T20 World Cup 2024: ಬಾಬರ್ ಆಝಂ ಸರ್ವಾಧಿಕಾರಿ ಧೋರಣೆಯಿಂದ ಪಾಕ್ ತಂಡದಲ್ಲಿ ಒಡಕು..!
T20 World Cup 2024: ಅಮೆರಿಕ ವಿರುದ್ಧದ ಪಂದ್ಯದಲ್ಲಿ ಬಾಬರ್ ಆಝಂ ತೆಗೆದುಕೊಂಡ ಹಲವು ನಿರ್ಧಾರಗಳು ಪಾಕಿಸ್ತಾನ ಆಟಗಾರರ ಕೋಪಕ್ಕೆ ಕಾರಣವಾಗಿದೆ. ಅನೇಕ ನಿರ್ಧಾರಗಳನ್ನು ಬಾಬರ್ ಒಬ್ಬರೇ ತೆಗೆದುಕೊಳ್ಳುವುದು ಇತರ ಆಟಗಾರರು ಅಸಮಾಧಾನಗೊಳ್ಳುವಂತೆ ಮಾಡಿದೆ.

ಟಿ20 ವಿಶ್ವಕಪ್ನಲ್ಲಿ (T20 World Cup 2024) ಅಮೆರಿಕ ವಿರುದ್ಧದ ಪಂದ್ಯದಲ್ಲಿ ಸೋತ ನಂತರ ಪಾಕಿಸ್ತಾನ ತಂಡದ (Pakistan vs America) ತಯಾರಿಯ ಬಗ್ಗೆ ಸಾಕಷ್ಟು ಪ್ರಶ್ನೆಗಳನ್ನು ಎತ್ತಲಾಗುತ್ತಿದೆ. ಕ್ರಿಕೆಟ್ ಶಿಶು ರಾಷ್ಟ್ರ ವಿರುದ್ಧದ ಸೋಲು ಪಾಕಿಸ್ತಾನ ಕ್ರಿಕೆಟ್ನಲ್ಲಿ ಕೋಲಾಹಲ ಎಬ್ಬಿಸಿದೆ. ಇದರೊಂದಿಗೆ ತಂಡದ ನಾಯಕ ಬಾಬರ್ ಆಝಂ (Babar Azam) ಮೇಲೆಯೂ ಹಲವು ಪ್ರಶ್ನೆಗಳು ಎದ್ದಿವೆ. ಪಂದ್ಯದ ನಂತರ ಮಾತನಾಡಿದ್ದ ನಾಯಕ ಬಾಬರ್, ಪಂದ್ಯದ ಸೋಲಿಗೆ ತಮ್ಮ ತಂಡದ ಆಟಗಾರರ ಕಾರಣ ಎಂದಿದ್ದರು. ಇದಾದ ಬಳಿಕ ಬಾಬರ್ ಅವರ ಹೇಳಿಕೆಗೆ ತಂಡದ ಆಟಗಾರರಿಂದ ವಿರೋಧ ವ್ಯಕ್ತವಾಗಿದೆ. ಹಾಗೆಯೇ ಪಾಕ್ ತಂಡದಲ್ಲಿ ಒಡಕು ಉಂಟಾಗಿದೆ ಎಂದು ಪಾಕಿಸ್ತಾನದ ಮಾಧ್ಯಮಕ್ಕೆ ಸಂಬಂಧಿಸಿದ ಪತ್ರಕರ್ತರೊಬ್ಬರು ಬರೆದುಕೊಂಡಿದ್ದಾರೆ.
ಪಾಕ್ ಪತ್ರಕರ್ತ ಹೇಳಿದ್ದೇನು?
ವಾಸ್ತವವಾಗಿ, ಪಾಕಿಸ್ತಾನಿ ಪತ್ರಕರ್ತರೊಬ್ಬರು ಬಾಬರ್ ಆಝಂ ಅವರ ಸರ್ವಾಧಿಕಾರಿ ಧೋರಣೆಯು ಅನೇಕ ಆಟಗಾರರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ. ಜಿಯೋ ನ್ಯೂಸ್ ಚಾನೆಲ್ ವರದಿಗಾರ ಅರ್ಫಾ ಫಿರೋಜ್ ಅವರ ಪ್ರಕಾರ, ಬಾಬರ್ ಆಝಂ ಅವರ ಸರ್ವಾಧಿಕಾರಿ ಧೋರಣೆಯು ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಚರ್ಚೆಯ ವಿಷಯವಾಗಿದೆ ಎಂದು ಮೂಲಗಳು ಹೇಳಿವೆ. ಇದರಿಂದ ಹಲವು ಆಟಗಾರರು ಕೋಪಗೊಂಡಿರುವುದಲ್ಲದೆ, ಬಾಬರ್ ಯಾರ ಮಾತನ್ನೂ ಕೇಳುವುದಿಲ್ಲ ಎಂಬುದು ಕೂಡ ಆಟಗಾರರ ನಡುವೆ ಭಿನ್ನಮತ ಸ್ಫೋಟಗೊಳ್ಳಲು ಕಾರಣವಾಗಿದೆ.
Sources say the DICTATOR mindset of BABAR AZAM has become a point of serious concern for other players of Pakistan Cricket Team!🙏 #T20WorldCup
— Arfa Feroz Zake (@ArfaSays_) June 7, 2024
ಅನೇಕ ನಿರ್ಧಾರಗಳಿಂದ ಅತೃಪ್ತಿ
ಅರ್ಫಾ ಫಿರೋಜ್ ತಮ್ಮ ಎಕ್ಸ್ ಹ್ಯಾಂಡಲ್ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದು ಇದರಲ್ಲಿ ಅವರು, ಅಮೆರಿಕ ವಿರುದ್ಧದ ಪಂದ್ಯದಲ್ಲಿ ಬಾಬರ್ ಆಝಂ ತೆಗೆದುಕೊಂಡ ಹಲವು ನಿರ್ಧಾರಗಳು ಪಾಕಿಸ್ತಾನ ಆಟಗಾರರ ಕೋಪಕ್ಕೆ ಕಾರಣವಾಗಿದೆ. ಅನೇಕ ನಿರ್ಧಾರಗಳನ್ನು ಬಾಬರ್ ಒಬ್ಬರೇ ತೆಗೆದುಕೊಳ್ಳುವುದು ಇತರ ಆಟಗಾರರು ಅಸಮಾಧಾನಗೊಳ್ಳುವಂತೆ ಮಾಡಿದೆ. ಹಾಗೆಯೇ ಪಂದ್ಯದಲ್ಲಿ ಇತರ ಆಟಗಾರರೊಂದಿಗೆ ಚರ್ಚಿಸಿದ ಅನೇಕ ನಿರ್ಧಾರಗಳನ್ನು ಬಾಬರ್ ಒಬ್ಬರೆ ತೆಗೆದುಕೊಂಡರು. ಇದರರ್ಥ ಬಾಬರ್ ತಂಡದ ಇತರ ಆಟಗಾರರ ಮಾತನ್ನು ಕೇಳುವುದಿಲ್ಲ ಎಂದು ಹೇಳಲಾಗುತ್ತಿದೆ. ಇದು ಸಾಲದೆಂಬಂತೆ ಕಳಪೆ ಫೀಲ್ಡಿಂಗ್ ನಂತರ ಬಾಬರ್ ತಂಡದ ಆಟಗಾರರ ಮೇಲೆ ಕೋಪವನ್ನು ವ್ಯಕ್ತಪಡಿಸಿದ್ದರು. ಹ್ಯಾರಿಸ್ ರೌಫ್ ಎಸೆದ 20ನೇ ಓವರ್ನ ಕೊನೆಯ ಎಸೆತದಲ್ಲಿ ನಿತೀಶ್ ಕುಮಾರ್ ಬೌಂಡರಿ ಬಾರಿಸಿದಾಗ ಬಾಬರ್ ತುಂಬಾ ಕೋಪಗೊಂಡಿದ್ದರು. ನಾಯಕನ ಈ ರೀತಿಯ ವರ್ತನೆ ಆಟಗಾರರಲ್ಲಿ ಕೋಪ ತರಿಸಿದೆ ಎಂದು ಹೇಳಲಾಗುತ್ತಿದೆ.
Sources say the DICTATOR mindset of BABAR AZAM has become a point of serious concern for other players of Pakistan Cricket Team!🙏 #T20WorldCup
— Arfa Feroz Zake (@ArfaSays_) June 7, 2024
ಮೊಹಮ್ಮದ್ ಅಮೀರ್ ಮಾತು ಕೇಳಲಿಲ್ಲ
ಇದು ಸಾಲದೆಂಬಂತೆ ಪಂದ್ಯದ ನಿರ್ಣಾಯಕ ಹಂತದಲ್ಲಿ ತನ್ನ ಓವರ್ ಮುಗಿದ ನಂತರ ಮೊಹಮ್ಮದ್ ಅಮೀರ್ ಮತ್ತೊಬ್ಬ ವೇಗದ ಬೌಲರ್ಗೆ ಓವರ್ ನೀಡುವಂತೆ ಸಲಹೆ ನೀಡಿದ್ದರು. ಆದರೆ ಬಾಬರ್ ಅದನ್ನು ನಿರ್ಲಕ್ಷಿಸಿ ಸ್ಪಿನ್ನರ್ಗೆ ಅವಕಾಶ ನೀಡಿದರು. ಇದು ಕೂಡ ಪಂದ್ಯದ ಸೋಲಿಗೆ ಕಾರಣವಾಗಿತ್ತು. ಇದೆಲ್ಲ ಕಾರಣಗಳಿಂದ ಪಾಕ್ ತಂಡದಲ್ಲಿ ಒಡಕು ಮೂಡಿದೆ ಎಂದು ವರದಿಯಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ