ಕೊನೆಗೂ ಟೀಂ ಇಂಡಿಯಾ 2024 ರ ಟಿ20 ವಿಶ್ವಕಪ್ನ ಪ್ರಶಸ್ತಿಯನ್ನು ಎತ್ತಿಹಿಡಿಯುವಲ್ಲಿ ಯಶಸ್ವುಯಾಗಿದೆ. ಉಸಿರುಗಟ್ಟಿಸುವ ಪಂದ್ಯದಲ್ಲಿ ಭಾರತ 7 ರನ್ಗಳಿಂದ ದಕ್ಷಿಣ ಆಫ್ರಿಕಾವನ್ನು ಸೋಲಿಸುವ ಮೂಲಕ ಈ ಪ್ರಶಸ್ತಿಯನ್ನು ಗೆದ್ದುಕೊಂಡಿತು. 2007ರ ನಂತರ ಭಾರತ ಎರಡನೇ ಬಾರಿಗೆ ಈ ಪ್ರಶಸ್ತಿ ಜಯಿಸಿದೆ. ಅದೇ ಸಮಯದಲ್ಲಿ, ದಕ್ಷಿಣ ಆಫ್ರಿಕಾದ ಮೊದಲ ಬಾರಿಗೆ ವಿಶ್ವಕಪ್ ಪ್ರಶಸ್ತಿಯನ್ನು ಗೆಲ್ಲುವ ಕನಸು ನನಸಾಗಿಲ್ಲ. ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಭಾರತಕ್ಕೆ ಕಠಿಣ ಹೋರಾಟ ನೀಡಿದರೂ ಪಂದ್ಯ ಗೆಲ್ಲುವಲ್ಲಿ ವಿಫಲವಾಯಿತು. ಈ ಪಂದ್ಯದ ನಂತರ ಭಾರತ ತಂಡದ ಪಾಳಯದಲ್ಲಿ ತಡರಾತ್ರಿಯವರೆಗೂ ಸಂಭ್ರಮಾಚರಣೆ ನಡೆಯಿತು. ಇದೇ ವೇಳೆ ಮೈದಾನದಲ್ಲಿ ದಕ್ಷಿಣ ಆಫ್ರಿಕಾ ಆಟಗಾರರು ಅಳುತ್ತಿರುವುದು ಕಂಡು ಬಂತು. ಪಂದ್ಯದ ನಂತರ ದಕ್ಷಿಣ ಆಫ್ರಿಕಾದ ನಾಯಕ ತಮ್ಮ ಸೋಲಿನ ಬಗ್ಗೆ ಮಾತನಾಡಿದರು.
ಪಂದ್ಯದ ನಂತರ ಮಾತನಾಡಿದ ದಕ್ಷಿಣ ಆಫ್ರಿಕಾದ ನಾಯಕ ಏಡನ್ ಮಾರ್ಕ್ರಾಮ್, ‘ತುಂಬಾ ನಿರಾಶೆಯಾಗಿದೆ. ನಮ್ಮ ತಂಡ ನಿಜವಾಗಿಯೂ ಉತ್ತಮ ಪ್ರದರ್ಶನ ನೀಡಿದೆ. ನನ್ನ ತಂಡದ ಆಟಗಾರರು ಮತ್ತು ಸಹ ಆಟಗಾರರ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ನನ್ನ ತಂಡದ ಬೌಲರ್ಗಳು ಅದ್ಭುತವಾಗಿ ಬೌಲಿಂಗ್ ಮಾಡಿದ್ದಾರೆ. ನಾವು ಭಾರತವನ್ನು ಉತ್ತಮ ಗುರಿಗೆ ಸೀಮಿತಗೊಳಿಸಿದ್ದೇವು. ಈ ಗುರಿಯನ್ನು ನಾವು ಸಾಧಿಸಬಹುದು ಎಂಬ ವಿಶ್ವಾಸವಿತ್ತು. ಪಿಚ್ ಚೆನ್ನಾಗಿತ್ತು, ನಾವು ಕೂಡ ಚೆನ್ನಾಗಿ ಬ್ಯಾಟ್ ಮಾಡಿದ್ದೇವು.
ಆದರೆ ನಾವು ಕೊನೆಯಲ್ಲಿ ಒತ್ತಡಕ್ಕೆ ಸಿಲುಕಿದ್ದೇವು. ಹೀಗಾಗಿ ಪಂದ್ಯ ಬಹುಬೇಗ ಬದಲಾಯಿತು. ನಾವು ಕೊನೆಯವರೆಗೂ ಪಂದ್ಯದಲ್ಲೇ ಇದ್ದೆವು. ನಾವು ಫೈನಲಿಸ್ಟ್ ಆಗಲು ಅರ್ಹರು ಎಂದು ಇದು ಸಾಬೀತುಪಡಿಸುತ್ತದೆ. ನಾವು ಈ ಪಂದ್ಯವನ್ನು ಗೆಲ್ಲಬಹುದಿತ್ತು. ಇದನ್ನು ಮಾಡಲು ಸಾಧ್ಯವಾಗದಿರುವುದು ನಮ್ಮ ದೌರ್ಭಾಗ್ಯ. ಪಂದ್ಯ ಸೋತರೂ ನಮ್ಮ ತಂಡದ ಬಗ್ಗೆ ನಮಗೆ ಹೆಮ್ಮೆಯಿದೆ. ಇದು ನಮ್ಮ ಭವಿಷ್ಯವನ್ನು ಉತ್ತಮಗೊಳಿಸುತ್ತದೆ ಎಂಬ ಸಂಪೂರ್ಣ ಭರವಸೆ ನಮಗಿದೆ. ಇದೀಗ ದಕ್ಷಿಣ ಆಫ್ರಿಕಾದ ಬಗ್ಗೆ ಪ್ರಪಂಚದಾದ್ಯಂತ ಮಾತನಾಡಲಾಗುತ್ತಿದೆ. ಇಲ್ಲಿಂದ ಕಲಿತು ಮತ್ತಷ್ಟು ಸುಧಾರಿಸಿಕೊಳ್ಳುತ್ತೇವೆ. ಸದ್ಯಕ್ಕೆ, ನಾವು ಎಷ್ಟು ತಲುಪಿದ್ದೇವೆ ಎಂಬುದರ ಬಗ್ಗೆ ನಮಗೆ ಹೆಮ್ಮೆ ಇದೆ’ ಎಂದರು.
ಈ ಬಾರಿಯ ವಿಶ್ವಕಪ್ನಲ್ಲಿ ದಕ್ಷಿಣ ಆಫ್ರಿಕಾ ಅದ್ಭುತ ಪ್ರದರ್ಶನ ನೀಡಿದೆ. ತಂಡವು ಗ್ರೂಪ್ ಹಂತ ಮತ್ತು ಸೂಪರ್-8 ಸುತ್ತಿನಲ್ಲಿ ಆಡಿದ ಎಲ್ಲಾ ಪಂದ್ಯಗಳನ್ನು ಗೆದ್ದಿದೆ. ಇದಾದ ಬಳಿಕ ತಂಡ ಸೆಮಿಫೈನಲ್ನಲ್ಲಿ ಅಫ್ಘಾನಿಸ್ತಾನವನ್ನು ಸೋಲಿಸಿ ಫೈನಲ್ಗೆ ಲಗ್ಗೆ ಇಟ್ಟಿತು. ಅಂತಿಮ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಭಾರತದಿಂದ ಸೋಲನುಭವಿಸಬೇಕಾಯಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ