ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆ ಅಬ್ಬರ: ಬೆಳಗಾವಿ ಜಿಲ್ಲೆಯಲ್ಲಿ ಮೈದುಂಬಿ ಹರಿಯುತ್ತಿರುವ ನದಿಗಳು

Edited By:

Updated on: Jul 06, 2026 | 9:55 AM

ಪಶ್ಚಿಮ ಘಟ್ಟ ಮತ್ತು ಖಾನಾಪುರ ತಾಲೂಕಿನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಮಲಪ್ರಭಾ, ಘಟಪ್ರಭಾ, ಕೃಷ್ಣಾ ಸೇರಿದಂತೆ ಬೆಳಗಾವಿ ಜಿಲ್ಲೆಯ ಸಪ್ತ ನದಿಗಳು ಕೇವಲ ನಾಲ್ಕೇ ದಿನದಲ್ಲಿ ಮೈದುಂಬಿ ಹರಿಯುತ್ತಿವೆ. ಬತ್ತಿ ಹೋಗಿದ್ದ ನವಿಲುತೀರ್ಥ ಜಲಾಶಯಕ್ಕೂ ನೀರು ಹರಿದು ಜೀವಕಳೆ ಬಂದಿದೆ. ಹಲವು ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಮುಂದುವರಿದಿದೆ.

ಬೆಳಗಾವಿ, ಜುಲೈ 6: ಪಶ್ಚಿಮ ಘಟ್ಟ ಪ್ರದೇಶ ಮತ್ತು ಖಾನಾಪುರ ತಾಲೂಕಿನಾದ್ಯಂತ ಕಳೆದ ನಾಲ್ಕು ದಿನಗಳಿಂದ ನಿರಂತರವಾಗಿ ಧಾರಾಕಾರ ಮಳೆಯಾಗುತ್ತಿದ್ದು, ಬೆಳಗಾವಿ ಜಿಲ್ಲೆಯ ಬತ್ತಿ ಹೋಗಿದ್ದ ನದಿಗಳಿಗೆ ಜೀವಕಳೆ ಬಂದಿದೆ. ಮಲಪ್ರಭಾ ನದಿಯು ಕಳೆದ ನಾಲ್ಕು ದಿನಗಳ ಹಿಂದೆ ಸಂಪೂರ್ಣವಾಗಿ ಒಣಗಿತ್ತು. ಆದರೆ, ಈಗ ಪಶ್ಚಿಮ ಘಟ್ಟದಲ್ಲಿನ ಮಳೆಯಿಂದಾಗಿ ನದಿಯು ಮೈದುಂಬಿ ಹರಿಯುತ್ತಿದ್ದು, 1,500 ರಿಂದ 2,000 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಮಲಪ್ರಭಾ ನದಿಯು ಸವದತ್ತಿ ಬಳಿ ಇರುವ ನವಿಲುತೀರ್ಥ ಜಲಾಶಯವನ್ನು ಸೇರುತ್ತದೆ. ಈ ಹಿಂದೆ ಖಾಲಿಯಾಗಿದ್ದ ಜಲಾಶಯಕ್ಕೂ ಈಗ ನೀರು ಹರಿದು ಬರುತ್ತಿದ್ದು, ಜಲಾಶಯಕ್ಕೂ ಜೀವಕಳೆ ಬಂದಿದೆ.

ಮಲಪ್ರಭಾ ಮಾತ್ರವಲ್ಲದೆ, ಘಟಪ್ರಭಾ, ಕೃಷ್ಣಾ, ದೂದ್ ಗಂಗಾ, ವೇದ್ ಗಂಗಾ ಸೇರಿದಂತೆ ಬೆಳಗಾವಿ ಜಿಲ್ಲೆಯಲ್ಲಿ ಹರಿಯುವ ಸಪ್ತ ನದಿಗಳೂ ಕೂಡ ಕೇವಲ ನಾಲ್ಕೇ ದಿನದಲ್ಲಿ ಮೈದುಂಬಿ ಹರಿಯುತ್ತಿವೆ. ಮಳೆಯ ಅಬ್ಬರ ಹೀಗೆಯೇ ಮುಂದುವರಿದರೆ, ಮತ್ತಷ್ಟು ಜಮೀನುಗಳಿಗೆ ನೀರು ನುಗ್ಗುವ ಆತಂಕವೂ ಹೆಚ್ಚಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us