ಯುವಕರಿಗೆ ಆದ್ಯತೆ ನೀಡಲು ಸಿಎಸ್​ಕೆ ಹಿಂದೇಟು ಹಾಕುತ್ತಿದೆ!

ಇಂಡಿಯನ್ ಪ್ರಿಮೀಯರ್ ಲೀಗ್​ನಲ್ಲಿ ಆಡುವ ತಂಡಗಳಲ್ಲಿ ಯುವಕರು ಹೆಚ್ಚಿರಬೇಕೋ ಅಥವಾ ಅನುಭವಿಗಳಿಂದ ಪಂದ್ಯಗಳನ್ನು ಗೆಲ್ಲಬಹುದೋ? ಇಂಥದ್ದೊಂದು ಜಿಜ್ಞಾಸೆ ಕ್ರಿಕೆಟ್ ವಲಯದಲ್ಲಿ ಶುರುವಿಟ್ಟುಕೊಂಡಿದೆ. ಅದಕ್ಕೆ ಕಾರಣವೂ ಇಲ್ಲದಿಲ್ಲ. 13ನೇ ಆವೃತಿಯ ಮೊದಲ ಪಂದ್ಯ ಗೆದ್ದ ನಂತರ ಸತತ ಎರಡೂ ಪಂದ್ಯಗಳನ್ನು ಸೋತ ಚೆನೈ ಸೂಪರ್ ಕಿಂಗ್ಸ್ ಹಾಗೆ ಯೋಚಿಸುವಂಥ ಅನಿವಾರ್ಯತೆಯನ್ನು ಸೃಷ್ಟಿಸಿದೆ. ನೀವೊಮ್ಮೆ ಈ ತಂಡದ ಆಟಗಾರರ ವಯಸ್ಸಿನೆಡೆ ಗಮನ ಹರಿಸಿದರೆ ವಿಷಯ ಸ್ಪಷ್ಟವಾಗುತ್ತದೆ. ಕ್ಯಾಪ್ಟನ್ ಮಹೇಂದ್ರ ಸಿಂಗ್​ಗೆ ಈಗ 39, ಆರಂಭ ಆಟಗಾರರಾದ ಶೇನ್ ವ್ಯಾಟ್ಸನ್ ಮತ್ತು […]

ಯುವಕರಿಗೆ ಆದ್ಯತೆ ನೀಡಲು ಸಿಎಸ್​ಕೆ ಹಿಂದೇಟು ಹಾಕುತ್ತಿದೆ!
ಅರುಣ್​ ಕುಮಾರ್​ ಬೆಳ್ಳಿ

Updated on: Sep 30, 2020 | 7:28 PM

ಇಂಡಿಯನ್ ಪ್ರಿಮೀಯರ್ ಲೀಗ್​ನಲ್ಲಿ ಆಡುವ ತಂಡಗಳಲ್ಲಿ ಯುವಕರು ಹೆಚ್ಚಿರಬೇಕೋ ಅಥವಾ ಅನುಭವಿಗಳಿಂದ ಪಂದ್ಯಗಳನ್ನು ಗೆಲ್ಲಬಹುದೋ? ಇಂಥದ್ದೊಂದು ಜಿಜ್ಞಾಸೆ ಕ್ರಿಕೆಟ್ ವಲಯದಲ್ಲಿ ಶುರುವಿಟ್ಟುಕೊಂಡಿದೆ. ಅದಕ್ಕೆ ಕಾರಣವೂ ಇಲ್ಲದಿಲ್ಲ. 13ನೇ ಆವೃತಿಯ ಮೊದಲ ಪಂದ್ಯ ಗೆದ್ದ ನಂತರ ಸತತ ಎರಡೂ ಪಂದ್ಯಗಳನ್ನು ಸೋತ ಚೆನೈ ಸೂಪರ್ ಕಿಂಗ್ಸ್ ಹಾಗೆ ಯೋಚಿಸುವಂಥ ಅನಿವಾರ್ಯತೆಯನ್ನು ಸೃಷ್ಟಿಸಿದೆ.

ನೀವೊಮ್ಮೆ ಈ ತಂಡದ ಆಟಗಾರರ ವಯಸ್ಸಿನೆಡೆ ಗಮನ ಹರಿಸಿದರೆ ವಿಷಯ ಸ್ಪಷ್ಟವಾಗುತ್ತದೆ. ಕ್ಯಾಪ್ಟನ್ ಮಹೇಂದ್ರ ಸಿಂಗ್​ಗೆ ಈಗ 39, ಆರಂಭ ಆಟಗಾರರಾದ ಶೇನ್ ವ್ಯಾಟ್ಸನ್ ಮತ್ತು ಫಫ್ ಡು ಪ್ಲೆಸ್ಸಿಯ ವಯಸ್ಸುಗಳು ಕ್ರಮವಾಗಿ 39 ಮತ್ತು 36, ತಾಹಿರ್ ಹುಸ್ಸೇನ್​ಗೆ ಈಗ 42ರ ಪ್ರಾಯ, ವೈಯಕ್ತಿಕ ಕಾರಣಗಳಿಗೆ ಈ ಬಾರಿ ಆಡದಿರಲು ನಿರ್ಧರಿಸಿದ ಹರ್ಭಜನ್ ಸಿಂಗ್ ಮತ್ತು ಸುರೇಶ್ ಅವರ ವಯಸ್ಸುಗಳು ಅನುಕ್ರಮವಾಗಿ 40 ಮತ್ತು 33, ಇನ್ನೊಬ್ಬ ಓಪನರ್ ಮರಳಿ ವಿಜಯ್​ಗೆ 36, ಮಿಡ್ಲ್ ಆರ್ಡರ್ ಬ್ಯಾಟ್ಸ್​ಮನ್ ಕೇದಾರ್ ಜಾಧವ್​ಗೆ 35, ಡ್ವೇನ್ ಬ್ರಾವೊ (ಈ ಬಾರಿ ಆಡುತ್ತಿಲ್ಲ) 36, ಕರ್ಣ್ ಶರ್ಮ 32 ಮತ್ತು ರವೀಂದ್ರ ಜಡೇಜಾಗೆ 31, ಎಲ್ಲಾ 30 ಪ್ಲಸ್​ಗಳೇ.

ಚೆನೈ ಟೀಮಿನಲ್ಲಿ ಯುವ ಆಟಗಾರರು ಇಲ್ಲವಂದೇನಿಲ್ಲ. ಆದರೆ, ಟೀಮ್ ಮ್ಯಾನೇಜ್​ಮೆಂಟ್ ಅನುಭವಕ್ಕೆ ಜಾಸ್ತಿ ಒತ್ತು ನೀಡುತ್ತಿದೆ. ಬೇರೆ ತಂಡಗಳಲ್ಲಿನ ಯುವ ಪ್ರತಿಭೆಗಳು ತಮಗೆ ದೊರೆತ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡಿದ್ದಾರೆ. ವಾಷಿಂಗ್ಟನ್ ಸುಂದರ್, ದೇವದತ್ ಪಡಿಕ್ಕಲ್, ರವಿ ಬಿಷ್ಣೊಯ್, ವರುಣ್ ಚಕ್ರವರ್ತಿ ಮೊದಲಾದವರೆಲ್ಲ ತಮ್ಮ ಮೇಲಿಟ್ಟಿರುವ ನಂಬಿಕೆಯನ್ನು ಹುಸಿಹೋಗಗೊಡದೆ ಅದ್ಭುತ ಪ್ರದರ್ಶನಗಳನ್ನು ನೀಡುತ್ತಿದ್ದಾರೆ.

ಟಿ20 ಕ್ರಿಕೆಟ್​ನಲ್ಲಿ ಆಲ್​ರೌಂಡರ್​ಗಳು ನಿರ್ಣಾಯಕ ಪಾತ್ರ ನಿರ್ವಹಿಸುತ್ತಾರೆ. ಆದರೆ, ಚೆನೈನ ಜಡೇಜಾ ಮತ್ತು ಜಾಧವ್ ತಮ್ಮ ಖ್ಯಾತಿಗೆ ತಕ್ಕ ಆಡವಾಡುತ್ತಿಲ್ಲ. ಕೊಲ್ಲಿ ರಾಷ್ಟ್ರಗಳ ಪಿಚ್​ಗಳು ಸ್ಪಿನ್ನರ್​ಗಳಿಗೆ ನೆರವಾಗುವುದರಿಂದ ಜಡೇಜಾ ಮೇಲೆ ಹೆಚ್ಚಿನ ಜವಾಬ್ದಾರಿಯಿದೆ. ಆದರೆ ಅವರು ಪ್ರತಿ ಪಂದ್ಯದಲ್ಲಿ ದುಬಾರಿಯಾಗುತ್ತಿದ್ದಾರೆ.

ಟೀಮಿನ ಯುವಕರಾದ ನಾರಾಯಣ ಜಗದೀಶನ್, ಕೆಎಮ್ ಆಸಿಫ್, ರವಿಶ್ರೀನಿವಾಸನ್ ಸಾಯಿಕಿಶೋರ್ ಮತ್ತು ಶಾರ್ದುಲ್ ಠಾಕುರ್ ಮುಂತಾದವರನ್ನು ಪ್ರಯೋಗಿಸಲು ಸಿಎಸ್​ಕೆ ಪ್ರಾಯಶಃ ಇನ್ನು ಮುಂದಾಗಬೇಕು.

Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Follow Us