ಯೋಧನ ಸೆಲ್ಫಿ ಮನವಿಗೆ ಕೊಹ್ಲಿ ನಕಾರ; ರೋಹಿತ್​ರನ್ನು ನೋಡಿ ಕಲಿರಿ ಎಂದ ಫ್ಯಾನ್ಸ್; ವಿಡಿಯೋ ವೈರಲ್

Virat Kohli's Selfie Denial: ವಿರಾಟ್ ಕೊಹ್ಲಿ ಸೈನಿಕನೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ನಿರಾಕರಿಸಿದ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ. ಇದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಕೊಹ್ಲಿಯ ವರ್ತನೆಗೆ ಅನೇಕರು ಟೀಕಿಸಿದ್ದು, ರೋಹಿತ್​ ಶರ್ಮಾರನ್ನು ನೋಡಿ ಕಲಿಯಿರಿ ಎಂದು ಹಲವರು ಕೊಹ್ಲಿಗೆ ವಿನಮ್ರತೆಯ ಪಾಠ ಮಾಡಿದ್ದಾರೆ.

ಯೋಧನ ಸೆಲ್ಫಿ ಮನವಿಗೆ ಕೊಹ್ಲಿ ನಕಾರ; ರೋಹಿತ್​ರನ್ನು ನೋಡಿ ಕಲಿರಿ ಎಂದ ಫ್ಯಾನ್ಸ್; ವಿಡಿಯೋ ವೈರಲ್
ವಿರಾಟ್ ಕೊಹ್ಲಿ

Updated on: Jan 22, 2025 | 4:52 PM

ವಿರಾಟ್ ಕೊಹ್ಲಿ.. ಆಧುನಿಕ ಕ್ರಿಕೆಟ್​ ಲೋಕದ ಅನಭಿಷಿಕ್ತ ದೊರೆ ಎಂದು ಹೇಳಿದರೆ ತಪ್ಪಾಗಲಾರದು. ಈ ಕ್ರಿಕೆಟ್ ಸಾಮ್ರಾಟನಿಗೆ ಭಾರತದಲ್ಲಿ ಮಾತ್ರವಲ್ಲದೆ ಇಡೀ ವಿಶ್ವದಲ್ಲೇ ಅಸಂಖ್ಯಾತ ಅಭಿಮಾನಿಗಳಿದ್ದಾರೆ. ಕೊಹ್ಲಿ ಕೂಡ ತನ್ನ ಅಭಿಮಾನಿ ಬಳಗದೊಂದಿಗೆ ನಯವಾಗಿ ನಡೆದುಕೊಳ್ಳುವ ಮೂಲಕ ಎಲ್ಲರ ಆರಾಧ್ಯ ದೈವ ಎನಿಸಿಕೊಂಡಿದ್ದಾರೆ. ಆದಾಗ್ಯೂ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಅದೊಂದು ವಿಡಿಯೋ ಕೊಹ್ಲಿ ಮೇಲೆ ಸಹಸ್ರಾರು ಅಭಿಮಾನಿಗಳು ಕೋಪಗೊಳ್ಳುವಂತೆ ಮಾಡಿದೆ. ದೇಶ ಕಾಯುವ ಸೈನಿಕನ ಸೆಲ್ಫಿ ಮನವಿಗೆ ವಿರಾಟ್ ಕೊಹ್ಲಿ ಒಲ್ಲೆ ಎಂದಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ನಮ್ಮ ಮತ್ತು ದೇಶದ ಭದ್ರತೆಗಾಗಿ ಹಗಲಿರುಳು ಶ್ರಮಿಸುವ ಯೋಧನೊಂದಿಗೆ ವಿರಾಟ್ ಸೆಲ್ಫಿ ತೆಗೆದುಕೊಂಡಿದ್ದರೆ ಏನಾಗುತ್ತಿತ್ತು ಎಂದು ಹಲವರು ಕೊಹ್ಲಿಯನ್ನು ಪ್ರಶ್ನಿಸುತ್ತಿದ್ದಾರೆ.

ವೈರಲ್ ವಿಡಿಯೋದಲ್ಲಿ ಏನಿದೆ?

ಮೊದಲನೆಯದಾಗಿ, ವಿರಾಟ್ ಕೊಹ್ಲಿಯ ವೈರಲ್ ವಿಡಿಯೋದಲ್ಲಿ ಏನಿದೆ ಎಂಬುದನ್ನು ನೋಡುವುದಾದರೆ.. ಈ ವೈರಲ್ ವಿಡಿಯೋ ಮುಂಬೈನದ್ದಾಗಿದ್ದು, ವಿರಾಟ್ ಕಾರಿನಿಂದ ಇಳಿದು ಸ್ವಲ್ಪ ದೂರ ನಡೆದ ನಂತರ ಒಂದೆಡೆ ನಿಲ್ಲುತ್ತಾರೆ. ಈ ವೇಳೆ ಅಲ್ಲಿಯೇ ನಿಂತಿದ್ದ ಸೈನಿಕನೊಬ್ಬ ತನ್ನ ಮೊಬೈಲ್ ಫೋನ್ ತೆಗೆದು ಸೆಲ್ಫಿಗಾಗಿ ಕೊಹ್ಲಿ ಬಳಿ ವಿನಂತಿಸುತ್ತಾನೆ. ಆದರೆ ವಿರಾಟ್ ತನ್ನ ಕೈಗಳಿಂದ ಸನ್ನೆ ಮಾಡುವ ಮೂಲಕ ಯೋಧನ ಸೆಲ್ಫಿ ಮನವಿಯನ್ನು ನಿರಾಕರಿಸುತ್ತಾರೆ.

ರೋಹಿತ್ ನೋಡಿ ಕಲಿಯಿರಿ ಎಂದ ಫ್ಯಾನ್ಸ್

ಈ ವಿಡಿಯೋ ವೈರಲ್ ಆದ ದಿನವೇ, ರೋಹಿತ್ ಶರ್ಮಾ ಅವರ ಇನ್ನೊಂದು ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅದರಲ್ಲಿ ಅವರು ಸೇನಾ ಅಧಿಕಾರಿಯೊಂದಿಗೆ ಫೋಟೋಗೆ ಪೋಸ್ ನೀಡಿದ್ದಾರೆ. ಸೇನಾಧಿಕಾರಿಯ ಕೋರಿಕೆಯ ಮೇರೆಗೆ ರೋಹಿತ್ ಈ ಫೋಟೋ ತೆಗೆಸಿಕೊಂಡಿದ್ದಾರೆ ಎಂಬುದನ್ನು ನಾವು ಅರಿತುಕೊಳ್ಳಬಹುದಾಗಿದೆ. ರೋಹಿತ್, ದೇಶದ ಸೈನಿಕನೊಂದಿಗೆ ಬಹಳ ವಿನಮ್ರತೆಯಿಂದ ಹೇಗೆ ನಡೆದುಕೊಂಡಿದ್ದಾರೋ, ಹಾಗೇ ನಡೆದುಕೊಳ್ಳಲು ವಿರಾಟ್ ಕೊಹ್ಲಿಗೆ ಸಾಧ್ಯವಾಗಿಲ್ಲ.

ಇದು ವಿರಾಟ್ ಕೊಹ್ಲಿ ರೋಹಿತ್ ಅವರಿಂದ ಕಲಿಯಬೇಕಾದ ಪಾಠ ಎಂದು ನೆಟ್ಟಿಗರು ಕೊಹ್ಲಿಗೆ ವಿನಮ್ರತೆಯ ಪಾಠ ಮಾಡಿದ್ದಾರೆ. ಆದರೆ ಕೊಹ್ಲಿಯನ್ನು ಬಹಳ ವರ್ಷಗಳಿಂದ ನೋಡಿಕೊಂಡು ಬಂದವರಿಗೆ ಕೊಂಚ ಆಘಾತವಾಗಿದೆ. ಏಕೆಂದರೆ ಪ್ರತಿಯೊಬ್ಬರ ಮನವಿಗೂ ಮಿಡಿಯುವ ಹೃದಯವಂತರಾಗಿರುವ ಕೊಹ್ಲಿ, ಯೋಧನೊಂದಿಗೆ ಈ ರೀತಿ ನಡೆದುಕೊಂಡಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 4:48 pm, Wed, 22 January 25

pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Follow Us