ವ್ಹೈಟ್​ವಾಶ್ ಆಗುವುದನ್ನು ತಪ್ಪಿಸಿಕೊಂಡ ಭಾರತ; ಪಾಂಡ್ಯ, ಜಡೇಜಾ ಮತ್ತು ಠಾಕುರ್ ಹೀರೊಗಳು

ಭಾರತ ಕೊನೆಯ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಮಣಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿಕೊಂಡಿದೆ ಮತ್ತು ಕ್ಲೀನ್ ಸ್ವೀಪ್ ಆಗುವುದನ್ನು ತಪ್ಪಿಸಿಕೊಂಡಿದೆ. ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾ ತಾವು ವಿಶ್ವದ ಅತ್ಯುತ್ತಮ ಅಲ್​ರೌಂಡರ್​ಗಳೆನ್ನುವುದನ್ನು ಇಂದು ಸಾಬೀತು ಮಾಡಿದರು.

ವ್ಹೈಟ್​ವಾಶ್ ಆಗುವುದನ್ನು ತಪ್ಪಿಸಿಕೊಂಡ ಭಾರತ; ಪಾಂಡ್ಯ, ಜಡೇಜಾ ಮತ್ತು ಠಾಕುರ್ ಹೀರೊಗಳು
ಅರುಣ್​ ಕುಮಾರ್​ ಬೆಳ್ಳಿ

Updated on: Dec 02, 2020 | 6:52 PM

ಅಸ್ಟ್ರೇಲಿಯಾವನ್ನು ಇಂದು ಮಣಿಸಿಯೇ ತೀರುವ ಛಲದೊಂದಿಗೆ ಟೀಮ್ ಇಂಡಿಯಾ ಇಂದು ಮೈದಾನಕ್ಕಿಳಿದರೂ ಗೆಲುವು ಅಷ್ಟು ಸುಲಭವಾಗಿ ದಕ್ಕಲಿಲ್ಲ. ಅತಿಥೇಯರು ಕೊನೆ ಹಂತದವರೆಗೆ ಹೋರಾಡಿ ಕೇವಲ 13 ರನ್​ಗಳಿಂದ ಪಂದ್ಯ ಸೋತರು.

ಟಾಸ್ ಗೆದ್ದ ಟೀಮ್ ಇಂಡಿಯಾದ ನಾಯಕ ವಿರಾಟ್​ ಕೊಹ್ಲಿ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಭಾರತದ ತಂಡದಲ್ಲಿ 4 ಬದಲಾವಣೆಗಳನ್ನು ಮಾಡಲಾಗಿತ್ತು. ಮಾಯಾಂಕ್ ಅಗರ್ವಾಲ್, ಮೊಹಮ್ಮದ್ ಶಮಿ, ಯುಜ್ವೇಂದ್ರ ಚಹಲ್ ಮತ್ತು ನವದೀಪ್ ಸೈನಿ ಅವರನ್ನು ಡ್ರಾಪ್ ಮಾಡಿ ಶಾರ್ದಲ್ ಠಾಕುರ್, ಶುಭ್ಮನ್ ಗಿಲ್, ಕುಲ್ದೀಪ್ ಯಾದವ್ ಮತ್ತು ಟಿ ನಟರಾಜನ್ ಅವರನ್ನು ಆಡಿಸಲಾಯಿತು. ನಟರಾಜನ್​ಗೆ ಇದು ಮೊಟ್ಟಮೊದಲ ಅಂತರರಾಷ್ಟ್ರೀಯ ಪಂದ್ಯ.

ಗಿಲ್ ತಮ್ಮ ಮೇಲಿಟ್ಟಿದ ವಿಶ್ವಾಸವನ್ನು ಉಳಿಸಿಕೊಳ್ಳಲಿಲ್ಲ. ಅಸಲಿಗೆ ಭಾರತದ ಪರ ರನ್ ಗಳಿಸದವರೆಂದರೆ, ನಾಯಕ ವಿರಾಟ್ ಕೊಹ್ಲಿ, ಆಲ್​ರೌಂಡರ್​ಗಳಾದ ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾ. ಕೊಹ್ಲಿ ತಮ್ಮ ವೈಯಕ್ತಿಕ ಸ್ಕೋರ್ 23 ಆಗಿದ್ದಾಗ ಒಂದು ದಿನದ ಪಂದ್ಯಗಳಲ್ಲಿ 12,000 ರನ್​ಗಳನ್ನು ಪೂರೈಸಿದರು. ಕೊಹ್ಲಿ ಕೇವಲ 254 ಇನ್ನಿಂಗ್ಸ್​ಗಳಲ್ಲಿ ಈ ಸಾಧನೆ ಮಾಡಿದ್ದು ಹೊಸ ದಾಖಲೆಯಾಗಿದೆ.

ಅಸ್ಟ್ರೇಲಿಯ ವಿಕೆಟ್ ಪತನಗೊಂಡಿರುವುದನ್ನು ಸಂಭ್ರಮಿಸುತ್ತಿರುವ ಕೊಹ್ಲಿ ಮತ್ತು ಇತರರು

ಪಾಂಡ್ಯ ಮತ್ತು ಜಡೇಜಾ ತಾವು ವಿಶ್ವದರ್ಜೆಯ ಆಲ್​ರೌಂಡರ್​ಗಳೆಂದು ಇಂದು ಸಾಬೀತು ಮಾಡಿದರು. ಕೊಹ್ಲಿ ಔಟಾದಾಗ ಭಾರತ ಒತ್ತಡಲ್ಲಿತ್ತು, ಆಗ ಸ್ಕೋರ್ 153/5. ಆದರೆ ಇವರಿಬ್ಬರು ಮೈದಾನದ ಮಧ್ಯೆದಲ್ಲಿ ಅಭೂತಪೂರ್ವ ಪ್ರಭುದ್ಧತೆ ಪ್ರದರ್ಶಿಸಿ ಟೀಮಿನ ಮೊತ್ತ 300ರ ಗಡಿ ದಾಟುವಂತೆ ಮಾಡಿದರು. ಮೊದಲ ಪಂದ್ಯದಲ್ಲಿ 90 ರನ್ ಗಳಿಸಿದ್ದ ಪಾಂಡ್ಯ ಇಂದು ಸಹ ಶತಕ (ಅಜೇಯ 92 ) ಗಳಿಸುವುದನ್ನು ತಪ್ಪಿಸಿಕೊಂಡರು. ಆದರೆ ಅವರ ಕಾಂಟ್ರಿಬ್ಯೂಷನ್ ಶತಕಕ್ಕಿಂತ ಮಹತ್ವದ್ದಾಗಿತ್ತು. ಜಡೇಜಾ (ಅಜೇಯ 66) ಅವರೊಂದಿಗಿನ ಜೊತೆಯಾಟದಲ್ಲಿ ಪಾಂಡ್ಯ ಅತ್ಯಮೂಲ್ಯ ಮತ್ತು ಪಂದ್ಯದ ಗತಿಯನ್ನೇ ತಿರುಗಿಸಿದ 150ರನ್​ಗಳ ಜೊತೆಯಾಟದಲ್ಲಿ ಪಾಲ್ಗೊಂಡರು.

302 ರನ್​ಗಳ ಸವಾಲು ಅತಿಥೇಯರಿಗೆ, ಡೇವಿಡ್ ವಾರ್ನರ್ ಅವರ ಅನುಪಸ್ಥಿತಿಯಲ್ಲಿ ಖಂಡಿತವಾಗಿಯೂ ದೊಡ್ಡದಾಗಿತ್ತು. ಅವರ ಸ್ಥಾನದಲ್ಲಿ ಇನ್ನಿಂಗ್ಸ್ ಆರಂಭಿಸಿದ ಮಾರ್ನಸ್ ಲಬುಶೇನ್ ವಿಫಲರಾದರು. ಆದರೆ ಆಸ್ಟ್ರೇಲಿಯಾಗೆ ಆಘಾತ ಎದುರಾಗಿದ್ದು ಇನ್-ಫಾರ್ಮ್ ಆಟಗಾರ ಸ್ಟೀವ್ ಸ್ಮಿತ್ ಔಟಾದಾಗ. ಮೊಸೆಸ್ ಹೆನ್ರಿಕೆ ಮತ್ತು ಕೆಮೆರಾನ್ ಕ್ರೀಸ್ ಮೇಲೆ ಟಿಕಾಯಿಸುವ ಲಕ್ಷಣ ತೋರುತ್ತಿದ್ದಾಗಲೇ ಪೆವಿಲಿಯನ್​ಗೆ ಮರಳಿದರು. ಏತನ್ಮಧ್ಯೆ, ಉತ್ತಮವಾಗಿ ಆಡುತ್ತಿದ್ದ ನಾಯಕ ಆರನ್ ಫಿಂಚ್ 75 ರನ್ ಗಳಿಸಿ ಔಟಾದರು.

ಆದರೆ ಭಾರತಕ್ಕೆ ಆಪತ್ತು ಇದ್ದಿದ್ದು ಗ್ಲೆನ್ ಮಾಕ್ಸ್​ವೆಲ್ ಮತ್ತು ಅಲೆಕ್ಸ್ ಕೇರಿ ಅವರಿಂದ. ಯಾಕೆಂದರೆ, ಕೇವಲ ಮೂರು ತಿಂಗಳ ಹಿಂದೆ ಇವರಿಬ್ಬರು ಇಂಗ್ಲೆಂಡ್ ವಿರುದ್ಧ ತಮ್ಮ ತಂಡ 73 ರನ್​ಗಳಿಗೆ 5 ವಿಕೆಟ್​ ಕಳೆದುಕೊಂಡು ಶೋಚನೀಯ ಸ್ಥಿತಿಯಲ್ಲಿದ್ದರೂ ಇಬ್ಬರು ಶತಕಗಳನ್ನು ಬಾರಿಸಿದ್ದೂ ಅಲ್ಲದೆ 200ಕ್ಕೂ ಹೆಚ್ಚಿನ ರನ್​ಗಳ ಜೊತೆಯಾಟದಲ್ಲಿ ಪಾಲ್ಗೊಂಡು ಟೀಮನ್ನು ಗೆಲ್ಲಿಸಿದ್ದರು. ಇವತ್ತು ಸಹ ಅವರು ಭಾರತಕ್ಕೆ ಘಾತಕರಾಗುವ ಲಕ್ಷಣಗಳು ಕಾಣಿಸುತ್ತಿದ್ದವು. ಆದರೆ ಕೇರಿ ರನೌಟ್​ ಆಗುವುದರೊಂದಿಗೆ ಅಪಾಯ ದೂರವಾಯಿತಾದರೂ, ಮಾಕ್ಸ್​ವೆಲ್ ಅಕ್ರಮಣಕಾರಿ ಆಟ ಮುಂದುವರಿಸಿದ್ದರು. ಆದರೆ ಬುಮ್ರಾ ಅವರನ್ನು ಬೋಲ್ಡ್ ಮಾಡಿದಾಗ ಪಂದ್ಯ ಸಂಪೂರ್ಣವಾಗಿ ಭಾರತದೆಡೆ ವಾಲಿತು. ಶಾರ್ದುಲ್ ಠಾಕುರ್ 3 ವಿಕೆಟ್ ಪಡೆದು ಅತ್ಯಂತ ಯಶಸ್ವೀ ಬೌಲರ್ ಎನಿಸಿದರೆ, ಬುಮ್ರಾ ಮತ್ತು ನಟರಾಜನ್ ತಲಾ 2 ವಿಕೆಟ್ ಪಡೆದರು.

ಈ ಗೆಲುವು ಭಾರತಕ್ಕೆ ವ್ಹೈಟ್​ವಾಶ್ ಆಗುವ ಅಪಖ್ಯಾತಿಯಿಂದ ತಪ್ಪಿಸಿದೆ ಮತ್ತು ಮುಂದಿನ ಪಂದ್ಯಗಳಿಗೆ ಭಾರತದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.

 

Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Follow Us