Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಾತ್ರೆಯಲ್ಲಿ ನೆರೆದಿದ್ದ ಭಕ್ತರ ಮೇಲೆ ಹರಿದ ಕಾರು: ಯುವತಿ ಸಾವು, 8 ಜನರಿಗೆ ಗಂಭೀರ ಗಾಯ

ಜಾತ್ರೆಯಲ್ಲಿ ನೆರೆದಿದ್ದ ಭಕ್ತರ ಮೇಲೆ ಹರಿದ ಕಾರು: ಯುವತಿ ಸಾವು, 8 ಜನರಿಗೆ ಗಂಭೀರ ಗಾಯ

ಸೂರಜ್​, ಮಹಾವೀರ್​ ಉತ್ತರೆ
| Updated By: ರಮೇಶ್ ಬಿ. ಜವಳಗೇರಾ

Updated on: Jan 14, 2025 | 10:43 PM

ಮಕರ ಸಂಕ್ರಾಂತಿ ದಿನದಂದು ಉತ್ತರ ಕನ್ನಡ ಜಿಲ್ಲೆಯಲ್ಲಿ ಘನ ಘೋರ ದುರಂತವೊಂದು ಸಂಭವಿಸಿದೆ. ಮದ್ಯದ ಅಮಲಿನಲ್ಲಿ ವ್ಯಕ್ತಿಯೋರ್ವ, ಯರ್ರಾಬಿರ್ರಿ ಕಾರು ಚಲಾಯಿಸಿಕೊಂಡು ಬಂದು ಅಯ್ಯಪ್ಪನ ಜಾತ್ರೆಯಲ್ಲಿ ನುಗ್ಗಿಸಿದ್ದಾನೆ. ಪರಿಣಾಮ ಜಾತ್ರೆಯಲ್ಲಿ ರಕ್ತದ ಕೋಡಿ ಹರಿದಿದ್ದು, ಓರ್ವ ಯುವತಿ ಸಾವನ್ನಪ್ಪಿದ್ದಾಳೆ. ಇನ್ನು 8 ಅಯ್ಯಪ್ಪ ಭಕ್ತರಿಗೆ ಗಂಭೀರ ಗಾಯಗಳಾಗಿವೆ.

ಉತ್ತರ ಕನ್ನಡ, (ಜನವರಿ 14): ವ್ಯಕ್ತಿಯೋರ್ವ ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿಕೊಂಡು ಬಂದು ಜಾತ್ರಗೆ ನುಗ್ಗಿಸಿದ್ದಾನೆ. ಪರಿಣಾಮ ಕಾರು ಭಕ್ತರ ಮೇಲೆ ಹರಿದಿದ್ದು, ಓರ್ವ ಯುವತಿ ಸಾವನ್ನಪ್ಪಿದ್ದಾಳೆ. ಇನ್ನು ಎಂಟು ಜನರಿಗೆ ಗಂಭೀರ ಗಾಯಗಳಾಗಿವೆ. ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರದ ಅಯ್ಯಪ್ಪ ದೇಗುಲದ ಬಳಿ ಈ ದುರ್ಘಟನೆ ಸಂಭವಿಸಿದೆ. ಸಿದ್ದಾಪುರದ ಕವಲಕೊಪ್ಪ ನಿವಾಸಿ ದೀಪಾ ರಾಮಗೊಂಡ(21) ಮೃತ ಯುವತಿ. ಕಲ್ಪನಾ, ಜಾನಕಿ, ಚೈತ್ರಾ, ಜ್ಯೋತಿ, ಮಾದೇವಿ, ಗೌರಿ, ರಾಮಪ್ಪ, ಗಜಾನನ್​ಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ ಕಲ್ಪನಾ ನಾಯ್ಕ್(5) ಸೇರಿ ಇಬ್ಬರನ್ನು ಶಿವಮೊಗ್ಗ ಆಸ್ಪತ್ರೆಗೆ ರವಾನಿಸಲಾಗಿದೆ.

ಇಂದು ಮಕರ ಸಂಕ್ರಾಂತಿ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರದ ರವೀಂದ್ರ ನಗರ ಸರ್ಕಲ್ ಬಳಿಯ ಅಯ್ಯಪ್ಪ ಸ್ವಾಮಿ ಮಂದಿರದಲ್ಲಿ ಜಾತ್ರೆ ನಡೆದಿದೆ. ಈ ಜಾತ್ರೆಯಲ್ಲಿ ನೂರಾರು ಜನರು ಸೇರಿದ್ದರು. ಈ ವೇಳೆ ರೋಶನ್ ಫೆರ್ನಾಂಡಿಸ್ ಎನ್ನುವಾತ ಫುಲ್ ಟೈಟ್ ಆಗಿ ತನ್ನ ಇಕೋ ಸ್ಪೋರ್ಟ್ಸ್​​ ಕಾರನ್ನು ಯರ್ರಾಬಿರ್ರಿ ಚಲಾಯಿಸಿಕೊಂಡು ಬಂದಿದ್ದು, ಏಕಾಏಕಿ ಕಾರು ದೇಗುಲದ ಮಂಟಪಕ್ಕೆ ಡಿಕ್ಕಿ ಹೊಡೆದಿದೆ. ಬಳಿಕ ಜನರ ಮೇಲೆ ಕಾರು ಹತ್ತಿಸಿ ಪರಾರಿಯಾಗಲು ಯತ್ನಿಸಿದ್ದಾನೆ. ಇದರಿಂದ ಆಕ್ರೋಶಗೊಂಡ ಭಕ್ತಾದಿಗಳು ಕಾರಿನ ಮೇಲೆ ಕಲ್ಲು ಎಸೆದು ಅಡ್ಡಹಾಕಿದ್ದಾರೆ. ಬಳಿಕ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿ ಠಾಣೆಗೆ ಎಳೆದೊಯ್ದಿದ್ದಾರೆ.