ಬ್ಯಾಂಕ್ ಸಿಬ್ಬಂದಿಯಿಂದಲೇ ನಕಲಿ ಚಿನ್ನ ಅಡವಿಟ್ಟು 1.5 ಕೋಟಿ ರೂ. ವಂಚನೆ!

Edited By:

Updated on: Aug 06, 2026 | 11:58 AM

ಬೆಂಗಳೂರಿನ ಪೀಣ್ಯ ಇಂಡಸ್‌ಇಂಡ್ ಬ್ಯಾಂಕ್‌ನಲ್ಲಿ ಉದ್ಯೋಗಿ ನಾಗೇಶ್ ಎಂಬಾತ ನಕಲಿ ಚಿನ್ನ ಅಡವಿಟ್ಟು 1.53 ಕೋಟಿ ರೂ. ವಂಚನೆ ನಡೆಸಿದ್ದಾನೆ. ಬ್ಯಾಂಕ್ ಆಡಿಟ್‌ನಲ್ಲಿ ಕೃತ್ಯ ಬಯಲಾಗುತ್ತಿದ್ದಂತೆ, ಹಣ ಹೊಂದಿಸಲು ಉದ್ಯಮಿ ಜಗದೀಶ್‌ ಎಂಬವರಿಗೆ ಮೋಸ ಮಾಡಿ ತಲೆಮರೆಸಿಕೊಂಡಿದ್ದಾನೆ. ಸದ್ಯ, ಜಗದೀಶ್ ಪೀಣ್ಯ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಯ ಪತ್ತೆಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಬೆಂಗಳೂರು, ಆಗಸ್ಟ್ 6: ಬೆಂಗಳೂರಿನ ಪೀಣ್ಯದಲ್ಲಿರುವ ಇಂಡಸ್‌ಇಂಡ್ ಬ್ಯಾಂಕ್‌ನಲ್ಲಿ ದೊಡ್ಡ ಮಟ್ಟದ ಗೋಲ್ಡ್ ಲೋನ್ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಬ್ಯಾಂಕ್‌ನ ಉದ್ಯೋಗಿ ನಾಗೇಶ್, ನಕಲಿ ಚಿನ್ನಾಭರಣಗಳನ್ನು ಅಡವಿಟ್ಟು ಬರೋಬ್ಬರಿ 1.53 ಕೋಟಿ ರೂ. ಸಾಲ ಪಡೆದು ಬ್ಯಾಂಕ್‌ಗೆ ಮೋಸ ಮಾಡಿದ್ದಾನೆ. ಸುಮಾರು 15 ನಕಲಿ ಅಕೌಂಟ್‌ಗಳ ಮೂಲಕ ಈ ಕೃತ್ಯ ಎಸಗಿದ್ದಾನೆ. ಗೋಲ್ಡ್ ಲೋನ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ನಾಗೇಶ್, ಅಡಮಾನವಿಡುವ ಚಿನ್ನವನ್ನು ಪರಿಶೀಲಿಸುವ ಜವಾಬ್ದಾರಿ ಹೊಂದಿದ್ದ. ಇದನ್ನೇ ದುರುಪಯೋಗಪಡಿಸಿಕೊಂಡು, ನಕಲಿ ಚಿನ್ನದ ಸರಗಳಿಗೆ ಹಾಲ್‌ಮಾರ್ಕ್ ಇರುವ ಅಸಲಿ ಕೊಂಡಿಗಳನ್ನು ಮಾತ್ರ ಜೋಡಿಸಿ, ಅವುಗಳನ್ನು ಅಸಲಿ ಎಂದು ಪರಿಗಣಿಸಿ ಲೋನ್ ಮಂಜೂರು ಮಾಡಿದ್ದಾನೆ. ಬ್ಯಾಂಕ್‌ನ ಆಡಿಟಿಂಗ್ ವೇಳೆ ನಾಗೇಶ್‌ನ ವಂಚನೆ ಬಯಲಾಗಿದೆ.

ಬ್ಯಾಂಕ್ ಅಧಿಕಾರಿಗಳು ಹಣ ಹಿಂದಿರುಗಿಸುವಂತೆ ಒತ್ತಡ ಹೇರಿದಾಗ, ನಾಗೇಶ್ ತನ್ನ ಸ್ನೇಹಿತನಾಗಿರುವ ಉದ್ಯಮಿ ಜಗದೀಶ್‌ಗೆ ಮೋಸ ಮಾಡುವ ಯೋಜನೆ ರೂಪಿಸಿದ್ದಾನೆ. ಕಡಿಮೆ ಬೆಲೆಗೆ ಹರಾಜಿಗೆ ಬಂದಿರುವ ಚಿನ್ನದಿಂದ 40 ಲಕ್ಷ ರೂ. ಲಾಭ ಗಳಿಸಬಹುದು ಎಂದು ಜಗದೀಶ್‌ರನ್ನು ನಂಬಿಸಿದ್ದಾನೆ. ನಾಗೇಶ್‌ ಮಾತಿಗೆ ಮರುಳಾದ ಜಗದೀಶ್ 1.53 ಕೋಟಿ ರೂ. ಹಣವನ್ನು ನಾಗೇಶ್‌ಗೆ ನೀಡಿದ್ದು, ಆ ಹಣವನ್ನು ಬ್ಯಾಂಕ್‌ಗೆ ಪಾವತಿಸಿ ನಾಗೇಶ್ ಎಸ್ಕೇಪ್ ಆಗಿದ್ದಾನೆ. ವಂಚನೆಗೊಳಗಾದ ಜಗದೀಶ್ ಈಗ ಪೀಣ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಆರೋಪಿ ನಾಗೇಶ್ ಪತ್ತೆಗೆ ಶೋಧ ನಡೆಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us