ದಾನ-ಧರ್ಮಕ್ಕೆ ಇಂದು ಸುವರ್ಣಾವಕಾಶ! ಚೈತ್ರ ಪೌರ್ಣಮಿಯ ಪುಣ್ಯ ಸ್ನಾನ ಮತ್ತು ಮಂತ್ರ ಜಪದ ವಿಶೇಷ ಫಲ
ಚೈತ್ರ ಪೌರ್ಣಮಿಯು ಭಗವಂತನ ಕೃಪೆ ಪಡೆಯಲು ಅತ್ಯಂತ ಪವಿತ್ರ ದಿನ. ಈ ದಿನ ವಿಷ್ಣು ಮತ್ತು ಚಿತ್ರಗುಪ್ತನ ಪೂಜೆ, ಪವಿತ್ರ ಸ್ನಾನ, ಮಂತ್ರ ಜಪ ಮತ್ತು ದಾನ ಧರ್ಮಾದಿಗಳನ್ನು ಮಾಡುವುದರಿಂದ ಕೆಟ್ಟ ಕರ್ಮಗಳು ಕಡಿಮೆಯಾಗುತ್ತವೆ. ಆರ್ಥಿಕ ಸಮಸ್ಯೆ, ಆರೋಗ್ಯ ಸಮಸ್ಯೆ, ಕೌಟುಂಬಿಕ ಕಲಹ ನಿವಾರಣೆಗೆ ಹಳದಿ ಬಟ್ಟೆಯ ತಂತ್ರವನ್ನು ಅನುಸರಿಸಬಹುದು. ಇದು ನಿಮ್ಮ ಸಂಕಲ್ಪಗಳನ್ನು ಈಡೇರಿಸುವ ಶಕ್ತಿ ಹೊಂದಿದೆ.
ಬೆಂಗಳೂರು, ಏ.1: ಚೈತ್ರ ಪೌರ್ಣಮಿ ಹಿಂದೂ ಧರ್ಮದಲ್ಲಿ ಅತ್ಯಂತ ಮಹತ್ವದ ಪರ್ವ ದಿನಗಳಲ್ಲಿ ಒಂದಾಗಿದೆ. ಇದನ್ನು ದವನದ ಹುಣ್ಣಿಮೆ ಎಂದೂ ಕರೆಯಲಾಗುತ್ತದೆ. ವರ್ಷದ ಪ್ರಥಮ ಮಾಸವಾದ ಚೈತ್ರ ಮಾಸದಲ್ಲಿ ಬರುವ ಈ ಮೊದಲ ಪೂರ್ಣಿಮೆಗೆ ವಿಶೇಷ ಪ್ರಾಮುಖ್ಯತೆ ಇದೆ. ಈ ದಿನ ಭಗವಾನ್ ವಿಷ್ಣು ಮತ್ತು ಕರ್ಮಗಳ ಲೆಕ್ಕ ಇಡುವ ಚಿತ್ರಗುಪ್ತನನ್ನು ಪೂಜಿಸಲಾಗುತ್ತದೆ. ಪವಿತ್ರ ಸ್ನಾನ ಮಾಡಿ, ವಿಷ್ಣು ಸಹಸ್ರನಾಮ ಜಪಿಸುವುದು ಅಥವಾ “ಓಂ ನಮೋ ಭಗವತೇ ವಾಸುದೇವಾಯ” ಮಂತ್ರ ಪಠಿಸುವುದು ಶ್ರೇಷ್ಠ. ಅನ್ನದಾನ, ವಸ್ತ್ರದಾನ ಮಾಡುವುದರಿಂದ ಕರ್ಮಗಳ ಪ್ರಭಾವ ಕಡಿಮೆಯಾಗುತ್ತದೆ ಎಂದು ನಂಬಲಾಗಿದೆ. ಸಾಕ್ಷಾತ್ ಇಂದ್ರ ಮತ್ತು ಶಿವನು ಕೂಡ ಈ ಪೌರ್ಣಮಿಯ ಮಹತ್ವವನ್ನು ಸಾರಿದ್ದಾರೆ. ದೇವಾಲಯಗಳಿಗೆ ಭೇಟಿ ನೀಡುವುದು, ಹಿರಿಯರ ಆಶೀರ್ವಾದ ಪಡೆಯುವುದು, ದಾನ ಧರ್ಮಗಳನ್ನು ಮಾಡುವುದು ಈ ದಿನದ ಆಚರಣೆಯ ಪ್ರಮುಖ ಭಾಗವಾಗಿದೆ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಹೇಳಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

