
ಅಕ್ಟೋಬರ್ 2 ರಿಂದ ಪ್ರಾರಂಭವಾಗುವ ಭಾರತ ಮತ್ತು ವೆಸ್ಟ್ ಇಂಡೀಸ್ (India vs West Indies) ನಡುವಿನ ಟೆಸ್ಟ್ ಸರಣಿಗೆ ಟೀಂ ಇಂಡಿಯಾವನ್ನು ಇದೇ ಸೆಪ್ಟೆಂಬರ್ 24 ರಂದು ಪ್ರಕಟಿಸಬಹುದು ಎಂದು ವರದಿಯಾಗಿದೆ. ಆದರೆ ಈ ಆಯ್ಕೆ ಸಭೆಗೆ ಸ್ವಲ್ಪ ಮೊದಲು, ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್ಮನ್ ಶ್ರೇಯಸ್ ಅಯ್ಯರ್ (Shreyas Iyer) ಅಚ್ಚರಿಯ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ವಾಸ್ತವವಾಗಿ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ಅಯ್ಯರ್ ಅವರನ್ನು ಆಯ್ಕೆ ಮಾಡುವುದು ಖಚಿತ ಎನ್ನಲಾಗುತ್ತಿತ್ತು. ಆದರೆ ಅಯ್ಯರ್ ಈ ಸ್ವರೂಪದಿಂದ ವಿರಾಮ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ. ವರದಿಯ ಪ್ರಕಾರ, ದೀರ್ಘ ಸ್ವರೂಪಗಳಿಂದ (ಟೆಸ್ಟ್ ಮತ್ತು ದೇಶೀಯ ರೆಡ್-ಬಾಲ್ ಕ್ರಿಕೆಟ್) ವಿರಾಮ ತೆಗೆದುಕೊಳ್ಳುವ ನಿರ್ಧಾರದ ಬಗ್ಗೆ ಅಯ್ಯರ್, ಬಿಸಿಸಿಐಗೆ ಇಮೇಲ್ ಮೂಲಕ ತಿಳಿಸಿದ್ದಾರೆ.
ಇಂಡಿಯನ್ ಎಕ್ಸ್ಪ್ರೆಸ್ನ ವರದಿಯ ಪ್ರಕಾರ, ಅಯ್ಯರ್ ಬಿಸಿಸಿಐಗೆ ಇಮೇಲ್ ಬರೆದು, ಕೆಂಪು ಚೆಂಡಿನ ಕ್ರಿಕೆಟ್ನಿಂದ ಸ್ವಲ್ಪ ಸಮಯದವರೆಗೆ ವಿರಾಮ ತೆಗೆದುಕೊಳ್ಳಲು ಬಯಸುವುದಾಗಿ ಹೇಳಿದ್ದಾರೆ. ಶ್ರೇಯಸ್ ಅಯ್ಯರ್ ತಮ್ಮ ನಿರ್ಧಾರಕ್ಕೆ ದೀರ್ಘಕಾಲದ ಬೆನ್ನು ನೋವು ಮತ್ತು ಆಯಾಸ ಕಾರಣ ಎಂದು ಉಲ್ಲೇಖಿಸಿ, ಅದರಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಬಯಸುವುದಾಗಿ ಹೇಳಿದ್ದಾರೆ, ಅದಕ್ಕಾಗಿಯೇ ಅವರು ಸ್ವರೂಪದಿಂದ ವಿರಾಮ ತೆಗೆದುಕೊಳ್ಳುತ್ತಿದ್ದಾರೆ. ವರದಿಯ ಪ್ರಕಾರ, ಅಯ್ಯರ್ ತಮ್ಮ ನಿರ್ಧಾರದ ಬಗ್ಗೆ ಆಯ್ಕೆದಾರರಿಗೆ ತಿಳಿಸಿದ್ದು, ಆ ಬಳಿಕ ಔಪಚಾರಿಕ ಇಮೇಲ್ ಮೂಲಕ ಮಂಡಳಿಗೆ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ.
30 ವರ್ಷದ ಅಯ್ಯರ್ ಬೆನ್ನು ನೋವು ಸಮಸ್ಯೆಯಿಂದ ಬಳಲುತ್ತಿದ್ದು, ಪ್ರಸ್ತುತ ಐದು ದಿನಗಳ ಟೆಸ್ಟ್ ಕ್ರಿಕೆಟ್ ಅಥವಾ ರೆಡ್-ಬಾಲ್ ಕ್ರಿಕೆಟ್ ಅನ್ನು ಸಂಪೂರ್ಣವಾಗಿ ನಿಭಾಯಿಸಲು ಸಾಧ್ಯವಾಗುತ್ತಿಲ್ಲ ಎಂದು ಆಯ್ಕೆದಾರರಿಗೆ ತಿಳಿಸಿದ್ದಾರೆ ಎಂದು ವರದಿ ಬಹಿರಂಗಪಡಿಸಿದೆ. ವರದಿಯ ಪ್ರಕಾರ, ನಾಲ್ಕು ದಿನಗಳ ಪಂದ್ಯಗಳಲ್ಲಿ ವಿರಾಮ ತೆಗೆದುಕೊಳ್ಳಲು ಸಾಧ್ಯವಾದ ಕಾರಣ ಈ ವರ್ಷ ರಣಜಿ ಟ್ರೋಫಿಯಲ್ಲಿ ಆಡುತ್ತಿದ್ದೇನೆ, ಆದರೆ ಟೆಸ್ಟ್ ಕ್ರಿಕೆಟ್ ಆಡುವಾಗ ಅಥವಾ ಭಾರತ ಎ ಪರ ಆಡುವಾಗ ಹಾಗೆ ಮಾಡಲು ಸಾಧ್ಯವಿಲ್ಲ ಎಂದು ಅಯ್ಯರ್ ಸ್ಪಷ್ಟಪಡಿಸಿದ್ದಾರೆ. ಆದ್ದರಿಂದ, ನನ್ನ ದೇಹವು ಮತ್ತೆ ಟೆಸ್ಟ್ ಕ್ರಿಕೆಟ್ನ ಸವಾಲುಗಳನ್ನು ಎದುರಿಸಲು ಸಂಪೂರ್ಣವಾಗಿ ಸಿದ್ಧವಾಗುವವರೆಗೆ ಅವರು ಈ ಮಾದರಿಯಿಂದ ದೂರವಿರಲು ನಿರ್ಧರಿಸಿರುವುದಾಗಿ ಅಯ್ಯರ್ ತಿಳಿಸಿದ್ದಾರೆ.
ಪ್ರವಾಹ ಪೀಡಿತ ಪಂಜಾಬ್ ನೆರವಿಗೆ ಬರುವಂತೆ ಶ್ರೇಯಸ್ ಅಯ್ಯರ್ ಮನವಿ; ವಿಡಿಯೋ
ಆಸ್ಟ್ರೇಲಿಯಾ ಎ ವಿರುದ್ಧ ಎರಡು ಅನಧಿಕೃತ ಟೆಸ್ಟ್ ಪಂದ್ಯಗಳನ್ನು ಆಡುತ್ತಿರುವ ಭಾರತ ಎ ತಂಡದ ನಾಯಕನಾಗಿ ಅಯ್ಯರ್ ಇತ್ತೀಚೆಗೆ ನೇಮಕಗೊಂಡಿದ್ದರು. ಸರಣಿಯ ಮೊದಲ ಪಂದ್ಯವನ್ನು ಮುನ್ನಡೆಸಿದ್ದ ಅಯ್ಯರ್, ಕೇವಲ ಒಂದು ಇನ್ನಿಂಗ್ಸ್ನಲ್ಲಿ ಮಾತ್ರ ಬ್ಯಾಟಿಂಗ್ ಮಾಡಿ ಬೇಗನೇ ಔಟಾಗಿದ್ದರು. ಇದೀಗ ಸೆ. 23 ರಿಂದ ಆರಂಭವಾಗಿರುವ ಸರಣಿಯ ಅಂತಿಮ ಟೆಸ್ಟ್ ಪಂದ್ಯದಿಂದ ಅಯ್ಯರ್ ಹಿಂದೆ ಸರಿದಿದ್ದಾರೆ. ವೈಯಕ್ತಿಕ ಕಾರಣಗಳಿಂದ ಅಯ್ಯರ್ ಪಂದ್ಯದಿಂದ ಹಿಂದೆ ಸರಿದಿದ್ದಾರೆ ಎಂದು ವರದಿಯಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ