಿಕೆಟ್ ಕೀಪರ್ ಬ್ಯಾಟ್ಸ್​ಮನ್​ ಎಲ್​ಆರ್​ ಚೇತನ್.