ಸರ್ಕಾರಿ ನಿವಾಸ ಖಾಲಿ ಮಾಡುವಂತೆ ಮಾಜಿ ಮಂತ್ರಿ ಮಹದೇವಪ್ಪಗೆ ಸಚಿವ ಭೈರತಿ ಸುರೇಶ್ ಒತ್ತಡ?

Edited By:

Updated on: Sep 07, 2026 | 1:08 PM

ಮಾಜಿ ಸಚಿವ ಹೆಚ್.ಸಿ. ಮಹದೇವಪ್ಪ ಅವರಿಗೆ ಹಾಲಿ ಸಚಿವ ಭೈರತಿ ಸುರೇಶ್ ಸರ್ಕಾರಿ ನಿವಾಸ ಖಾಲಿ ಮಾಡುವಂತೆ ಒತ್ತಡ ಹೇರುತ್ತಿದ್ದಾರೆಂಬ ಆರೋಪ ಕೇಳಿಬಂದಿದೆ. ಬೆಂಗಳೂರಿನ ಕ್ರೆಸೆಂಟ್ ರಸ್ತೆಯಲ್ಲಿರುವ ನಿವಾಸದಲ್ಲಿ ಮಹದೇವಪ್ಪ ಇರುವಾಗಲೇ ಭೈರತಿ ಬೆಂಬಲಿಗರು ಕಾಮಗಾರಿ ಆರಂಭಿಸಿದ್ದು, ಮೀಟಿಂಗ್ ಹಾಲ್ ಒಡೆಸಿ ಹಾಕಿದ್ದಾರೆನ್ನಲಾಗಿದೆ. ನಿಯಮದ ಪ್ರಕಾರ ಇನ್ನೂ ಸಮಯವಿದ್ದರೂ ಈ ಘಟನೆ ನಡೆದಿದೆ ಎನ್ನಲಾಗಿದೆ.

ಬೆಂಗಳೂರು, ಸೆಪ್ಟೆಂಬರ್​​ 07: ಸರ್ಕಾರಿ ನಿವಾಸ ಖಾಲಿ ಮಾಡುವಂತೆ ಹಾಲಿ ಸಚಿವರಿಂದ ಮಾಜಿ ಮಂತ್ರಿಗೆ ಅನಗತ್ಯ ಒತ್ತಡ ಆರೋಪ ಕೇಳಿಬಂದಿದೆ. ಮಾಜಿ ಸಚಿವ H.C.ಮಹದೇವಪ್ಪಗೆ ಭೈರತಿ ಸುರೇಶ್ ಒತ್ತಡ ಹೇರಿದ್ದಾರೆ ಎನ್ನಲಾಗಿದ್ದು, ಬೆಂಗಳೂರಿನ ಕ್ರೆಸೆಂಟ್ ರಸ್ತೆಯಲ್ಲಿರುವ ಸಚಿವರ ಸರ್ಕಾರಿ ನಿವಾಸದಲ್ಲಿ ಮಹದೇವಪ್ಪ ವಾಸವಿರುವಾಗಲೇ ಸರ್ಕಾರಿ ನಿವಾಸದ ಮೀಟಿಂಗ್ ಹಾಲ್​​ನ ಭೈರತಿ ಒಡೆಸಿ ಹಾಕಿದ್ದಾರೆ. ಇದೇ ಮನೆಯಲ್ಲಿ ಹಾಲಿ ಮಹದೇವಪ್ಪ ಅವರು ವಾಸವಿದ್ದು,ನಿಯಮದ ಪ್ರಕಾರ ನಿವಾಸ ಖಾಲಿ ಮಾಡಲು ಇನ್ನೂ ಸಮಯವಿದೆ. ಹೀಗಿದ್ದರೂ ಮನೆಗೆ ಭೈರತಿ ಸೂಚನೆ ಮೇರೆಗೆ ಪೇಂಟಿಂಗ್ ಮಾಡಲಾಗಿದ್ದು, ಮಹದೇವಪ್ಪ ಮನೆಯ ಸಿಬ್ಬಂದಿಗೂ ಆವಾಜ್ ಹಾಕಿರುವ ಆರೋಪ ಕೇಳಿಬಂದಿದೆ. ಇನ್ನು ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಮಹದೇವಪ್ಪ, ಸಚಿವ ಭೈರತಿ ಸುರೇಶ್​ಗೆ ಈ ಮನೆ ಅಲಾಟ್ ಆಗಿದೆ. ಖಾಲಿ ಮಾಡಿ ಅಂತ ಹೇಳಿದ್ದಾರೆ, ಖಾಲಿ ಮಾಡಬೇಕಲ್ವಾ? ಎಂದು ಪ್ರಶ್ನಿಸಿದ್ದಾರೆ. ಭೈರತಿ ಸುರೇಶ್​ಗೆ ಬಹುಶಃ ಮನೆಯೇ ಇಲ್ಲ ಅನಿಸುತ್ತದೆ. ಅವರಿಗೆ ಏನೇನು ಕಷ್ಟ ಇದೆಯೋ ಏನೋ ಪಾಪ. ಹಿರಿಯ, ಕಿರಿಯ ನಾಯಕ ಅಂತಾ ಬರಲ್ಲ, ಅವರು ಸಚಿವರು. ಅವರ ಕಾರ್ಯ ಚಟುವಟಿಕೆಗೆ ಅಡ್ಡಿ ಆಗಬಾರದು. ಹೀಗಾಗಿ ನಾನು ಬಾಡಿಗೆ ಮನೆ ಹುಡುಕ್ತಿದ್ದೇನೆ, ತಕ್ಷಣ ಖಾಲಿ ಮಾಡ್ತೇನೆ. ಮನೆ ವಿಷಯದಲ್ಲಿ ನಾನು ಏನೂ ಹೇಳಲ್ಲ ಎಂದವರು ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Loading...
Unable to load recommendations.
Follow Us