Viral News: ಹುಣಸೆ ಬೀಜ ನುಂಗಿ 10 ವರ್ಷದ ಬಾಲಕ ಸಾವು

ಹುಣಸೆ ಹಣ್ಣು ಎಂದ ತಕ್ಷಣ ಬಾಯಿಯಲ್ಲಿ ನೀರು ಬರುವುದು ಖಂಡಿತಾ. ಆದರೆ ಹುಣಸೆ ಹಣ್ಣು ಪುಟ್ಟ ಬಾಲಕ ಜೀವಕ್ಕೆ ಕಂಟಕವಾಗಿದೆ. ಬಾಲಕ ಹುಣಸೆಹಣ್ಣು ತಿನ್ನುತ್ತಿದ್ದ ವೇಳೆ ಅದರ ಬೀಜವನ್ನು ನುಂಗಿದ್ದಾನೆ. ಪರಿಣಾಮ ಹುಣಸೆ ಬೀಜ ಗಂಟಲಲ್ಲಿ ಸಿಲುಕಿದ್ದು, ಉಸಿರಾಟದ ತೊಂದರೆ ಉಂಟಾಗಿ ಸಾವನ್ನಪ್ಪಿದ್ದಾನೆ. ಬಿಹಾರದ ಮುಜಾಫರ್‌ಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

Viral News: ಹುಣಸೆ ಬೀಜ ನುಂಗಿ 10 ವರ್ಷದ ಬಾಲಕ ಸಾವು
ಹುಣಸೆ ಬೀಜ ನುಂಗಿ 10 ವರ್ಷದ ಬಾಲಕ ಸಾವು
Image Credit source: Pinterest

Updated on: Feb 07, 2024 | 4:19 PM

ಬಿಹಾರದ ಮುಜಾಫರ್‌ಪುರ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಮುಜಾಫರ್‌ಪುರದ ಸಕ್ರಾದ ಮಚ್ಚಿ ಗ್ರಾಮದ ರಾಜೇಶ್ ಮಹತೋ ಅವರ 10 ವರ್ಷದ ಮಗ ಆದರ್ಶ್ ಹುಣಸೆಹಣ್ಣು(Tamarind) ತಿಂದು ಸಾವನ್ನಪ್ಪಿದ್ದಾನೆ. ಆದರ್ಶ್ ಮೂರನೇ ತರಗತಿ ವಿದ್ಯಾರ್ಥಿ. ವರದಿಗಳ ಪ್ರಕಾರ, ಆದರ್ಶ್ ಶನಿವಾರ ಹುಣಸೆಹಣ್ಣು ತಿನ್ನುತ್ತಿದ್ದ ವೇಳೆ ಅದರ ಬೀಜವನ್ನು ನುಂಗಿದ್ದಾನೆ. ಪರಿಣಾಮ ಹುಣಸೆ ಬೀಜ(Tamarind Seeds) ಗಂಟಲಲ್ಲಿ ಸಿಲುಕಿದ್ದು, ಉಸಿರಾಟದ ತೊಂದರೆ ಉಂಟಾಗಿ ಸಾವನ್ನಪ್ಪಿರುವುದು ತಿಳಿದುಬಂದಿದೆ.

ಬಾಲಕ ಉಸಿರಾಡಲು ಕಷ್ಟಪಡುತ್ತಿದ್ದಂತೆ ಪೋಷಕರಲ್ಲಿ ಸಹಜವಾಗಿ ಆತಂಕ ಹುಟ್ಟಿಕೊಂಡಿದ್ದು, ತಕ್ಷಣ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಇದ್ದಕ್ಕಿದ್ದಂತೆ ಬಾಲಕನ ಸ್ಥಿತಿ ಗಂಭೀರವಾಗಿದೆ. ಪರಿಣಾಮ ಹೆಚ್ಚಿನ ಚಿಕಿತ್ಸೆಗಾಗಿ ಮುಜಾಫರ್‌ಪುರಕ್ಕೆ ಕರೆದೊಯ್ಯಲಾಗಿದೆ. ಮುಜಾಫರ್‌ಪುರ ಆಸ್ಪತ್ರೆಯಲ್ಲಿ  ಅಲ್ಟ್ರಾಸೌಂಡ್ ನಡೆಸಿದಾಗ ಬಾಲಕನ ಶ್ವಾಸಕೋಶದಲ್ಲಿ ಹುಣಸೆ ಬೀಜಗಳು ಅಂಟಿಕೊಂಡಿರುವುದು ಕಂಡುಬಂದಿದೆ. ತಕ್ಷಣ ಬಾಲಕನ ಪ್ರಾಣ ಉಳಿಸಲು ಶಸ್ತ್ರ ಚಿಕಿತ್ಸೆಯ ಅಗತ್ಯವಿದ್ದ ಕಾರಣ ವೈದ್ಯರ ಸಲಹೆಯಂತೆ ಕುಟುಂಬಸ್ಥರು ಪಾಟ್ನಾದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆತನ ಆಸ್ಪತ್ರೆ ತಲುಪುವ ಮಾರ್ಗಮಧ್ಯೆ ಬಾಲಕನ ಪ್ರಾಣ ಪಕ್ಷಿ ಹಾರಿ ಹೋಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಇದನ್ನೂ ಓದಿ: ಅಯೋಧ್ಯೆ ಯಾತ್ರೆ ಪ್ರಾರಂಭಿಸಿದ ವಿಶ್ವದ ಐಷಾರಾಮಿ ರೈಲು; 42 ವರ್ಷಗಳ ಬಳಿಕ ರೈಲಿನ ಮಾರ್ಗ ಬದಲಾವಣೆ

ಹುಣಸೆ ಬೀಜದಿಂದಾಗಿ 10ವರ್ಷದ ಬಾಲಕ ಸಾವನ್ನಪ್ಪಿರುವುದು ಕುಟುಂಬದಲ್ಲಿ ದುಃಖದ ವಾತಾವರಣ ಆವರಿಸಿದೆ . ಬಾಲಕನ ಸಾವಿಗೆ ಪೋಷಕರು ಅಳಲು ತೋಡಿಕೊಂಡಿದ್ದು, ಗ್ರಾಮದಲ್ಲಿ ಹುಣಸೆ ಹಣ್ಣಿನ ಸೇವನೆಯೇ ಭಯ ಹುಟ್ಟಿಸುವಂತಹ ವಾತಾವರಣ ನಿರ್ಮಾಣವಾಗಿದೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ