India vs England: ಮೂರನೇ ಪಂದ್ಯದಲ್ಲಿ ಎರಡೂ ತಂಡಗಳಿಂದ ಸ್ಫೋಟಕ ಪ್ರದರ್ಶನ ನಿರೀಕ್ಷೆ

ನಾಳಿನ ಪಂದ್ಯದಲ್ಲಿ ಭಾರತ ಕೇವಲ ಒಂದು ಬದಲಾವಣೆ ಮಾತ್ರ ಮಾಡಬಹುದು. ಮೊದಲಿನ ಎರಡು ಪಂದ್ಯಗಳಿಗೆ ರೋಹಿತ್ ಶರ್ಮ ಅವರಿಗೆ ವಿಶ್ರಾಂತಿ ನೀಡಲಾಗಿದೆ ಎಂದು ಕೊಹ್ಲಿ ಹೇಳಿದ್ದರು. ಹಾಗಾಗಿ, ರಾಹುಲ್ ಸ್ಥಾನದಲ್ಲಿ ರೋಹಿತ್ ಆಡುವುದು ನಿಶ್ಚಿತ.

India vs England: ಮೂರನೇ ಪಂದ್ಯದಲ್ಲಿ ಎರಡೂ ತಂಡಗಳಿಂದ ಸ್ಫೋಟಕ ಪ್ರದರ್ಶನ ನಿರೀಕ್ಷೆ
ವಿರಾಟ್​ ಕೊಹ್ಲಿ ‘ಮತ್ತು ಇಶಾನ್ ಕಿಷನ್
Follow us
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 15, 2021 | 9:26 PM

ಅಹಮದಾಬಾದ್:  ಪ್ರವಾಸಿ ಇಂಗ್ಲೆಂಡ್ ವಿರುದ್ಧ ಎರಡನೇ ಟಿ20ಐ ಪಂದ್ಯದಲ್ಲಿ ಅಧಿಕಾರಯುತ ಜಯ ಸಾಧಿಸಿ ಆತ್ಮವಿಶ್ವಾಸದ ಮೂಟೆಯನ್ನು ಹೆಗಲಿಗೇರಿಸಿಕೊಂಡಿರುವ ಟೀಮ್ ಇಂಡಿಯಾ ನಾಳೆಯೂ ಅದೇ ಮೈದಾನದಲ್ಲಿ ನಡೆಯುವ ಮೂರನೇ ಪಂದ್ಯದಲ್ಲೂ ನಿರ್ಭೀತಿಯ ಆಟ ಮುಂದುವರಿಸುವುದು ಶತಃಸಿದ್ಧ. ಮೊದಲ ಪಂದ್ಯದಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿ 7 ವಿಕೆಟ್​ಗಳ ಸೋಲುಂಡ ಅತಿಥೇಯರು ರವಿವಾರ ನಡೆದ 2ನೇ ಪಂದ್ಯದಲ್ಲಿ ಅದ್ಭುತ ಆಲ್​ರೌಂಡ್ ಆಟದ ಪ್ರದರ್ಶನ ನೀಡಿ 8 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿದರು. ಪದಾರ್ಪಣೆಯ ಪಂದ್ಯದಲ್ಲೇ 32 ಎಸೆತಗಳಲ್ಲಿ 56 ರನ್ ಬಾರಿಸಿದ ಪಂದ್ಯದ ವ್ಯಕ್ತಿ ಇಶಾನ್ ಕಿಷನ್ ಕ್ರಿಕೆಟ್​ ಪ್ರೇಮಿಗಳ ಕಣ್ಮಣಿಯಾದರು. ಬ್ಯಾಟಿಂಗ್​ನೆಡೆಗೆ ಅವರು ತೋರಿದ ಧೋರಣೆ ಪ್ರೇಕ್ಷಕರ ಮೈನವಿರೇಳಿಸಿದ್ದು ಸುಳ್ಳಲ್ಲ. ಮೊದಲ ಓವರ್​ನಲ್ಲಿ ಜೊತೆಗಾರನನ್ನು (ಕೆ.ಎಲ್.ರಾಹುಲ್) ಕಳೆದುಕೊಂಡರೂ ಧೃತಿಗೆಡದ ಕೇವಲ 22ರ ಪ್ರಾಯದ ಕಿಷನ್ ತಾನೆದುರಿಸಿದ ಮೊದಲ ಎಸೆತದಿಂದಲೇ ಆಕ್ರಮಣಕಾರಿ ಆಟವಾಡಲು ಆರಂಭಿಸಿದರು.

ನಾಯಕ ವಿರಾಟ್​ ಕೊಹ್ಲಿ ಸೀಮಿತ ಓವರ್​ಗಳ ಪಂದ್ಯಗಳಲ್ಲಿ ಮಾಸ್ಟರ್ ಚೇಸರ್ ಎಂದು ಕರೆಸಿಕೊಳ್ಳುತ್ತಾರೆ. ರವಿವಾರದಂದು ತನ್ನ ಖ್ಯಾತಿಗೆ ತಕ್ಕ ಆಡವಾಡಿದ ಅವರು ಭಾರತ ಗುರಿಮುಟ್ಟುವವರೆಗೆ ಕ್ರಿಸ್​ನಲ್ಲಿ ಉಳಿದಿದ್ದು ಅವರ ಮತ್ತು ಟೀಮಿನ ಸ್ಥೈರ್ಯವನ್ನು ಹೆಚ್ಚಿಸಿದೆ. ಅವರ ಫಾರ್ಮ್ ಬಗ್ಗೆ ಸಂಶಯವಿರಲಿಲ್ಲ, ಆದರೆ ಅವರ ಬ್ಯಾಟ್​ ಎಂದಿನಂತೆ ಆರ್ಭಟಿಸುವುದು ತಾತ್ಕಾಲಿಕವಾಗಿ ನಿಲ್ಲಿಸಿತ್ತು. ಟೆಸ್ಟ್​ ಪಂದ್ಯಗಳಲ್ಲೂ ಅವರಿಂದ ಕಳಾಹೀನ ಪ್ರದರ್ಶನಗಳು ಬಂದಿದ್ದವು. ಭಾರತದ ಬೌಲರ್​ಗಳು ಇಂಗ್ಲೆಂಡ್​ನ ಬಲಿಷ್ಠ ಬ್ಯಾಟಿಂಗನ್ನು ಕೇವಲ 164 ರನ್​ಗಳಿಗೆ ನಿಯಂತ್ರಿಸಿದ್ದು ಉಲ್ಲೇಖನೀಯ ಸಾಧನೆ. ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ ಎರಡನೇ ಪಂದ್ಯದಲ್ಲಿ 4 ಓವರ್​ಗಳನ್ನು ಬೌಲ್ ಮಾಡಿದ್ದು ಭಾರತಕ್ಕೆ ಒಬ್ಬ ಹೆಚ್ಚುವರಿ ಬ್ಯಾಟ್ಸ್​ಮನ್​ ಆಡಿಸಲು ನೆರವಾಗುತ್ತಿದೆ. ನಾಳೆಯ ಪಂದ್ಯದಲ್ಲೂ ಬೌಲರ್​ಗಳು ಅದೇ ಶಿಸ್ತು ಕಾಯ್ದುಕೊಳ್ಳವುದು ಅತ್ಯವಶ್ಯಕವಾಗಿದೆ.

ನಿನ್ನೆಯ ಪಂದ್ಯದಲ್ಲಿ ರಿಷಬ್ ಪಂತ್ ಅವರನ್ನು ಪ್ರಮೋಟ್​ ಮಾಡಿ ಶ್ರೇಯಸ್​ ಅಯ್ಯರ್​ಗಿಂತ ಮೊದಲು ಆಡಲು ಕಳಿಸಿದ್ದು ಸರಿಯಲ್ಲ ಎಂಬ ಚರ್ಚೆ ನಡೆಯುತ್ತಿದೆ. ಆದರೆ, ಪಂತ್ 200ರ ಸ್ಟ್ರೈಕ್​ ರೇಟ್​ನಲ್ಲಿ 26 ರನ್ ಬಾರಿಸಿ ತಮ್ಮ ಯೋಗದಾನ ನೀಡಿದರು. ಅದಕ್ಕಿಂತ ಮುಖ್ಯವಾದ ಸಂಗತಿಯೆಂದರೆ, ಟೀಮ್ ಮ್ಯಾನೇಜ್​ಮೆಂಟ್ ಎಡಗೈ-ಬಲಗೈ ಬ್ಯಾಟ್ಸ್​​ಮನ್​ಗಳ ಜೋಡಿ ಕ್ರೀಸ್​ನಲ್ಲಿದ್ದರೆ ಎದುರಾಳಿ ಬೌಲರ್​ಗಳ ಲಯ ತಪ್ಪುತ್ತದೆ ಎಂದು ಭಾವಿಸಿತ್ತು. ಟಿ20 ಕ್ರಿಕೆಟ್​ನಲ್ಲಿ 12 ಎಸೆತಗಳಲ್ಲಿ 20-25 ರನ್ ಬಾರಿಸುವುದು ತಂಡಕ್ಕೆ ಬಹಳ ನೆರವಾಗುತ್ತದೆ.

Team India

ನಾಳಿನ ಪಂದ್ಯದಲ್ಲಿ ಭಾರತ ಕೇವಲ ಒಂದು ಬದಲಾವಣೆ ಮಾತ್ರ ಮಾಡಬಹುದು. ಮೊದಲಿನ ಎರಡು ಪಂದ್ಯಗಳಿಗೆ ರೋಹಿತ್ ಶರ್ಮ ಅವರಿಗೆ ವಿಶ್ರಾಂತಿ ನೀಡಲಾಗಿದೆ ಎಂದು ಕೊಹ್ಲಿ ಹೇಳಿದ್ದರು. ಹಾಗಾಗಿ, ರಾಹುಲ್ ಸ್ಥಾನದಲ್ಲಿ ರೋಹಿತ್ ಆಡುವುದು ನಿಶ್ಚಿತ. ಈ ವರ್ಷದ ಕೊನೇ ಭಾಗದಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ನಲ್ಲಿ ಆಡುವ ಆಟಗಾರರು ಯಾರಾಗಲಿದ್ದಾರೆ ಎನ್ನುವುದೇ ಈ ಸರಣಿಯಲ್ಲಿ ಟೀಮ್ ಇಂಡಿಯಾದ ಉದ್ದೇಶವಾಗಿದೆ. ಇದು ಆಟಗಾರರರಿಗೂ ಗೊತ್ತಿರುವ ವಿಚಾರವೇ. ಹಾಗಾಗಿ ಅವರ ನಡುವೆ ಆರೋಗ್ಯಕರ ಸ್ಫರ್ಧೆ ಏರ್ಪಟ್ಟಿದೆ.

ಅತ್ತ, ಪ್ರವಾಸಿ ತಂಡದ ವಿಷಯ ಮಾತಾಡುವುದಾದರೆ, ಎರಡನೇ ಪಂದ್ಯದಲ್ಲಿ ವೇಗದ ಬೌಲರ್ ಮಾರ್ಕ್ ವುಡ್​ ಅವರ ಗೈರುಹಾಜರಿಯಲ್ಲಿ ಅವರ ಬೌಲಿಂಗ್ ಆಕ್ರಮಣ ಸಪ್ಪೆ ಎನಿಸಿತು. ಮೂರನೇ ಪಂದ್ಯಕ್ಕೆ ಆವರ ವಾಪಸ್ಸಾಗಲಿದ್ದಾರೆ ಎಂದು ನಾಯಕ ಅಯಾನ್ ಮೋರ್ಗನ್ ಹೇಳಿದ್ದಾರೆ. ಆರಂಭ ಆಟಗಾರ ಜೇಸನ್ ರಾಯ್ ಉತ್ತಮ ಸ್ಪರ್ಶದಲ್ಲಿದ್ದಾರೆ. ಎರಡೂ ಪಂದ್ಯಗಳಲ್ಲಿ ಅವರ ಅರ್ಧ ಶತಕ ತಪ್ಪಿಸಿಕೊಂಡಿದ್ದು ದುರದೃಷ್ಟಕರ. ನಾಳಿನ ಪಂದ್ಯದಲ್ಲಿ ಅವರು ಈ ನಿರಾಶೆಯನ್ನು ಹೋಗಲಾಡಿಸಿಕೊಂಡರೆ ಆಶ್ಚರ್ಯಪಡಬೇಕಿಲ್ಲ.

5-ಪಂದ್ಯಗಳ ಸರಣಿ ಈಗ 1-1ರಿಂದ ಸಮವಾಗಿದೆ. ಮೂರನೇ ಪಂದ್ಯದಲ್ಲಿ ಎರಡೂ ತಂಡಗಳಿಂದ ಸ್ಫೋಟಕ ಪ್ರದರ್ಶನಗಳನ್ನು ನಿರೀಕ್ಷಿಸಬಹುದಾಗಿದೆ.

ಇದನ್ನೂ ಓದಿ: India vs England: ಮೊದಲ ಪಂದ್ಯದಲ್ಲೇ ಮಿಂಚಿದ ಇಶಾನ್​ ಕಿಶನ್ ತಮ್ಮ ತಂದೆಯನ್ನು ನೆನೆದು ಭಾವುಕರಾಗಿದ್ಯಾಕೆ?