ನಾಯಿ-ನರಿ, ಕುಡುಕರ ಆಶ್ರಯತಾಣವಾಯ್ತು ಕೋಟೆನಾಡಿನ ಗುರುಭವನ: ಜಿಲ್ಲಾಡಳಿತ, ಶಿಕ್ಷಣ ಇಲಾಖೆಯ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ
ಚಿತ್ರದುರ್ಗ ನಗರದ ಹೃದಯಭಾಗದಲ್ಲಿರುವ ಗುರುಭವನವು ದುರವಸ್ಥೆಗೆ ತಲುಪಿದೆ. ಒಂದು ಕಾಲದಲ್ಲಿ ಶಿಕ್ಷಕರು ಹಾಗೂ ಸಾರ್ವಜನಿಕರ ಶುಭಕಾರ್ಯಗಳಿಗೆ ವೇದಿಕೆಯಾಗಿದ್ದ ಈ ಕಟ್ಟಡ ಈಗ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ಇವಿಎಂ ಯಂತ್ರಗಳ ಸಂಗ್ರಹದ ನಂತರ ನಿರ್ಲಕ್ಷ್ಯಕ್ಕೊಳಗಾಗಿ ಹಾಳಾಗಿದೆ. ಸಾರ್ವಜನಿಕರು ಗುರುಭವನದ ಕೂಡಲೇ ದುರಸ್ತಿಗೆ ಆಗ್ರಹಿಸಿದ್ದಾರೆ.
ಚಿತ್ರದುರ್ಗ, ಸೆ.9: ನಗರದ ಕೇಂದ್ರಭಾಗದಲ್ಲಿರುವ ಗುರುಭವನವು ಸಂಪೂರ್ಣವಾಗಿ ನಿರ್ಲಕ್ಷ್ಯಕ್ಕೊಳಗಾಗಿ, ಹಾಳುಕೊಂಪೆಯಂತಾಗಿದೆ. ಒಂದು ಕಾಲದಲ್ಲಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಈ ಕಟ್ಟಡ, ಶಿಕ್ಷಕರು ಹಾಗೂ ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ಶುಭಕಾರ್ಯಗಳನ್ನು ನಡೆಸಲು ಉತ್ತಮ ವೇದಿಕೆಯಾಗಿತ್ತು. ಆದರೆ, ಕಳೆದ ಕೆಲವು ವರ್ಷಗಳಿಂದ ಇದರ ದುಸ್ಥಿತಿ ನಾಗರಿಕರ ಆತಂಕಕ್ಕೆ ಕಾರಣವಾಗಿದೆ. ಜಿಲ್ಲಾಡಳಿತವು ಇವಿಎಂ ಯಂತ್ರಗಳ ಸಂಗ್ರಹಕ್ಕಾಗಿ ಗುರುಭವನವನ್ನು ಬಳಸಿಕೊಂಡ ನಂತರ, ಈ ಕಟ್ಟಡ ಸಂಪೂರ್ಣವಾಗಿ ಹಾಳಾಗಿದೆ. ಬಾಗಿಲುಗಳು, ಕಿಟಕಿಗಳು ಮುರಿದುಬಿದ್ದಿವೆ ಮತ್ತು ಇದು ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ನಾಯಿ-ನರಿಗಳು, ಕುಡುಕರ ಆಶ್ರಯತಾಣವಾಗಿ ಬದಲಾಗಿದೆ. ಶಿಕ್ಷಣ ಇಲಾಖೆ ಹಾಗೂ ಜಿಲ್ಲಾಡಳಿತದ ನಿರ್ಲಕ್ಷ್ಯವೇ ಈ ದುಸ್ಥಿತಿಗೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಬಗ್ಗೆ ಸಮಾಜಿಕ ಕಾರ್ಯಕರ್ತರು ಮತ್ತು ಸಾರ್ವಜನಿಕರು ದೂರು ನೀಡಿದರೂ ಅಧಿಕಾರಿಗಳು ಗಮನಹರಿಸಿಲ್ಲ. ಡಿಡಿಪಿಐ ಅವರು ಗುರುಭವನ ದುರಸ್ತಿಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದು ಹೇಳಿದರೂ, ಮಾಧ್ಯಮಗಳ ಮುಂದೆ ಉತ್ತರಿಸಲು ಹಿಂಜರಿದಿದ್ದಾರೆ. ಸಾರ್ವಜನಿಕರು ಗುರುಭವನವನ್ನು ಕೂಡಲೇ ದುರಸ್ತಿಪಡಿಸಿ, ಅದರ ಹಿಂದಿನ ವೈಭವವನ್ನು ಮರಳಿ ತರುವಂತೆ ಆಗ್ರಹಿಸಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
