ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿನ ನೀರಿನ ಸಮಸ್ಯೆಗೆ ಬಿತ್ತು ಬ್ರೇಕ್
ಬಂಡೀಪುರ ರಾಷ್ಟ್ರೀಯ ಉದ್ಯಾನವನ ದೇಶದಲ್ಲಿ ಪ್ರಸಿದ್ದಿ ಪಡೆದ ಹುಲಿ ಸಂರಕ್ಷಿತಾರಣ್ಯವಾಗಿದೆ. ಬೇಸಿಗೆ ಆರಂಭವಾಗುತ್ತಿದ್ದಂತೆ ನೀರಿನ ಸಮಸ್ಯೆ ತಲೆದೋರುತ್ತಿತ್ತು. ಈ ಬಾರಿ ಬಂಡೀಪುರದಲ್ಲಿ ಉತ್ತಮ ಮಳೆಯಾಗಿದ್ದ ಪರಿಣಾಮ ಕೆರೆಗಳಲ್ಲಿ ಇನ್ನೂ ಜೀವ ಜಲವಿದೆ. ಅಲ್ಲದೇ ಪ್ರಾಣಿಗಳಿಗೆ ನೀರಿನ ಸಮಸ್ಯೆಯಾಗದಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಿದ್ದಾರೆ.
ಚಾಮರಾಜನಗರ, ಮಾರ್ಚ್ 11: ಗುಂಡ್ಲುಪೇಟೆ (Gundlupet) ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನ (Bandipur National Park) ವಿಶ್ವದಲ್ಲೇ ಹೆಸರುವಾಸಿಯಾದ ಹುಲಿ ಸಂರಕ್ಷಿತಾರಣ್ಯವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಅಭಯಾರಣ್ಯದಲ್ಲಿ ಸಫಾರಿ ನಡೆಸಿದ್ದರು. ಅಂದಿನಿಂದಲೂ ಕೂಡ ಬಂಡೀಪುರಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಕೂಡ ದ್ವಿಗುಣವಾಗಿದೆ. ಬಂಡೀಪುರ ರಾಜ್ಯದಲ್ಲಿ ಅತಿ ಹೆಚ್ಚು ಹುಲಿ, ಆನೆ, ಚಿರತೆ ಹೊಂದಿರುವ ಕಾಡಾಗಿದೆ.
ಕಳೆದ ಬಾರಿ ಇಲ್ಲಿ ಕಡಿಮೆ ಮಳೆಯ ಮಳೆಯಾಗಿತ್ತು. ಪರಿಣಾಮ 400 ಕೆರೆಗಳ ಪೈಕಿ ಶೇ 90 ರಷ್ಟು ಕೆರೆಗಳು ಬರಿದಾಗಿದ್ದವು. ನೀರಿನ ಅಭಾವದಿಂದ ಕಬಿನಿ ಹಿನ್ನೀರು ಹಾಗೂ ತಮಿಳುನಾಡಿನ ಮಾಯಾರ್ ಕಡೆ ಪ್ರಾಣಿಗಳು ವಲಸೆ ಹೋಗಿದ್ದವು. ಆದರೆ, ಮಾರ್ಚ್ ಬಂದರೂ ಕೂಡ ಕೆರೆಗಳಲ್ಲಿ ನೀರು ಇದೆ. ಇದರಿಂದ ಪ್ರಾಣಿಗಳಿಗೆ ನೀರಿನ ಸಮಸ್ಯೆಯಾಗಿಲ್ಲ.
ಬಂಡೀಪುರದಲ್ಲಿ ಕಳೆದ ಬಾರಿ ನೀರಿನ ಕೊರತೆಯಾಗಿ ಪ್ರಾಣಿಗಳಿಗೆ ನೀರಿನ ಸಮಸ್ಯೆ ತಲೆದೋರಿತ್ತು. ಆದ್ದರಿಂದ ಈ ಬಾರಿ ಎಚ್ಚೆತ್ತುಕೊಂಡಿರುವ ಅರಣ್ಯಾಧಿಕಾರಿಗಳು ಸೋಲಾರ್ ಬೋರ್ ವೆಲ್ ಮೂಲಕ ನೀರು ತುಂಬಿಸಲು ಕಾರ್ಯೋನ್ಮುಖರಾಗಿದ್ದಾರೆ. ಕೆರೆಗೆ ನೀರು ತುಂಬಿಸುವ ಜೊತೆಗೆ ಪ್ರಾಣಿಗಳಿಗೆ ಕುಡಿಯುವ ನೀರಿಗೆ ಅಭಾವವಾಗದಂತೆ ಎಚ್ಚರಿಕೆ ವಹಿಸುವಂತೆ ಸಿಬ್ಬಂದಿಗಳಿಗೆ ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ.