
ಶಾರ್ಜಾ ಮೈದಾನದಲ್ಲಿ ನಡೆದ 19 ವರ್ಷದೊಳಗಿನವರ ಏಷ್ಯಾಕಪ್ನಲ್ಲಿ ಇಂದು ನಡೆದ ಸೆಮಿಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಏಕಪಕ್ಷೀಯವಾಗಿ ಸೋಲಿಸಿದ ಭಾರತ ಯುವಪಡೆ ಮೊದಲ ತಂಡವಾಗಿ ಫೈನಲ್ಗೇರಿದೆ. ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ 173 ರನ್ಗಳಿಗೆ ಆಲೌಟ್ ಆಯಿತು. ಈ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಕೇವಲ 22 ಓವರ್ಗಳಲ್ಲೇ ಜಯದ ನಗೆ ಬೀರಿತು. ತಂಡದ ಪರ ಸ್ಫೋಟಕ ಬ್ಯಾಟಿಂಗ್ ಮಾಡಿದ ವೈಭವ್ ಸೂರ್ಯವಂಶಿ 67 ರನ್ಗಳ ಗೆಲುವಿನ ಇನ್ನಿಂಗ್ಸ್ ಆಡಿದರು.
ಈ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾದ ನಾಯಕ ವಿಹಾಸ್ ಥೇವ್ಮಿಕಾ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಆದರೆ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ಪುಲಿಂದು ಪೆರೆರಾ ಅವರು ಐದು ಎಸೆತಗಳಲ್ಲಿ ಒಂದು ಬೌಂಡರಿ ಸಹಾಯದಿಂದ ಆರು ರನ್ ಗಳಿಸಿ ಮೂರನೇ ಓವರ್ನಲ್ಲಿ ರನ್ ಔಟ್ ಆದರು. ಮುಂದಿನ ಓವರ್ನಲ್ಲಿ ಚೇತನ್, ಮತ್ತೊಬ್ಬ ಆರಂಭಿಕ ದುಲ್ನಿತ್ ಸಿಗೇರಾ ಅವರನ್ನು ಬೌಲ್ಡ್ ಮಾಡುವ ಮೂಲಕ ಶ್ರೀಲಂಕಾಕ್ಕೆ ಎರಡನೇ ಹೊಡೆತ ನೀಡಿದರು. ದುಲ್ನಿತ್ 16 ಎಸೆತಗಳನ್ನು ಆಡಿ ಎರಡು ರನ್ ಗಳಿಸಿ ಔಟಾದರು. ಚೇತನ್ ನಂತರದ ಎಸೆತದಲ್ಲಿಯೇ ವಿಮತ್ ದಿನಸಾರಾ ಅವರನ್ನು ಎಲ್ಬಿಡಬ್ಲ್ಯೂ ಮಾಡುವ ಮೂಲಕ ಶ್ರೀಲಂಕಾದ ಇನ್ನಿಂಗ್ಸ್ಗೆ ಶಾಕ್ ನೀಡಿದರು. ದಿನಸಾರಾ ಖಾತೆ ತೆರೆಯದೆ ಪೆವಿಲಿಯನ್ಗೆ ಮರಳಿದರು.
ಆರಂಭಿಕ ಹಿನ್ನಡೆಯ ನಂತರ, ವಿಕೆಟ್ಕೀಪರ್ ಬ್ಯಾಟ್ಸ್ಮನ್ಗಳಾದ ಶರುಜನ್ ಷಣ್ಮುಗನಾಥನ್ ಮತ್ತು ಲವ್ಕಿನ್ ಅಬೆಸಿಂಘೆ ಶ್ರೀಲಂಕಾದ ಇನ್ನಿಂಗ್ಸ್ ನಿಭಾಯಿಸಿ ನಾಲ್ಕನೇ ವಿಕೆಟ್ಗೆ 93 ರನ್ಗಳ ಜೊತೆಯಾಟ ನಡೆಸಿದರು. ಇಬ್ಬರೂ ಬ್ಯಾಟ್ಸ್ಮನ್ಗಳು ನಿಧಾನವಾಗಿ ಅರ್ಧಶತಕದತ್ತ ಸಾಗುತ್ತಿದ್ದರು. ಆದರೆ ಶರುಜನ್ ಅವರನ್ನು ಆಯುಷ್ ಮ್ಹಾತ್ರೆ ಬೌಲ್ಡ್ ಮಾಡಿ ಈ ಜೊತೆಯಾಟವನ್ನು ಮುರಿದರು. ಶರುಜನ್ 78 ಎಸೆತಗಳಲ್ಲಿ ಎರಡು ಬೌಂಡರಿಗಳ ನೆರವಿನಿಂದ 42 ರನ್ ಗಳಿಸಿ ಔಟಾದರು. ಇದಾದ ಬಳಿಕ ಆಯುಷ್ 10 ರನ್ ಗಳಿಸಿದ್ದ ಕವಿಜಾ ಗಮಗೆ ಅವರನ್ನು ಔಟ್ ಮಾಡಿದರು. ನಾಯಕ ವಿಹಾಸ್ ಕೂಡ 17 ಎಸೆತಗಳಲ್ಲಿ ಎರಡು ಬೌಂಡರಿಗಳ ನೆರವಿನಿಂದ 14 ರನ್ ಗಳಿಸಿ ಔಟಾದರು.
ಸತತ ವಿಕೆಟ್ಗಳ ಪತನದ ನಡುವೆಯೂ, ಲವ್ಕಿನ್ ಏಕಾಂಗಿಯಾಗಿ ಭಾರತೀಯ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದರು. ಆದರೆ ಅರ್ಧಶತಕ ಬಾರಿಸಿದ ತಕ್ಷಣವೇ ಲವ್ಕಿನ್ ವಿಕೆಟ್ ಒಪ್ಪಿಸಿದರು. ಲುವ್ಕಿನ್ ಔಟಾದ ಕೂಡಲೇ ಲಂಕಾ ತಂಡದ ಪೆವಿಲಿಯನ್ ಪರೇಡ್ ಆರಂಭವಾಯಿತು. ಹೀಗಾಗಿ ಇಡೀ ತಂಡ ಪೂರ್ಣ 50 ಓವರ್ಗಳನ್ನು ಆಡಲು ಸಾಧ್ಯವಾಗದೆ 46.2 ಓವರ್ಗಳಲ್ಲಿ 173 ರನ್ಗಳಿಗೆ ಆಲೌಟ್ ಆಯಿತು.
ಈ ಗುರಿ ಬೆನ್ನಟ್ಟಿದ ಭಾರತಕ್ಕೆ ಭರ್ಜರಿ ಆರಂಭ ಸಿಕ್ಕಿತು. ಆರಂಭಿಕರಾದ ವೈಭವ್ ಸೂರ್ಯವಂಶಿ ಮತ್ತು ಆಯುಷ್ ಮ್ಹಾತ್ರೆ ಭಾರತಕ್ಕೆ ಆಕ್ರಮಣಕಾರಿ ಆರಂಭವನ್ನು ನೀಡಿದರು. ಹೀಗಾಗಿ ಭಾರತ 12 ಓವರ್ಗಳ ಅಂತ್ಯಕ್ಕೆ ಒಂದು ವಿಕೆಟ್ಗೆ 121 ರನ್ ಗಳಿಸಿತು. ಈ ಇಬ್ಬರು ಮೊದಲ ವಿಕೆಟ್ಗೆ 91 ರನ್ಗಳ ಜೊತೆಯಾಟವನ್ನಾಡಿದರು.
ಇದರಲ್ಲಿ ಮತ್ತೊಮ್ಮೆ ಸ್ಫೋಟಕ ಬ್ಯಾಟಿಂಗ್ ಮಾಡಿದ 13 ವರ್ಷದ ವೈಭವ್ ಸೂರ್ಯವಂಶಿ ಕೇವಲ 24 ಎಸೆತಗಳಲ್ಲಿ ವೇಗದ ಅರ್ಧಶತಕ ಪೂರೈಸಿದರು. ಇದಾದ ಬಳಿಕವೂ ಅವರು ಆಕ್ರಮಣಕಾರಿ ಬ್ಯಾಟಿಂಗ್ ನಡೆಸಿ 36 ಎಸೆತಗಳಲ್ಲಿ 67 ರನ್ಗಳ ಬಿರುಸಿನ ಆಟವಾಡಿದರು. ಈ ವೇಳೆ ಅವರ ಬ್ಯಾಟ್ನಿಂದ 6 ಬೌಂಡರಿ ಹಾಗೂ ಐದು ಸಿಕ್ಸರ್ಗಳು ಸಿಡಿದವು. ಅವರನ್ನು ಹೊರತುಪಡಿಸಿ, ಆಯುಷ್ ಮ್ಹಾತ್ರೆ 28 ಎಸೆತಗಳಲ್ಲಿ 34 ರನ್ ಮತ್ತು ನಾಯಕ ಮೊಹಮ್ಮದ್ ಅಮಾನ್ ಅಜೇಯ 25 ರನ್ ಕೊಡುಗೆ ನೀಡಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ