ಮಂಡ್ಯ: ಕೆಆರ್ಎಸ್ (KRS) ಜಲಾಶಯದಿಂದ 1 ಲಕ್ಷ ಕ್ಯೂಸೆಕ್ ನೀರನ್ನು ಕಾವೇರಿ ನದಿಗೆ ಬಿಟ್ಟ ಹಿನ್ನೆಲೆ ನದಿ ಪಾತ್ರದಲ್ಲಿರುವ ಹಲವು ದೇವಾಲಯಗಳು ಮುಳುಗಡೆಯಾಗಿರುವಂತಹ ಘಟನೆ ನಡೆದಿದೆ. ಶ್ರೀರಂಗಪಟ್ಟಣದ ವೆಲ್ಲಸ್ಲಿ ಸೇತುವೆ ಬಳಿ ಇರುವ ಆಂಜನೇಯಸ್ವಾಮಿ ಹಾಗೂ ಈಶ್ವರನ ದೇವಾಲಯವನ್ನು ಕಾವೇರಿ ಸಂಪೂರ್ಣ ಜಲದಿಗ್ಬಂಧನ ಮಾಡಿದ್ದು, ಮಳೆರಾಯನ ಕಾಟ ದೇವರಿಗೂ ತಪ್ಪದಂತ್ತಾಗಿದೆ. ಮುಂಜಾಗ್ರತಾವಾಗಿ ಶ್ರೀರಂಗಪಟ್ಟಣದ ವೆಲ್ಲಸ್ಲಿ ಸೇತುವೆ ಮೇಲೆ ಬಾರಿ ವಾಹನ ಸಂಚಾರ ನಿಷೇಧಿಸಲಾಗಿದೆ. ನೀರಿನ ಪ್ರಮಾಣ ಮತ್ತಷ್ಟು ಹೆಚ್ಚಾದ್ರೆ ಸೇತುವೆ ಮುಳುಗಡೆಯಾಗುವ ಆತಂಕ ಎದುರಾಗಲಿದೆ. ಒಂದು ಲಕ್ಷ ಕ್ಯೂಸೆಕ್ ನೀರು ಬಿಟ್ಟಿರುವ ಕಾರಣ ಹಲವೆಡೆ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಕೊಡಗಿನಲ್ಲಿ ಮತ್ತಷ್ಟು ಮಳೆಯಾದ್ರೆ ನದಿಗೆ ಮತ್ತಷ್ಟು ನೀರನ್ನು ಬಿಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಶವಸಂಸ್ಕಾರಕ್ಕೆ ಗ್ರಾಮಸ್ಥರ ಪರದಾಟ; ಪ್ರವಾಹದಲ್ಲೇ ಶವ ಹೊತ್ತೈದು ಅಂತ್ಯಕ್ರಿಯೆ ಮಾಡಿದ ಜನ
ಕಾವೇರಿ ನದಿಯ 1 ಕಿ.ಮೀ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ನಿಷೇಧಿಸಿ ಶ್ರೀರಂಗಪಟ್ಟಣ ತಹಶೀಲ್ದಾರ್ ಶ್ವೇತ ರವೀಂದ್ರ ಆದೇಶ ಹೊರಡಿಸಿದರು. ಆದರೆ ತಹಶೀಲ್ದಾರ್ ಆದೇಶಕ್ಕಿಲ್ಲ ಕಿಮ್ಮತ್ತು ಇಲ್ಲದಂತ್ತಾಗಿದ್ದು, ಆದೇಶ ಉಲ್ಲಂಘಿಸಿ ಕಾವೇರಿ ತೀರದಲ್ಲಿ ಪಿಂಡ ಪ್ರದಾನ ಕಾರ್ಯ ಮಾಡಲಾಗಿದೆ. ಹಣದಾಸೆಗೆ ಕೆಲವು ವೈದಿಕರು ಅಪಾಯ ಲೆಕ್ಕಿಸದೇ ಪಿಂಡ ಪ್ರಧಾನ ಮಾಡಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಮತ್ತೊಂದೆಡೆ ಆದೇಶ ಹೊರಡಿಸಿ ತಾಲೂಕು ಆಡಳಿತ ಮೈಮರೆತಿದ್ದು, ಕಳೆದ ತಿಂಗಳಷ್ಟೇ ಬೆಂಗಳೂರು ಮೂಲದ ಯುವಕ ನದಿಯಲ್ಲಿ ಕೊಚ್ಚಿ ಹೋಗಿದ್ದ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.