ರಾಜಿನಾಮೆ ಕೊಟ್ಟ ಚುನಾವಣೆಗೆ ಬಾ, ನಾನು ಸಿದ್ದ: ವಿಜಯೇಂದ್ರಗೆ ಯತ್ನಾಳ್​ ಸವಾಲು

Edited By: ವಿವೇಕ ಬಿರಾದಾರ

Updated on: Apr 06, 2025 | 3:52 PM

ಬಸನಗೌಡ ಪಾಟೀಲ್ ಯತ್ನಾಳ್ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರಿಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸವಾಲು ಹಾಕಿದ್ದಾರೆ. ಹಿಂದೂತ್ವದ ಆಧಾರದ ಮೇಲೆ ಚುನಾವಣೆಯಲ್ಲಿ ಗೆಲ್ಲುವುದಾಗಿ ಹೇಳಿದ್ದಾರೆ. ಬಿಎಸ್ ಯಡಿಯೂರಪ್ಪ ಕುಟುಂಬದ ಪ್ರಭಾವದಿಂದ ಮುಕ್ತವಾದ ಬಳಿಕ ಬಿಜೆಪಿಗೆ ಮರಳುವುದಾಗಿ ತಿಳಿಸಿದ್ದಾರೆ.

ಶಾಸಕ ಸ್ಥಾನಕ್ಕೆ ನೀನು ರಾಜೀನಾಮೆ ಕೊಡು, ನಾನು ಸಹ ಕೊಡುತ್ತೇನೆ. ಚುನಾವಣೆಗೆ ಹೋಗೋಣ ಬಾ ಎಂದು ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಅವರು ಬಿಜೆಪಿ ರಾಜ್ಯಾಧ್ಯಕ್ಷ ವಿವೈ ವಿಜಯೇಂದ್ರಗೆ ಸವಾಲು ಎಸೆದಿದ್ದಾರೆ. ಹುಬ್ಬಳ್ಳಿಯ ಖಾಸಗಿ ಹೋಟೆಲ್​ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನು ಕೇವಲ ಹಿಂದೂತ್ವದ ಆಧಾರದ ಮೇಲೆ ಚುನಾವಣೆಯಲ್ಲಿ ಗೆಲ್ಲುತ್ತೇನೆ. ನನಗೆ ಮುಸ್ಲಿಮರ ವೋಟ್​ ಬೇಡ. ವಿಜಯೇಂದ್ರ ನಿನಗೆ ತಾಕತ್​ ಇದ್ಯಾ, ಚುನಾವಣೆಗೆ ರೆಡಿಯಿದ್ದೇನೆ. ಹಂದಿ ಕಡೆಯಿಂದ ನನ್ನ ವಿರುದ್ಧ ಮಾತನಾಡಿಸಬೇಡ ಎಂದು ಪರೋಕ್ಷವಾಗಿ ರೇಣುಕಾಚಾರ್ಯಗೆ ಬಸನಗೌಡ ಪಾಟೀಲ್​ ಯತ್ನಾಳ್ ಹಂದಿ ಎಂದಿದ್ದಾರೆ. ಕುಟುಂಬ ಮುಕ್ತ ಆದ ಮೇಲೆ ನಾನು ಬಿಜೆಪಿಗೆ ಹೋಗುತ್ತೇನೆ ಎಂದರು.

ಬಿಜೆಪಿ ಬಿಎಸ್ ಯಡಿಯೂರಪ್ಪ ಕುಟುಂಬದಿಂದ ಮುಕ್ತಿ ಆದ ಮೇಲೆ ಹೋಗುತ್ತೇನೆ. ಒಂದು ದಿನ ಹೋಗಲೆಬೇಕು. ನಾನು ಒಳ್ಳೆಯವನು,ದುಷ್ಟರಿಗೆ ನಾನು ದುಷ್ಟ. ಪಂಚಮಸಾಲಿ ಟ್ರಸ್ಟ್​ನ ಪ್ರಭಣ್ಣ ಮಠದ ಆಸ್ತಿಯನ್ನು ಹೊಡೆದಿದ್ದಾರೆ. ಕೂಡಲ ಸಂಗಮದ ಆಸ್ತಿಯನ್ನು ತನ್ನ ಕುಟುಂಬದ ಆಸ್ತಿ ಮಾಡಿಕೊಂಡಿದ್ದಾನೆ ಎಂದು ಏಕವಚನದಲ್ಲಿ ಏಗ್ದಾಳಿ ಮಾಡಿದರು.

Loading...
Unable to load recommendations.
Follow Us