ವಸ್ತ್ರಗಳ ಮೂಲಕ ಶಾಲಾವಿದ್ಯಾರ್ಥಿಗಳ ಧರ್ಮ ಐಡೆಂಟಿಫೈ ಮಾಡುವ ಹುನ್ನಾರ ಕಾಂಗ್ರೆಸ್ ಸರ್ಕಾರದ್ದು: ಸಿಟಿ ರವಿ

|

Updated on: Dec 23, 2023 | 11:01 AM

ಕಾಂಗ್ರೆಸ್ ಸರ್ಕಾರದ ಈ ನಡೆಯನ್ನು ಬಹಳ ಮೊದಲೇ ನಿರೀಕ್ಷಿಸಲಾಗಿತ್ತು. ಹಿಂದಿನ ಬಿಜೆಪಿ ಸರ್ಕಾರ ಹಿಜಾಬ್ ನಿಷೇಧ ಮಾಡಿದಾಗ ರಾಜ್ಯದ ಕಾಂಗ್ರೆಸ್ ನಾಯಕರು ಅದನ್ನು ತೀವ್ರವಾಗಿ ವಿರೋಧಿಸಿದ್ದರು. ಹಾಗಾಗಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಿಜೆಪಿ ಸರ್ಕಾರದ ಆದೇಶವನ್ನು ಹಿಂಪಡೆಯುವುದು ನಿಶ್ಚಿತವಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸರ್ಕಾರದ ನಿರ್ಣಯವನ್ನು ಅಧಿಕಾರಕ್ಕೆ ಬಂದು ಆರು ತಿಂಗಳು ನಂತರ ಪ್ರಕಟಿಸಿರುವುದೇ ಆಶ್ಚರ್ಯ.

ಚಿಕ್ಕಮಗಳೂರು: ನಿನ್ನೆ ಮೈಸೂರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಸಾರ್ವಜನಿಕ ಸಭೆಯೊಂದರಲ್ಲಿ ಮಾತಾಡುವಾಗ ಹಿಜಾಬ್ ನಿಷೇಧ ಆದೇಶ (hijab ban order) ಹಿಂಪಡೆಯಲು ಸೂಚನೆ ನೀಡಿರುವುದಕ್ಕೆ ಬಿಜೆಪಿ ಮಾಜಿ ಶಾಸಕ ಸಿಟಿ ರವಿ (CT Ravi) ನಗರದಲ್ಲಿಂದು ಪ್ರತಿಕ್ರಿಯೆ ನೀಡಿದರು. ಶಾಲೆಗಳಿಗೆ ವಿದ್ಯಾರ್ಥಿಗಳು ಸಮವಸ್ತ್ರ ಧರಿಸಿಬರುವ ಹಿಂದಿನ ಉದ್ದೇಶವನ್ನೇ ಮುಖ್ಯಮಂತ್ರಿ ಸಿದ್ದರಾಮಯ್ಯ ಕಡೆಗಣಿಸುತ್ತಿದ್ದಾರೆ. ಮಕ್ಕಳಲ್ಲಿ ಬಡವ-ಬಲ್ಲಿದ, ಹಿಂದೂ-ಮುಸ್ಲಿಂ ಮುಂತಾದ ತಾರತಮ್ಯಗಳು ಉಂಟಾಗಬಾರದು ಎಲ್ಲರೂ ಸಮಾನರು ಅನ್ನುವ ಭಾವನೆ ಅವರಲ್ಲಿ ಮೂಡಬೇಕು ಎಂಬ ಉದ್ದೇಶದಿಂದ 1964 ರಲ್ಲಿ ಸಮವಸ್ತ್ರದ ಕಾಯ್ದೆ ಜಾರಿಗೊಳಿಸಲಾಯಿತು ಎಂದು ರವಿ ಹೇಳಿದರು. ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಿ ಶಾಲೆಗಳಿಗೆ ಬರುವ ಅವಕಾಶ ಕಲ್ಪಿಸಿದರೆ, ಬೇರೆ ವಿದ್ಯಾರ್ಥಿಗಳು ಹಸಿರು ಶಾಲು, ಕೇಸರಿ ಶಾಲು, ಹಳದಿ ಅಥವಾ ನೀಲಿ ಶಾಲು ಧರಿಸಿ ಬರಲು ಅವಕಾಶ ಕೇಳಬಹುದು ಎಂದು ಹೇಳಿದ ರವಿ, ಸಮವಸ್ತ್ರದ ಮೂಲಕ ವಿದ್ಯಾರ್ಥಿಗಳ ಐಡೆಂಟಿಟಿಯನ್ನು ಗೊತ್ತು ಮಾಡಿಕೊಳ್ಳುವ ಉದ್ದೇಶ ಮುಖ್ಯಮಂತ್ರಿಗಳಿರುವಂತಿದೆ ಎಂದು ಕುಟುಕಿದರು.

 

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on