AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೀಂ ಇಂಡಿಯಾದ ಮುಂದೆ ಅಲ್ಲಾಹು ಅಕ್ಬರ್ ಘೋಷಣೆ: ಜೋರಾಗಿ ಕೂಗಿ ಎಂದ ಬಾಂಗ್ಲಾ ನಾಯಕ; ವಿಡಿಯೋ ವೈರಲ್

ಟೀಂ ಇಂಡಿಯಾದ ಮುಂದೆ ಅಲ್ಲಾಹು ಅಕ್ಬರ್ ಘೋಷಣೆ: ಜೋರಾಗಿ ಕೂಗಿ ಎಂದ ಬಾಂಗ್ಲಾ ನಾಯಕ; ವಿಡಿಯೋ ವೈರಲ್

ಪೃಥ್ವಿಶಂಕರ
|

Updated on: Dec 09, 2024 | 8:13 PM

Under-19 Asia Cup final: ಬಾಂಗ್ಲಾದೇಶ ತಂಡವು ದುಬೈನಲ್ಲಿ ನಡೆದ ಅಂಡರ್-19 ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಭಾರತವನ್ನು 59 ರನ್‌ಗಳಿಂದ ಸೋಲಿಸಿ ಸತತ ಎರಡನೇ ಬಾರಿಗೆ ಪ್ರಶಸ್ತಿ ಗೆದ್ದಿದೆ. ಪಂದ್ಯದಲ್ಲಿ ಬಾಂಗ್ಲಾದೇಶದ ಗೆಲುವು ಖಚಿತವಾದ ಬಳಿಕ ಅದರ ಅಭಿಮಾನಿಗಳು "ಅಲ್ಲಾಹು ಅಕ್ಬರ್" ಎಂದು ಘೋಷಣೆ ಕೂಗಿದರು. ಈ ವೇಳೆ ತಂಡದ ನಾಯಕ ಅಜೀಜುಲ್ ಹಕೀಮ್ ಅವರು ಅದನ್ನು ಮತ್ತಷ್ಟು ಜೋರಾಗಿ ಕೂಗುವಂತೆ ಪ್ರೋತ್ಸಾಹಿಸಿದರು. ಇದೀಗ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ದುಬೈನಲ್ಲಿ ನಡೆದ ಅಂಡರ್-19 ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಭಾರತ ಯುವ ಪಡೆಯನ್ನು ಮಣಿಸಿದ ಬಾಂಗ್ಲಾದೇಶ ತಂಡ ಸತತ ಎರಡನೇ ಬಾರಿಗೆ ಈ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ ತಂಡ 199 ರನ್​ಗಳಿಗೆ ತನ್ನ ಇನ್ನಿಂಗ್ಸ್ ಮುಗಿಸಿತು. ಈ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ನಿಯಮಿತ ಅಂತರದಲ್ಲಿ ವಿಕೆಟ್​ಗಳನ್ನು ಕೈಚೆಲ್ಲಿದ ಕಾರಣದಿಂದಾಗಿ 139 ರನ್​ಗಳಿಗೆ ಆಲೌಟ್ ಆಗುವುದರೊಂದಿಗೆ 59 ರನ್​ಗಳ ಹೀನಾಯ ಸೋಲನುಭವಿಸಿತು. ಈ ನಡುವೆ ತಂಡದ ಗೆಲುವು ಖಚಿತವಾದ ಬಳಿಕ ತಂಡವನ್ನು ಪ್ರೋತ್ಸಾಹಿಸಲು ಮೈದಾನಕ್ಕೆ ಬಂದಿದ್ದ ಬಾಂಗ್ಲಾದೇಶ ಅಭಿಮಾನಿಗಳು ಅಲ್ಲಾಹು ಅಕ್ಬರ್ ಎಂದು ಕೂಗಲಾರಂಭಿಸಿದರು. ಈ ವೇಳೆ ಅಭಿಮಾನಿಗಳ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸುವ ಸಲುವಾಗಿ ಬಾಂಗ್ಲಾದೇಶ ತಂಡದ ನಾಯಕ ಅಜೀಜುಲ್ ಹಕೀಮ್ ತಮೀಮ್ ಅಲ್ಲಾಹು ಅಕ್ಬರ್ ಘೋಷಣೆಗಳನ್ನು ಜೋರಾಗಿ ಕೂಗುವಂತೆ ಅಭಿಮಾನಿಗಳ ಬಳಿ ಕೇಳಿಕೊಂಡರು. ಇದೀಗ ಅದರ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಬೆಂಬಲಿಸಲು ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಮೈದಾನಕ್ಕೆ ಆಗಮಿಸಿದ್ದರು. ತಂಡದ ಗೆಲುವು ಸನಿಹವಾದಂತೆ ಬಾಂಗ್ಲಾ ಬೆಂಬಲಿಗರು ಅಲ್ಲಾಹು ಅಕ್ಬರ್ ಎಂದು ಜೋರಾಗಿ ಘೋಷಣೆಗಳನ್ನು ಕೂಗಲಾರಂಭಿಸಿದರು. ಇತ್ತ ತಂಡದ ಗೆಲುವು ಖಚಿತವಾದ ಬಳಿಕ ಅಭಿಮಾನಿಗಳ ಉತ್ಸಾಹ ಮತ್ತಷ್ಟು ಹೆಚ್ಚಾಯಿತು. ಈ ಸಮಯದಲ್ಲಿ, ಬಾಂಗ್ಲಾದೇಶ ತಂಡದ ನಾಯಕ ಅಜೀಜುಲ್ ಹಕೀಮ್ ತಮೀಮ್ ಬಾಂಗ್ಲಾದೇಶದ ಬೆಂಬಲಿಗರನ್ನು ಅಲ್ಲಾಹು ಅಕ್ಬರ್ ಘೋಷಣೆಗಳನ್ನು ಮತ್ತಷ್ಟು ಜೋರಾಗಿ ಕೂಗುವಂತೆ ಪ್ರೇರೇಪಿಸಿದರು.

ಬಾಂಗ್ಲಾದೇಶ ತಂಡದ ನಾಯಕ ಅಜೀಜುಲ್ ಹಕೀಮ್ ತಮೀಮ್ ಅವರ ಇಂಗಿತವನ್ನು ಅನುಸರಿಸಿ, ಅಭಿಮಾನಿಗಳು ಕೂಡ ಅಲ್ಲಾಹು ಅಕ್ಬರ್ ಎಂದು ಕೂಗುವುದನ್ನು ಮತ್ತಷ್ಟು ಜೋರು ಮಾಡಿದರು. ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದಾಗ್ಯೂ, ಕೆಲವರು ಇದನ್ನು ಆಟದ ಮನೋಭಾವಕ್ಕೆ ವಿರುದ್ಧವಾಗಿದೆ ಎಂದು ಅಭಿಪ್ರಾಯಪಟ್ಟರೆ, ಇನ್ನು ಕೆಲವರು ಅಭಿಮಾನಿಗಳನ್ನು ಈ ಗೆಲುವಿನಲ್ಲಿ ತೊಡಗಿಕೊಳ್ಳುವಂತೆ ಮಾಡಲು ನಾಯಕನ ಕಡೆಯಿಂದ ಮಾಡಿದ ತಂತ್ರ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ