Shreyas Iyer: ಸತತ 5 ಸೋಲುಗಳ ಬಳಿಕ ಗೆಲುವು: ಪಂದ್ಯ ಮುಗಿದ ಬಳಿಕ ಶ್ರೇಯಸ್ ಅಯ್ಯರ್ ಹೇಳಿದ್ದೇನು ಕೇಳಿ

KKR vs RR: ನಿತೀಶ್ ರಾಣಾ ಹಾಗೂ ರಿಂಕು ಸಿಂಗ್ ಭರ್ಜರಿ ಜೊತೆಯಾಟ ಆಡಿ ಕೆಕೆಆರ್ 19.1 ಓವರ್‌ಗಳಲ್ಲಿ 3 ವಿಕೆಟ್‌ಗೆ 158 ರನ್‌ಗಳಿಸಿ ಗೆಲುವಿನ ನಗೆ ಬೀರಿತು. ಪಂದ್ಯ ಮುಗಿದ ಬಳಿಕ ಮಾತನಾಡಿದ ಕೋಲ್ಕತ್ತಾ ತಂಡದ ನಾಯಕ ಶ್ರೇಯಸ್ ಅಯ್ಯರ್ ಏನು ಹೇಳಿದರು ನೋಡಿ.

Shreyas Iyer: ಸತತ 5 ಸೋಲುಗಳ ಬಳಿಕ ಗೆಲುವು: ಪಂದ್ಯ ಮುಗಿದ ಬಳಿಕ ಶ್ರೇಯಸ್ ಅಯ್ಯರ್ ಹೇಳಿದ್ದೇನು ಕೇಳಿ
Shreyas Iyer post-match presentation KKR vs RR
Follow us
| Updated By: Vinay Bhat

Updated on:May 03, 2022 | 8:49 AM

ಐಪಿಎಲ್ 2022 ರಲ್ಲಿ (IPL 2022) ಸತತ ಐದು ಸೋಲುಗಳಿಂದ ಕಂಗೆಟ್ಟಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ (Kolkata Knight Riders)​ ತಂಡ ಕೊನೆಗೂ ಗೆಲುವಿನ ಲಯಕ್ಕೆ ಮರಳಿದ್ದು ಪ್ಲೇ ಆಫ್ ರೇಸ್​ನಲ್ಲಿ ಉಳಿದುಕೊಂಡಿದೆ. ಸೋಮವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಬೌಲರ್‌ಗಳ ಶಿಸ್ತುಬದ್ಧ ದಾಳಿಯ ಜತೆಗೆ ಬ್ಯಾಟರ್‌ಗಳ ಸಂಘಟಿತ ಹೋರಾಟದ ಫಲವಾಗಿ ಕೆಕೆಆರ್ 7 ವಿಕೆಟ್‌ಗಳಿಂದ ಗೆದ್ದು ಬೀಗಿತು. ರಾಜಸ್ಥಾನ ತಂಡ ನಾಯಕ ಸಂಜು ಸ್ಯಾಮ್ಸನ್ ಅರ್ಧಶತಕದಾಟ ಹಾಗೂ ಹೆಟ್ಮೆಯೆರ್ ಬಿರುಸಿನ ಬ್ಯಾಟಿಂಗ್ ನೆರವಿನಿಂದ 5 ವಿಕೆಟ್‌ಗೆ 152 ರನ್ ಕಲೆಹಾಕಿತು. ಪ್ರತಿಯಾಗಿ ಪರ ನಿತೀಶ್ ರಾಣಾ ಹಾಗೂ ರಿಂಕು ಸಿಂಗ್ ಭರ್ಜರಿ ಜೊತೆಯಾಟ ಆಡಿ ಕೆಕೆಆರ್ 19.1 ಓವರ್‌ಗಳಲ್ಲಿ 3 ವಿಕೆಟ್‌ಗೆ 158 ರನ್‌ಗಳಿಸಿ ಗೆಲುವಿನ ನಗೆ ಬೀರಿತು. ಪಂದ್ಯ ಮುಗಿದ ಬಳಿಕ ಮಾತನಾಡಿದ ಕೋಲ್ಕತ್ತಾ ತಂಡದ ನಾಯಕ ಶ್ರೇಯಸ್ ಅಯ್ಯರ್ (Shreyas Iyer) ಏನು ಹೇಳಿದರು ನೋಡಿ.

“ಪವರ್ ಪ್ಲೇನಲ್ಲಿ ನಮ್ಮ ಬೌಲರ್​ಗಳು ಅದ್ಭುತ ಬೌಲಿಂಗ್ ಪ್ರದರ್ಶಿಸಿದರು. ಕೇವಲ 36 ರನ್ ನೀಡಿ ವಿಕೆಟ್​ಗಳನ್ನು ಕೂಡ ಪಡೆದುಕೊಂಡೆವು. ಈರೀತಿಯ ಆರಂಭದ ಅಗತ್ಯ ನಮಗಿತ್ತು. ನಾವು ಮೊದಲಿನಿಂದಲೂ ಉಮೇಶ್ ಯಾದವ್ ಬಗ್ಗೆ ಮಾತನಾಡುತ್ತಿದ್ದೇವೆ. ಅವರು ತನ್ನ ವೇಗವನ್ನು ಹೆಚ್ಚಿಸಿದ್ದಾರೆ, ಹಾರ್ಡ್ ಲೆಂತ್ ಬೌಲ್ ಚೆನ್ನಾಗಿ ಮಾಡುತ್ತಾರೆ. ನಾಯಕನಾದವನು ಅಂತವರಿಗೆ ಬೌಲಿಂಗ್ ನೀಡಬೇಕು. ನಾನು ಯಾವಾಗ ಸುನೀಲ್ ನರೈನ್​ಗೆ ಬೌಲಿಂಗ್ ಮಾಡಲು ಕೊಡುತ್ತೇನೊ ಆಗೆಲ್ಲ ಅವರು ವಿಕೆಟ್ ತೆಗೆದುಕೊಟ್ಟಿದ್ದಾರೆ. ಆದರೆ, ಬ್ಯಾಟ್ಸ್​ಮನ್​ಗಳು ಅವರ ಓವರ್​ನಲ್ಲಿ ಎಚ್ಚರಿಕೆಯಿಂದ ಆಡುತ್ತಾರೆ. ನರೈನ್ ವಿಕೆಟ್ ಪಡೆದುಕೊಂಡರೆ ಅದು ದೊಡ್ಡದೇ ಆಗಿರುತ್ತದೆ,” ಎಂದು ಬೌಲರ್​ಗಳನ್ನು ಹಾಡಿಹೊಗಳಿದ್ದಾರೆ.

ಮಾತು ಮುಂದುವರೆಸಿದ ಅಯ್ಯರ್, “ರಿಂಕು ಸಿಂಗ್ ಬ್ಯಾಟಿಂಗ್ ಅದ್ಭುತವಾಗಿತ್ತು. ಇದು ಅವರ ಎರಡು ಅಥವಾ ಮೂರನೇ ಪಂದ್ಯವಷ್ಟೆ. ಭವಿಷ್ಯದಲ್ಲಿ ಫ್ರಾಂಚೈಸಿಗೆ ಅವರು ದೊಡ್ಡ ಆಸ್ತಿ ಎಂದೇ ಹೇಳಬಹುದು. ಅವರು ಆಡಿದ ರೀತಿ ನೋಡಿದರೆ ಹೊಸ ಆಟಗಾರ ಎಂದು ಹೇಳಲು ಸಾಧ್ಯವಿಲ್ಲ. ನಾವು ಉತ್ತಮ ಆರಂಭ ಎದುರು ನೋಡುತ್ತಿದ್ದೆವು. ನನಗೆ ಒತ್ತಡ ಎಂದರೆ ತುಂಬಾ ಇಷ್ಟ. ಆದರೆ, ಪ್ರತಿ ಪಂದ್ಯದಲ್ಲಿ ಇನ್ನಿಂಗ್ಸ್​ ಕಟ್ಟಬೇಕು ಎಂದರೆ ಸುಲಭವಲ್ಲ. ಪಂದ್ಯ ಆರಂಭಕ್ಕೂ ಮುನ್ನ ಶಿವಂ ಮಾವಿ, ರಿಂಕು ಮತ್ತು ಅನುಕುಲ್ ಜೊತೆ ಫೀಲ್ಡಿಂಗ್ ನಮ್ಮದು ಚೆನ್ನಾಗಿರಬೇಕು ಎಂದು ಹೇಳಿದ್ದೆ. ಇದರಲ್ಲಿ ಮಾವಿ ಹಿಡಿದ ಬಟ್ಲರ್ ಅವರ ಕ್ಯಾಚ್ ಅತ್ಯುತ್ತಮವಾಗಿತ್ತು,” ಎಂದು ಹೇಳಿದ್ದಾರೆ.

Rinku Singh: 23 ಎಸೆತ ಅಜೇಯ 42 ರನ್: ಕೆಕೆಆರ್​ಗೆ ಗೆಲುವು ತಂದಿಟ್ಟ ರಿಂಕು ಸಿಂಗ್ ಸ್ಫೋಟಕ ಆಟ ನೋಡಿ

ಸೋತ ತಂಡದ ನಾಯಕ ಸಂಜು ಸ್ಯಾಮ್ಸನ್ ಮಾತನಾಡಿ, “ವಿಕೆಟ್ ಕೊಂಚ ನಿಧಾನವಾಗಿತ್ತು. ನಾವು ಹೊಂದಿದ್ದ ಬ್ಯಾಟಿಂಗ್​ಗೆ ಅವರು ಬೌಲಿಂಗ್ ಮಾಡಿದ್ದು ಉತ್ತಮವಾಗಿತ್ತು. ನಾವು ಚೆನ್ನಾಗಿ ಫಿನಿಶ್ ಮಾಡಲಿಲ್ಲ. ನಮ್ಮ ಕಡೆಯಿಂದ ಕೊನೆಯಲ್ಲಿ ಇನ್ನೂ ಒಂದಿಷ್ಟು ಬೌಂಡರಿಗಳು ಬೇಕಿತ್ತು. ನನ್ನ ಪ್ರಕಾರ 15-20 ರನ್ ನಾವು ಕಡಿಮೆ ಹೊಡೆದೆವು. ನಮ್ಮ ಬೌಲರ್​ಗಳು ಸಾಕಷ್ಟು ಶ್ರಮ ಪಟ್ಟಿದ್ದಾರೆ. ಎದುರಾಳಿಗೆ ಫೈಟ್ ಕೊಟ್ಟಿದ್ದೇವೆ. ನಮ್ಮ ಬ್ಯಾಟಿಂಗ್ ಇನ್ನೂ ಚೆನ್ನಾಗಿರಬಹುದಿತ್ತು. ನೀವು ರನ್​ಗಳನ್ನು ಗಳಿಸುತ್ತಲೇ ಇರಬೇಕು. ವಿಕೆಟ್ ಕಳೆದುಕೊಂಡರೂ ಪಂದ್ಯವನ್ನು ಹಿಡಿತದಲ್ಲಿ ಇಟ್ಟುಕೊಳ್ಳಬೇಕು. ಜೊತೆಯಾಟ ಕೂಡ ಮುಖ್ಯ. ಇಂದು ಅವರ ಬೌಲಿಂಗ್ ಚೆನ್ನಾಗಿತ್ತು. ನಾವು ಅಂದುಕೊಂಡ ರೀತಿಯಲ್ಲಿ ಹೊಡೆತಗಳನ್ನು ಹೊಡೆಯಲು ಸಾಧ್ಯವಾಗಲಿಲ್ಲ,” ಎಂದು ಹೇಳಿದ್ದಾರೆ.

ಕ್ರೀಡಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:49 am, Tue, 3 May 22