
ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ, ಭಾರತ ಮಹಿಳಾ ಕ್ರಿಕೆಟ್ ತಂಡದ ಉಪನಾಯಕಿ ಸ್ಮೃತಿ ಮಂಧಾನ (Smriti Mandhana) ಅವರು ವೈವಾಹಿಕ ಜೀವನಕ್ಕೆ ಕಾಲಿರಿಸಿ ಇಂದಿಗೆ ಒಂದು ವಾರಗಳಾಗಿರಬೇಕಿತ್ತು. ಈ ಮೊದಲೇ ನಿಗದಿಪಡಿಸಿದಂತೆ ಗಾಯಕ ಪಲಾಶ್ ಮುಚ್ಚಲ್ (Palash Muchhal) ಮತ್ತು ಸ್ಮೃತಿ ಮಂಧಾನ ಅವರ ವಿವಾಹ ನವೆಂಬರ್ 23 ರಂದು ನಡೆಯಬೇಕಿತ್ತು. ಆದರೆ ಮದುವೆಯ ಹಿಂದಿನ ದಿನದಂದು ಸ್ಮೃತಿ ಅವರ ತಂದೆ ಶ್ರೀನಿವಾಸ್ ಮಂಧಾನ ಅವರು ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಹೀಗಾಗಿ ಮದುವೆಯನ್ನು ಸಹ ಮುಂದೂಡಲಾಗಿತ್ತು. ಆಸ್ಪತ್ರೆಯಲ್ಲಿ ಮೂರು ದಿನಗಳ ಚಿಕಿತ್ಸೆ ಪಡೆದ ಬಳಿಕ ಶ್ರೀನಿವಾಸ್ ಮಂಧಾನ ಡಿಸ್ಚಾರ್ಜ್ ಆಗಿದ್ದರು. ಇದಾಗ್ಯೂ ಇವರಿಬ್ಬರ ಮದುವೆಯ ಬಗ್ಗೆ ಯಾವುದೇ ಮಾಹಿತಿ ಹೊರಬಿದ್ದಿರಲಿಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಡಿಸೆಂಬರ್ 7 ರಂದು ಈ ಜೋಡಿ ಹಸೆಮಣೆ ಏರಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಇದೀಗ ಆ ವದಂತಿಯ ಬಗ್ಗೆ ಮಂಧಾನ ಅವರ ಸಹೋದರ ಸ್ಪಷ್ಟನೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪಲಾಶ್ ಮುಚ್ಚಲ್ ಹಾಗೂ ಸ್ಮೃತಿ ಮಂಧಾನ ಅವರ ಮದುವೆಯ ಹೊಸ ದಿನಾಂಕದ ಬಗ್ಗೆ ಸ್ಪಷ್ಟನೆ ನೀಡಿರುವ ಸ್ಮೃತಿ ಅವರ ಸಹೋದರ ಶ್ರವಣ್ ಮಂಧಾನ ಹಿಂದೂಸ್ತಾನ್ ಟೈಮ್ಸ್ ಜೊತೆ ಮಾತನಾಡುತ್ತಾ, ‘ಡಿಸೆಂಬರ್ 7 ರಂದು ಸ್ಮೃತಿ ಮಂಧನಾ ಮತ್ತು ಪಲಾಶ್ ಮುಚ್ಚಲ್ ಅವರ ವಿವಾಹ ನಡೆಯಲಿದೆ ಎಂಬುದು ಶುದ್ಧ ಸುಳ್ಳು. ಈ ವದಂತಿಗಳ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಸದ್ಯಕ್ಕೆ ಮದುವೆಯನ್ನು ಮುಂದೂಡಲಾಗಿದೆ. ಹೀಗಾಗಿ ಯಾರು ಅನವಶ್ಯಕವಾಗಿ ವದಂತಿಗಳನ್ನು ಹರಡಬಾರದು’ ಎಂದಿದ್ದಾರೆ.
ಆಸ್ಪತ್ರೆಯಿಂದ ಸ್ಮೃತಿ ಮಂಧಾನ ತಂದೆ ಡಿಸ್ಚಾರ್ಜ್; ಮದುವೆ ಬಗ್ಗೆ ಮೂಡಿವೆ ಅನುಮಾನಗಳು
ನವೆಂಬರ್ 22 ರ ರಾತ್ರಿ ಸ್ಮೃತಿ ಮಂಧಾನ ಅವರ ತಂದೆ ಅನಾರೋಗ್ಯಕ್ಕೆ ಒಳಗಾದರು, ಇದರಿಂದಾಗಿ ಮದುವೆಯನ್ನು ಮುಂದೂಡಬೇಕಾಯಿತು. ಇತ್ತ ವರ ಪಲಾಶ್ ಅವರ ಆರೋಗ್ಯವೂ ಹದಗೆಟ್ಟಿದ್ದರಿಂದ ಅವರನ್ನು ಸಹ ಆಸ್ಪತ್ರೆಗೆ ದಾಖಲಿಸಲಾಯಿತು. ಇದೆಲ್ಲದರ ನಡುವೆ ಪಲಾಶ್ ನೃತ್ಯ ನಿರ್ದೇಶಕಿಯೊಂದಿಗೆ ಸಂಬಂಧ ಹೊಂದಿದ್ದಾರೆ, ಇದು ಮದುವೆ ಮುಂದೂಡಿಕೆಗೆ ನಿಜವಾದ ಕಾರಣ ಎಂಬ ವರದಿಗಳು ಸಹ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದವು. ಹಾಗೆಯೇ ಪಲಾಶ್, ನೃತ್ಯ ನಿರ್ದೇಶಕಿಯೊಂದಿಗೆ ಚಾಟ್ ಮಾಡಿರುವ ಸ್ಕ್ರೀನ್ಶಾಟ್ಗಳು ಸಹ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಆದರೆ ಈ ಬಗ್ಗೆ ಸ್ಮೃತಿ ಅಥವಾ ಪಲಾಶ್ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಸ್ಮೃತಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಿಂದ ಮದುವೆಗೆ ಸಂಬಂಧಿಸಿದ ಎಲ್ಲಾ ಪೋಸ್ಟ್ಗಳನ್ನು ಡಿಲೀಟ್ ಮಾಡಿದ್ದರು. ಇದು ವದಂತಿಗಳಿಗೆ ರೆಕ್ಕೆಪುಕ್ಕಗಳನ್ನು ನೀಡಿತ್ತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ