
RCBಯ ಸ್ಟಾರ್ ಬೌಲರ್ ಯಶ್ ದಯಾಳ್ (Yash Dayal) ಅವರ ಮೇಲೆ ಎರಡೆರಡು ಅತ್ಯಾಚಾರದ ಆರೋಪಗಳಿವೆ. ಇತ್ತೀಚಿಗೆ ಹೊಸ ಸೀಸನ್ ಆರಂಭದ ಮುನ್ನ ನಡೆದ ತರಬೇತಿಯಲ್ಲೂ ಅವರು ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ಆರ್ಸಿಬಿ ತಂಡದಿಂದ ಗೇಟ್ಪಾಸ್ ನೀಡಲಾಗಿದೆ ಎಂಬ ವದಂತಿಗಳು ಹಬ್ಬಿದ್ದವು. ಸದ್ಯ ಇದೆಲ್ಲದಕ್ಕೂ ಇದೀಗ ಉತ್ತರ ಸಿಕ್ಕಿದೆ. ಯಶ್ ದಯಾಳ್ ಈ ಬಾರಿ ಆರ್ಸಿಬಿ ತಂಡದಲ್ಲಿ ಇರುವುದಿಲ್ಲ ಎಂದು ಆರ್ಸಿಬಿ ನಿರ್ದೇಶಕ ಮೋ ಬೋಬಾಟ್ ದೃಢಪಡಿಸಿದ್ದಾರೆ.
ಆರ್ಸಿಬಿ ತಂಡದಲ್ಲಿ ಮಿಂಚಿರುವ ಸ್ಟಾರ್ ಬೌಲರ್ ಯಶ್ ದಯಾಳ್ ಕೋಟ್ಯಂತರ ಅಭಿಮಾನಿ ಬಳಗ ಹೊಂದಿದ್ದಾರೆ. 2025ರ ಐಪಿಎಲ್ನಲ್ಲಿ ಆರ್ಸಿಬಿ ಗೆಲುವಿಗೆ ಕಾರಣರಾಗಿದ್ದರು. ಆದರೆ ಈ ಬಾರಿ ಆರ್ಸಿಬಿ ತಂಡದಲ್ಲಿ ಇರುವುದಿಲ್ಲ ಎಂಬುವುದು ಇದೀಗ ದೃಢವಾಗಿದೆ. ಹೀಗಾಗಿ ಇದು ಅವರ ಮತ್ತು ಆರ್ಸಿಬಿ ಅಭಿಮಾನಿಗಳಿಗೆ ದೊಡ್ಡ ಶಾಕ್ ನೀಡಿದೆ.
ಇನ್ನು ಈ ಬಗ್ಗೆ ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್ಸಿಬಿ ನಿರ್ದೇಶಕ ಮೋ ಬೋಬಾಟ್, ಯಶ್ ದಯಾಳ್ ಈ ಬಾರಿ ಆರ್ಸಿಬಿ ತಂಡದಲ್ಲಿ ಇರುವುದಿಲ್ಲ, ಆದರೆ ಅವರಿಗೆ ಏನು ಸಹಕಾರ ನೀಡಬೇಕು ಅದನ್ನು ಆರ್ಸಿಬಿ ನೀಡುತ್ತದೆ. ಸದ್ಯ ಅವರು ತಮ್ಮ ವೈಯಕ್ತಿಕ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ‘ಐಪಿಎಲ್ ವೇಳೆ ದೈಹಿಕ ಕಿರುಕುಳ ನೀಡಿದ್ರು’; ಯಶ್ ದಯಾಳ್ ವಿರುದ್ಧ ದೂರು ನೀಡಿದ ಮತ್ತೋರ್ವ ಯುವತಿ
ಯಶ್ ದಯಾಳ್ರನ್ನ ನಾವು ತಂಡದಲ್ಲಿ ಉಳಿಸಿಕೊಳ್ಳಲು ಬಯಸಿದ್ದು, ಅವರು ಇನ್ನೂ ಒಪ್ಪಂದದಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಅದೇ ಒಪ್ಪಂದದಡಿ ಮುಂದುವರೆಯಲಿದ್ದಾರೆ. ನಾವು ಅವರೊಂದಿಗೆ ಸಂಪರ್ಕದಲ್ಲಿದ್ದೇವೆ. ಇಂದು ಸಹ ನಾನು ಅವರೊಂದಿಗೆ ಮಾತನಾಡಿದ್ದೇನೆ. ಆದರೆ ಈ ಸಮಯದಲ್ಲಿ ತಂಡಕ್ಕೆ ಸೇರದಿರುವುದು ಅವರ ಮತ್ತು ಫ್ರಾಂಚೈಸಿಯ ಹಿತಕ್ಕೂ ಸರಿಯಲ್ಲ ಎಂದು ನಿರ್ಧರಿಸಲಾಗಿದೆ ಎಂದು ಆರ್ಸಿಬಿ ನಿರ್ದೇಶಕ ಮೋ ಬೋಬಾಟ್ ತಿಳಿಸಿದ್ದಾರೆ.
ಇದನ್ನೂ ಓದಿ: IPL 2026: ಅಭ್ಯಾಸದಲ್ಲಿ ಕಾಣಿಸಿಕೊಳ್ಳದ ಯಶ್ ದಯಾಳ್; ತಂಡದಿಂದ ಹೊರಹಾಕಿತಾ ಆರ್ಸಿಬಿ?
ರಾಜಸ್ಥಾನದ ಜೈಪುರದಲ್ಲಿ ಆರ್ಸಿಬಿ ವೇಗಿ ಯಶ್ ದಯಾಳ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿತ್ತು. 19 ವರ್ಷದ ಕ್ರಿಕೆಟ್ ಆಟಗಾರ್ತಿಯಾಗಿದ್ದ ಸಂತ್ರಸ್ತೆ, ದಯಾಳ್ ವಿರುದ್ಧ ಪ್ರಕರಣ ದಾಖಲಿಸಿದ್ದರು. ನನಗೆ 17 ವರ್ಷ ಇದ್ದಾಗ 2023ರಲ್ಲಿ, ದಯಾಳ್ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ. 2025ರ ಏಪ್ರಿಲ್ ತಿಂಗಳಲ್ಲೂ ಜೈಪುರದ ಸೀತಾಪುರ ಪ್ರದೇಶದ ಹೋಟೆಲ್ನಲ್ಲಿ ಇದೇ ರೀತಿ ನನ್ನ ಬಳಸಿಕೊಂಡಿದ್ದ ಅಂತ ದೂರುದಾರ ಸಂತ್ರಸ್ತೆ ಆರೋಪಿಸಿದ್ದರು. ಈ ಪ್ರಕರಣ ಬೆನ್ನಲ್ಲೇ ಮತ್ತೊಂದು ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿತ್ತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:19 pm, Tue, 24 March 26