AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಗಾವಿಯಲ್ಲಿ ಬರಗಾಲದ ಭೀತಿ; ಮಳೆರಾಯನನ್ನು ಒಲಿಸಿಕೊಳ್ಳಲು ‘ಕತ್ತೆಗಳ ಮದುವೆ’ ಮಾಡಿದ ಶೇಡಬಾಳ ಗ್ರಾಮಸ್ಥರು

ಬೆಳಗಾವಿಯಲ್ಲಿ ಬರಗಾಲದ ಭೀತಿ; ಮಳೆರಾಯನನ್ನು ಒಲಿಸಿಕೊಳ್ಳಲು ‘ಕತ್ತೆಗಳ ಮದುವೆ’ ಮಾಡಿದ ಶೇಡಬಾಳ ಗ್ರಾಮಸ್ಥರು

Sahadev Mane
| Edited By: |

Updated on: Jul 01, 2026 | 11:19 AM

Share

ಮುಖ್ಯಾಂಶಗಳು

  • ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಈ ಬಾರಿ ಮುಂಗಾರು ಮಳೆ ಸಂಪೂರ್ಣವಾಗಿ ಕೈಕೊಟ್ಟಿದೆ
  • ಜೂನ್ ತಿಂಗಳು ಕಳೆದು ಜುಲೈ ಆರಂಭವಾದರೂ ವಾಡಿಕೆಯಂತೆ ಮಳೆಯಾಗದ ಹಿನ್ನೆಲೆ
  • ಮಳೆಗಾಗಿ ಗ್ರಾಮಸ್ಥರೆಲ್ಲರೂ ಒಟ್ಟಾಗಿ ಸೇರಿ ಸಡಗರ-ಸಂಭ್ರಮದಿಂದ ಕತ್ತೆಗಳ ಮದುವೆ

ಬೆಳಗಾವಿ ಜಿಲ್ಲೆಯಲ್ಲಿ ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟಿದ್ದು, ಭೀಕರ ಬರಗಾಲದ ಛಾಯೆ ಆವರಿಸಿದೆ. ಪಶ್ಚಿಮ ಘಟ್ಟಗಳಲ್ಲಿ ಮಳೆ ಕೊರತೆಯಿಂದ ಕೃಷ್ಣಾ ನದಿ ತೀರದ ರೈತರು ಸಂಕಷ್ಟದಲ್ಲಿದ್ದಾರೆ. ಬಿತ್ತಿದ ಬೆಳೆಗಳು ಒಣಗುತ್ತಿದ್ದು, ಜಲಮೂಲಗಳು ಕ್ಷೀಣಿಸುತ್ತಿವೆ. ಮಳೆಗಾಗಿ ಕಾಗವಾಡ ತಾಲೂಕಿನ ಶೇಡಬಾಳ ಗ್ರಾಮಸ್ಥರು ಪ್ರಾಚೀನ ನಂಬಿಕೆಯಂತೆ ಕತ್ತೆಗಳ ಮದುವೆಯನ್ನು ವಿಶಿಷ್ಟವಾಗಿ ಆಚರಿಸಿದ್ದಾರೆ. ಮಳೆರಾಯನನ್ನು ಪ್ರಸನ್ನಗೊಳಿಸಿ ಬದುಕನ್ನು ಉಳಿಸಿಕೊಳ್ಳಲು ಈ ಆಚರಣೆ ಮೊರೆ ಹೋಗಿದ್ದಾರೆ.

ಬೆಳಗಾವಿ, ಜು.1: ಸಪ್ತ ನದಿಗಳ ಉಗಮ ಸ್ಥಾನವಾದ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಈ ಬಾರಿ ಮುಂಗಾರು ಮಳೆ ಸಂಪೂರ್ಣವಾಗಿ ಕೈಕೊಟ್ಟಿದೆ. ಜೂನ್ ತಿಂಗಳು ಕಳೆದು ಜುಲೈ ಆರಂಭವಾದರೂ ವಾಡಿಕೆಯಂತೆ ಮಳೆಯಾಗದ ಹಿನ್ನೆಲೆಯಲ್ಲಿ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಭೀಕರ ಬರಗಾಲದ ಛಾಯೆ ಆವರಿಸಿದೆ. ಈ ಮಳೆ ಬಿಕ್ಕಟ್ಟಿನಿಂದ ಕಂಗಾಲಾಗಿರುವ ಕೃಷ್ಣಾ ನದಿ ತೀರದ ರೈತರು ಹಾಗೂ ಸಾರ್ವಜನಿಕರು ಈಗ ವರುಣ ದೇವನನ್ನು ಪ್ರಸನ್ನಗೊಳಿಸಲು ವಿಶಿಷ್ಟ ಹಾಗೂ ವಿಚಿತ್ರ ಆಚರಣೆಯ ಮೊರೆ ಹೋಗಿದ್ದಾರೆ. ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಶೇಡಬಾಳ ಗ್ರಾಮದಲ್ಲಿ ಮಳೆಗಾಗಿ ಗ್ರಾಮಸ್ಥರೆಲ್ಲರೂ ಒಟ್ಟಾಗಿ ಸೇರಿ ಸಡಗರ-ಸಂಭ್ರಮದಿಂದ ಕತ್ತೆಗಳ ಮದುವೆಯನ್ನು ನೆರವೇರಿಸಿದ್ದಾರೆ. ಕತ್ತೆಗಳ ಮದುವೆ ಮಾಡಿದರೆ ಮಳೆರಾಯ ಕೃಪೆ ತೋರುತ್ತಾನೆ ಎಂಬ ಪುರಾತನ ನಂಬಿಕೆ ಜನರಲ್ಲಿ ಇರುವುದರಿಂದ, ಈ ಶಾಸ್ತ್ರವನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ಮಾಡಲಾಗಿದೆ. ಮದುಮಗ ಹಾಗೂ ಮದುಮಗಳಂತೆ ಕತ್ತೆಗಳನ್ನು ಸುಂದರವಾಗಿ ಸಿಂಗರಿಸಿ, ಡೊಳ್ಳು-ತಮಟೆಗಳ ವಾದ್ಯ ವೈಭವದೊಂದಿಗೆ ಇಡೀ ಊರಿನ ಪ್ರಮುಖ ಬೀದಿಗಳಲ್ಲಿ ಭರ್ಜರಿ ಮೆರವಣಿಗೆ ನಡೆಸಲಾಯಿತು. ಬಳಿಕ ಕತ್ತೆಗಳಿಗೆ ವಿಶೇಷ ಪೂಜೆ ಸಲ್ಲಿಸಿ, ಮದುವೆಯ ಶಾಸ್ತ್ರ ಮುಗಿಸಿ ಇಡೀ ಗ್ರಾಮಸ್ಥರು ಮಳೆರಾಯನಿಗೆ ಕೈಮುಗಿದು ಪ್ರಾರ್ಥನೆ ಸಲ್ಲಿಸಿದರು. ಕರ್ನಾಟಕ ಮಾತ್ರವಲ್ಲದೆ ನೆರೆಯ ಮಹಾರಾಷ್ಟ್ರದ ಜಲಾನಯನ ಪ್ರದೇಶಗಳಲ್ಲೂ ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ. ಮುಂಗಾರು ಮಳೆಯ ಆರಂಭದ ಮುನ್ಸೂಚನೆ ನಂಬಿ ಗಡಿಭಾಗದ ರೈತರು ಸಾಲಸೋಲ ಮಾಡಿ ಜಮೀನುಗಳಲ್ಲಿ ಬಿತ್ತನೆ ಕಾರ್ಯವನ್ನು ಮುಗಿಸಿದ್ದರು. ಆದರೆ ಬಿತ್ತನೆಯಾದ ನಂತರ ಮಳೆ ಸಂಪೂರ್ಣವಾಗಿ ಮಾಯವಾಗಿರುವುದರಿಂದ ಮೊಳಕೆ ಒಡೆಯುತ್ತಿದ್ದ ಪೈರುಗಳು ಒಣಗಲಾರಂಭಿಸಿವೆ. ಇತ್ತ ಕೃಷ್ಣಾ ನದಿಯ ಒಳಹರಿವು ಕಡಿಮೆಯಾಗಿ ಜಲಮೂಲಗಳು ದಿನದಿಂದ ದಿನಕ್ಕೆ ಕ್ಷೀಣಿಸುತ್ತಿವೆ. “ಮಳೆ ಬರದಿದ್ದರೆ ನಮ್ಮ ಬದುಕು ಬೀದಿಗೆ ಬೀಳುತ್ತದೆ, ಅದಕ್ಕಾಗಿಯೇ ಶ್ರದ್ಧೆಯಿಂದ ಈ ಆಚರಣೆ ಮಾಡಿದ್ದೇವೆ” ಎಂದು ಕಂಗಾಲಾಗಿರುವ ಶೇಡಬಾಳ ಗ್ರಾಮದ ರೈತರು ಅಳಲು ತೋಡಿಕೊಂಡಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us