WPL 2024: ರಾಯಲ್ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ RCB

| Updated By: ಝಾಹಿರ್ ಯೂಸುಫ್

Updated on: Mar 05, 2024 | 8:00 AM

WPL 2024: ವುಮೆನ್ಸ್ ಪ್ರೀಮಿಯರ್ ಲೀಗ್​ನ ಮೊದಲಾರ್ಧದ ಪಂದ್ಯಗಳು ಮುಗಿದಿದೆ. ದ್ವಿತೀಯಾರ್ಧದ ಪಂದ್ಯಗಳು ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ಮುಂದಿನ ಪಂದ್ಯವನ್ನು ಗುರುವಾರ ಆಡಲಿದ್ದು, ಈ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡವನ್ನು ಎದುರಿಸಲಿದೆ.

WPL 2024: ರಾಯಲ್ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ RCB
RCB
Follow us on

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಯುಪಿ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಭರ್ಜರಿ ಜಯ ಸಾಧಿಸಿದೆ. ತವರಿನಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ಗೆಲುವು ದಾಖಲಿಸುವ ಮೂಲಕ RCB ತಂಡವು ದ್ವಿತೀಯಾರ್ಧವನ್ನು ಆರಂಭಿಸಿದೆ. ಅಂದರೆ ವುಮೆನ್ಸ್​ ಪ್ರೀಮಿಯರ್ ಲೀಗ್​ನ ದ್ವಿತೀಯಾರ್ಧದ ಪಂದ್ಯಗಳು ಇನ್ನು ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯಲಿದೆ.

ಈ ಬಾರಿಯ ಐಪಿಎಲ್​ ಅನ್ನು ಎರಡು ನಗರಗಳಲ್ಲಿ ಆಯೋಜಿಸಲಾಗುತ್ತಿದ್ದು, ಅದರಂತೆ ಮೊದಲಾರ್ಧದ ಪಂದ್ಯಗಳಿಗೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಆತಿಥ್ಯವಹಿಸಿತ್ತು. ಅಲ್ಲದೆ ಆರ್​ಸಿಬಿ ತಂಡವು ದ್ವಿತೀಯಾರ್ಧದ ಮೊದಲ ಪಂದ್ಯವನ್ನು ತವರು ಮೈದಾನದಲ್ಲಿ ಆಡಿದೆ. ಇದೀಗ ಮುಂದಿನ ಪಂದ್ಯಗಳಿಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ದೆಹಲಿಗೆ ಪ್ರಯಾಣ ಬೆಳೆಸಿದೆ.

ಇತ್ತ ರಾಯಲ್ ಅಭಿಮಾನಿಗಳ ಮುಂದೆ ಕೊನೆಯ ಬಾರಿ ಕಣಕ್ಕಿಳಿದ ಆರ್​ಸಿಬಿ ತಂಡವು ಗೆಲುವಿನ ಉಡುಗೊರೆ ನೀಡಿದ್ದಾರೆ. ಅಲ್ಲದೆ ಪಂದ್ಯ ಮುಗಿದ ಬಳಿಕ ಆರಂಭದಿಂದಲೂ ಬೆಂಬಲಿಸುತ್ತಾ ಬಂದಿದ್ದ ಅಭಿಮಾನಿಗಳಿಗೆ ಆರ್​ಸಿಬಿ ತಂಡವು ಧನ್ಯವಾದ ತಿಳಿಸಿದೆ.

ಇದೀಗ ಆರ್​ಸಿಬಿ ತಂಡದ ಆಟಗಾರ್ತಿಯರು ಮೈದಾನದ ಸುತ್ತ ಸಾಗುತ್ತಾ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.

23 ರನ್​ಗಳ ಭರ್ಜರಿ ಜಯ:

ಯುಪಿ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಟಾಸ್ ಸೋತ ಆರ್​ಸಿಬಿ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆಯಿತು. ಈ ಅವಕಾಶವನ್ನು ಬಳಸಿಕೊಂಡ ಆರ್​ಸಿಬಿ ಪರ ನಾಯಕ ಸ್ಮೃತಿ ಮಂಧಾನ 50 ಎಸೆತಗಳಲ್ಲಿ 3 ಸಿಕ್ಸ್​ ಹಾಗೂ 10 ಫೋರ್​ಗಳೊಂದಿಗೆ 80 ರನ್ ಬಾರಿಸಿದರು. ಇನ್ನು ಎಲ್ಲಿಸ್ ಪೆರ್ರಿ 37 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 4 ಫೋರ್​ಗಳೊಂದಿಗೆ 58 ರನ್​ ಚಚ್ಚಿದರು. ಈ ಅರ್ಧಶತಕಗಳ ನೆರವಿನಿಂದ ಆರ್​ಸಿಬಿ ತಂಡವು 20 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು 198 ರನ್ ಕಲೆಹಾಕಿತು.

ಇದನ್ನೂ ಓದಿ: IPL 2024: 10 ತಂಡಗಳ ನಾಯಕರುಗಳ ಪಟ್ಟಿ ಇಲ್ಲಿದೆ

199 ರನ್​ಗಳ ಕಠಿಣ ಗುರಿ ಬೆನ್ನತ್ತಿದ ಯುಪಿ ವಾರಿಯರ್ಸ್ ಪರ ನಾಯಕಿ ಅಲಿಸ್ಸಾ ಹೀಲಿ 38 ಎಸೆತಗಳಲ್ಲಿ 55 ರನ್ ಬಾರಿಸಿದ್ದರು. ಇದಾಗ್ಯೂ ಉಳಿದ ಬ್ಯಾಟರ್​ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿ ಬಂದಿರಲಿಲ್ಲ. ಪರಿಣಾಮ ಯುಪಿ ವಾರಿಯರ್ಸ್ ತಂಡವು 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 175 ರನ್​ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಆರ್​ಸಿಬಿ ತಂಡ 23 ರನ್​ಗಳ ಭರ್ಜರಿ ಜಯ ಸಾಧಿಸಿತು.