- Kannada News Photo gallery Cricket photos Yash Dayal's RCB 'Gatepass'? Legal Battles Cast Shadow on IPL Career End
IPL 2026: ಅಭ್ಯಾಸದಲ್ಲಿ ಕಾಣಿಸಿಕೊಳ್ಳದ ಯಶ್ ದಯಾಳ್; ತಂಡದಿಂದ ಹೊರಹಾಕಿತಾ ಆರ್ಸಿಬಿ?
Yash Dayal Missing from RCB: ಹಾಲಿ ಚಾಂಪಿಯನ್ RCBಗೆ 2025ರ ಐಪಿಎಲ್ ಗೆಲ್ಲಿಸಿಕೊಟ್ಟಿದ್ದ ವೇಗಿ ಯಶ್ ದಯಾಳ್, 2026ರ ಅಭ್ಯಾಸದಲ್ಲಿ ನಾಪತ್ತೆ. ಎರಡು ಅತ್ಯಾಚಾರ ಪ್ರಕರಣಗಳು ಅವರ ಕ್ರಿಕೆಟ್ ವೃತ್ತಿಜೀವನಕ್ಕೆ ಕಂಟಕವಾಗಿವೆ. ಕಾನೂನು ತೊಡಕುಗಳಿಂದ RCB ತಂಡದಿಂದ ಗೇಟ್ಪಾಸ್ ಪಡೆದಿದ್ದಾರೆ ಎಂಬ ವದಂತಿ ಹಬ್ಬಿದೆ. ಅಧಿಕೃತ ಮಾಹಿತಿ ಇಲ್ಲದಿದ್ದರೂ, ತಂಡದ ಬಸ್ ಗ್ರಾಫಿಕ್ಸ್ನಿಂದ ಅವರನ್ನು ತೆಗೆದುಹಾಕಿರುವುದು ಅವರ ವೃತ್ತಿಜೀವನದ ಭವಿಷ್ಯದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
Updated on: Mar 21, 2026 | 4:55 PM

ಹಾಲಿ ಚಾಂಪಿಯನ್ ಆರ್ಸಿಬಿ ತನ್ನ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳುವ ಇರಾದೆಯೊಂದಿಗೆ 2026 ರ ಐಪಿಎಲ್ನಲ್ಲಿ ಕಣಕ್ಕಿಳಿಯುತ್ತಿದೆ. ಇದಕ್ಕಾಗಿ ತಂಡ ಕೂಡ ಸಾಕಷ್ಟು ಬೆವರು ಹರಿಸುತ್ತಿದೆ. ಈಗಾಗಲೇ ಭಾಗಶಃ ಆಟಗಾರರು ತಂಡವನ್ನು ಕೂಡಿಕೊಂಡಿದ್ದು ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಆದಾಗ್ಯೂ ಕಳೆದ ಆವೃತ್ತಿಯಲ್ಲಿ ತಂಡವನ್ನು ಚಾಂಪಿಯನ್ ಮಾಡುವಲ್ಲಿ ಶ್ರಮಿಸಿದ್ದ ವೇಗದ ಬೌಲರ್ ಸುಳಿವೆ ಇಲ್ಲ.

ವಾಸ್ತವವಾಗಿ 2025 ರ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ತಂಡವನ್ನು ಚಾಂಪಿಯನ್ ಮಾಡಿದ ಬಳಿಕ ತಂಡದೊಂದಿಗೆ ಸಂಭ್ರಮಾಚರಣೆ ನಡೆಸಿ ತವರಿಗೆ ಮರಳಿದ್ದ ಯುವ ವೇಗದ ಬೌಲರ್ ಯಶ್ ದಯಾಳ್ ಅದಾದ ಬಳಿಕ ಕ್ರಿಕೆಟ್ ಮೈದಾನದಲ್ಲಿ ಕಾಣಿಸಿಕೊಂಡಿಲ್ಲ. ಸಾರ್ವಜನಿಕವಾಗಿಯೂ ಕಾಣಿಸಿಕೊಂಡಿದ್ದು ತೀರ ಕಡಿಮೆ. ಆದಾಗ್ಯೂ ಅವರು ಕೆಲವೇ ದಿನಗಳ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿರಿಸಿರುವುದಾಗಿ ವರದಿಯಾಗಿತ್ತು. ಇದಕ್ಕೆ ಪೂರಕವಾಗಿ ಫೋಟೋಗಳು ಕೂಡ ವೈರಲ್ ಆಗಿದ್ದವು.

ವೈಯಕ್ತಿಕ ಜೀವನದಲ್ಲಿ ಎದ್ದಿರುವ ಬಿರುಗಾಳಿಗೆ ಸಿಲುಕಿ ಒದ್ದಾಡುತ್ತಿರುವ ಯಶ್ ದಯಾಳ್ ತಮ್ಮ ವೃತ್ತಿಜೀವನಕ್ಕೆ ವಿದಾಯ ಹೇಳಿದಂತೆ ಕಾಣುತ್ತಿದೆ. ಏಕೆಂದರೆ ಕಳೆದೊಂದು ವರ್ಷದಿಂದ ದಯಾಳ್ ದೇಶಿಯ ಕ್ರಿಕೆಟ್ನಲ್ಲೂ ಕಾಣಿಸಿಕೊಂಡಿಲ್ಲ. ಇದೀಗ ಐಪಿಎಲ್ ಆರಂಭಕ್ಕೆ ಕೆಲವೇ ದಿನ ಬಾಕಿ ಉಳಿದಿದೆಯಾದರೂ ಆರ್ಸಿಬಿ ತಂಡದಲ್ಲಿ ಯಶ್ ದಯಾಳ್ ಎಲ್ಲಿಯೂ ಕಾಣಿಸಿಕೊಂಡಿಲ್ಲ.

ಇದು ಅಭಿಮಾನಿಗಳಲ್ಲಿ ಸಾಕಷ್ಟುನ ಅನುಮಾನಗಳನ್ನು ಹುಟ್ಟುಹಾಕಿದೆ. ವೈಯಕ್ತಿಕ ಬದುಕಿನಲ್ಲಿ ಎರಡೆರಡು ಅತ್ಯಾಚಾರ ಪ್ರಕರಣಗಳನ್ನು ಯಶ್ ದಯಾಳ್ ಎದುರಿಸುತ್ತಿದ್ದಾರೆ. ಒಂದು ಪ್ರಕರಣ ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ಮತ್ತು ಇನ್ನೊಂದು ರಾಜಸ್ಥಾನದ ಜೈಪುರದಲ್ಲಿ ದಾಖಲಾಗಿದೆ. ಈ ಕಾನೂನು ತೊಡಕುಗಳು ಅವರ ಕ್ರಿಕೆಟ್ ವೃತ್ತಿಜೀವನದ ಮೇಲೆ ಪರಿಣಾಮ ಬೀರುತ್ತಿವೆ.

ಹೀಗಾಗಿ ಕ್ರಿಕೆಟ್ನಿಂದ ದೂರ ಉಳಿದಿರುವ ಯಶ್ ದಯಾಳ್ಗೆ ಆರ್ಸಿಬಿ ತಂಡದಿಂದ ಗೇಟ್ಪಾಸ್ ನೀಡಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಇದರ ಬಗ್ಗೆ ಫ್ರಾಂಚೈಸಿಯಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದಾಗ್ಯೂ ತಂಡದ ಬಸ್ನಲ್ಲಿನ ಗ್ರಾಫಿಕ್ಸ್ನಿಂದ ಯಶ್ ದಯಾಳ್ ಅವರನ್ನು ತೆಗೆದುಹಾಕಿರುವುದರಿಂದ ಈ ವದಂತಿಗಳು ಹರಡುತ್ತಿವೆ.

ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಯಶ್ ದಯಾಳ್ ಕ್ರಿಕೆಟ್ನಿಂದ ದೂರವಿದ್ದು, ಅವರು ತಮ್ಮ ಬಾಲ್ಯದ ಕೋಚ್ ಸಂಪರ್ಕಕ್ಕೂ ಸಿಗುತ್ತಿಲ್ಲ. ಇದರ ಜೊತೆಗೆ ಕಳೆದ ಸೆಪ್ಟೆಂಬರ್ನಲ್ಲಿ ಯಶ್ ದಯಾಳ್ ಅವರಿಗೆ ಸೆಂಟರ್ ಆಫ್ ಎಕ್ಸಲೆನ್ಸ್ನಿಂದ ಕರೆ ಹೋಗಿತ್ತಾದರೂ ಅವರು ಸಂಪರ್ಕಕ್ಕೆ ಸಿಕ್ಕಿರಲಿಲ್ಲ ಎಂದು ಯುಪಿಸಿಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಲ್ಲದೆ ದಯಾಳ್ ತಮ್ಮ ಫೋನ್ ನಂಬರ್ ಅನ್ನು ಸಹ ಬದಲಾಯಿಸಿದ್ದಾರೆ ಎಂದು ವರದಿಯಾಗಿತ್ತು.
