ಪ್ಲಾಸ್ಟಿಕ್​, ಪೇಪರ್​ ರದ್ದೀ… ಈತನನ್ನು ಗುಜರಿಯವನೆಂದು ಹೇಳುವುದಾದರೂ ಹೇಗೆ? ಹಾಡು ಕೇಳಿ

Street Singer : ತೇರೇ ನಾಮ್​ ಚಿತ್ರದ ಈ ಹಾಡನ್ನು ಈತನ ಕಂಠದಲ್ಲಿ ಕೇಳಿ. ತಮ್ಮ ಇಕ್ಕಟ್ಟು, ಚೌಕಟ್ಟನ್ನು ಮೀರಲಾಗದಂಥ ಅಸಹಾಯಕತೆಯಲ್ಲಿಯೂ ಬದುಕಿನ ಬಂಡಿಯನ್ನು ಹೀಗೆ ಕೌಶಲಯುತವಾಗಿ ಎಳೆಯುವ ಇಂಥವರ ಉತ್ಸಾಹಕ್ಕೆ ನಮೋನ್ನಮಃ.

ಪ್ಲಾಸ್ಟಿಕ್​, ಪೇಪರ್​ ರದ್ದೀ... ಈತನನ್ನು ಗುಜರಿಯವನೆಂದು ಹೇಳುವುದಾದರೂ ಹೇಗೆ? ಹಾಡು ಕೇಳಿ
ತೇರೇ ನಾಮ್ ಸಿನೆಮಾದ ಹಾಡನ್ನು ಹಾಡುತ್ತಿರುವ ಗುಜರಿ ವ್ಯಾಪಾರಿ
ಶ್ರೀದೇವಿ ಕಳಸದ

Updated on: Feb 09, 2023 | 6:14 PM

Viral Video : ಕಲೆ ತಾನಾಗಿಯೇ ಒಲಿಯುತ್ತದೆಯೋ, ಕಲೆಯನ್ನು ನಾವಾಗಿಯೇ ಒಲಿಸಿಕೊಳ್ಳಬೇಕೋ ಎಂಬ ಪ್ರಶ್ನೆ ಕೆಲವೊಮ್ಮೆ ಸಂದಿಗ್ಧಕ್ಕೆ ತಳ್ಳುತ್ತದೆ. ಏಕೆಂದರೆ ಹೀಗೆ ಹೊಟ್ಟೆಪಾಡಿಗಾಗಿ ನಿತ್ಯವೂ ಬೀದಿ ಅಲೆಯುವ ಅನೇಕರ ಬಳಿ ಸರಸ್ವತಿ ತಾನಾಗಿಯೇ ಹೋಗಿ ನೆಲೆಸುವುದನ್ನು ನೋಡಿದಾಗ ಇನ್ನೇನು ಅನ್ನಿಸಲು ಸಾಧ್ಯ? ಇದೀಗ ವೈರಲ್ ಆಗುತ್ತಿರುವ ಈ ಈ ವಿಡಿಯೋ ಗಮನಿಸಿ. ಈ ವ್ಯಕ್ತಿ ಸಲ್ಮಾನ್​ ಖಾನ್​ ಅಭಿನಯದ ತೇರೇ ನಾಮ್​ ಸಿನೆಮಾದ ತೂ ಕಿಸೀ ಕೀ ಹಾಡನ್ನು ಹಾಡುತ್ತಿದ್ದಾನೆ. ಹೀಗೆ ಹಾಡಿದರೆ ಹೊಟ್ಟೆ ತುಂಬುವುದೇ? ಹಾಡಿನ ಕೊನೆಯಲ್ಲಿ ಆತ ಏನು ಹೇಳುತ್ತಾನೆ ಕೇಳಿಸಿಕೊಳ್ಳಿ. ಅದೇ ಅವನ ನಿತ್ಯದ ಹಾಡುಪಾಡು.

20 ನಿಮಿಷದ ಹಿಂದೆಯಷ್ಟೇ ಈ ವಿಡಿಯೋ ಅನ್ನು ಇನ್​ಸ್ಟಾಗ್ರಾಂನ @RawSingerOfficial ಪುಟದಲ್ಲಿ ಹಂಚಿಕೊಳ್ಳಲಾಗಿದೆ. ಈತ ಗುಜರಿಗಾಗಿ ಮನೆಮನೆ ಅಲೆದು ಬದುಕು ನಡೆಸುವ ವ್ಯಕ್ತಿ. ಬೀದಿಗಳಲ್ಲಿ ಹೀಗೆ ಸಾಗುವಾಗ ಈತ ಹಾಡುತ್ತ ಜನರ ಗಮನ ಸೆಳೆಯುತ್ತಾನೆ. ಹೀಗೆ ಹೋಗುತ್ತಿರುವಾಗ ಯಾರೋ ದಾರಿಹೋಕರು ಈತನನ್ನು ನಿಲ್ಲಿಸಿ ಹಾಡಿಸಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಅಪ್​ಲೋಡ್ ಮಾಡಿದ್ದಾರೆ. ಈತ ಹಾಡಿರುವ ತೇರೇ ನಾಮ್​ ಸಿನೆಮಾದ ಮೂಲ ಹಾಡು ಇಲ್ಲಿದೆ ಕೇಳಿ.

 

ಯಾವ ಊರಲ್ಲಿ ಚಿತ್ರೀಕರಿಸಲಾಗಿದೆ ಎಂಬ ಮಾಹಿತಿ ಈ ವಿಡಿಯೋಗೆ ಇಲ್ಲ. ಆದರೆ ಈತ ಹೀಗೆ ಮನದುಂಬಿ ಹಾಡಿರುವುದು ಮಾತ್ರ ಕಿವಿಯಲ್ಲಿ ಅನುರಣಿಸುತ್ತಲೇ ಇರುತ್ತದೆ. ಏನು ಮಾಡುವುದು ಸಾಕಷ್ಟು ಇಂಥ ಪ್ರತಿಭಾವಂತರಿಗೆ ನಮ್ಮ ಭಾರತದಲ್ಲಿ ಅವಕಾಶಗಳು ಇಲ್ಲದಿರುವುದು ಅತ್ಯಂತ ಬೇಸರದ ಸಂಗತಿ.

ಇದನ್ನೂ ಓದಿ : ಬೆಂಗಳೂರಿನ ಮೆಕ್​​ಡೊನಾಲ್ಡ್ಸ್​​ನಿಂದ ಹತ್ತು ಸೆಕೆಂಡುಗಳಲ್ಲಿ ಫುಡ್​ ಡೆಲಿವರಿ ಪಡೆದ ಕೆನಡಾದ ವ್ಯಕ್ತಿ

ಇಂಥವರು ಹಾಡಿಕೊಳ್ಳುವುದು ತಮ್ಮ ಖುಷಿಗಾಗಿ ಮತ್ತು ಹೊಟ್ಟೆಪಾಡಿಗಾಗಿ. ಯಾವ ಮನ್ನಣೆಯ ಕನಸನ್ನೂ ಅವರು ಕಾಣಲು ಸಾಧ್ಯವಾಗದು. ತಮ್ಮ ಇಕ್ಕಟ್ಟು, ಚೌಕಟ್ಟು ಮತ್ತದನ್ನು ಮೀರಲಾಗದಂಥ ಅಸಹಾಯಕತೆ ಅವರ ಅರವಿನಲ್ಲಿರುತ್ತದೆ. ಆದರೆ ದಿನದ ಬಂಡಿ ಸಾಗಬೇಕಲ್ಲ? ಸವೆಸುವ ಹಾದಿ ಸುಗಮವಾಗಬೇಕಲ್ಲ? ಅದಕ್ಕಾಗಿ ವಿನೂತನ ತಂತ್ರಗಳನ್ನು ಅವರು ಹೀಗೆ ಹೆಣೆಯಲೇಬೇಕಲ್ಲ? ಕೇಳಿಸಿತೆ ಕೊನೆಯಲ್ಲಿ, ಪ್ಲಾಸ್ಟಿಕ್​ ಪೇಪರ್ ರದ್ದೀ

ಈ ವಿಡಿಯೋ ನೋಡಿದ ನೀವೇನಂತೀರಿ?

ಮತ್ತಷ್ಟು ವೈರಲ್ ವಿಡಿಯೋಗಳನ್ನು ನೋಡಲು ಕ್ಲಿಕ್ ಮಾಡಿ

Published On - 6:06 pm, Thu, 9 February 23

Shridevi Kalasad

ಶ್ರೀದೇವಿ ಕಳಸದ : ಮುಖ್ಯ ಉಪಸಂಪಾದಕಿ. ವಿಜಯ ಕರ್ನಾಟಕ, ಸುವರ್ಣ ನ್ಯೂಸ್, ಪ್ರಜಾವಾಣಿ ಮತ್ತು ವಿವಿಧ ಮಾಧ್ಯಮ ಸಂಸ್ಥೆಗಳು ಸೇರಿದಂತೆ ಒಟ್ಟು 16 ವರ್ಷಗಳ ಅನುಭವ. ಸಂಗೀತ, ಸಾಹಿತ್ಯ ಮತ್ತು ಲಲಿತ ಕಲೆಗಳಲ್ಲಿ ವಿಶೇಷ ಆಸಕ್ತಿ.

Follow Us