ಪ್ರಜ್ವಲ್ ಆಗಮನದ ಸಂದರ್ಭ ವಿಮಾನ ನಿಲ್ದಾಣದಲ್ಲಿ ಡಿಕೆ ಸುರೇಶ್ ಪ್ರತ್ಯಕ್ಷ! ಹೇಳಿದ್ದೇನು?

|

Updated on: May 31, 2024 | 9:15 AM

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಾಗ ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಸಹ ಅಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದರು. ಪ್ರಜ್ವಲ್​ರನ್ನು ಎಸ್​ಐಟಿ ವಶಕ್ಕೆ ಪಡೆದ ಸ್ಥಳದಲ್ಲೇ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಡಿಕೆ ಸುರೇಶ್ ಹಲವು ವಿಚಾರ ಪ್ರಸ್ತಾಪಿಸಿದರು. ಆ ಕುರಿತು ವಿಡಿಯೋ ಇಲ್ಲಿದೆ.

ಬೆಂಗಳೂರು, ಮೇ 31: ಅಶ್ಲೀಲ ವಿಡಿಯೋ, ಅತ್ಯಾಚಾರ ಪ್ರಕರಣದಲ್ಲಿ ಎಸ್​​ಐಟಿ ವಶವಾಗಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಜರ್ಮನಿಯ ಮ್ಯೂನಿಚ್​​ನಿಂದ ಬೆಂಗಳೂರಿನ ಕೆಂಪೇಗೌಡ ವಿಮಾನ (Bengaluru Airport) ನಿಲ್ದಾಣಕ್ಕೆ ಬಂದ ಅದೇ ಸಮಯದಲ್ಲಿ ರಾತ್ರಿ ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಸಹ ಅಲ್ಲಿ ಕಂಡುಬಂದು ಅಚ್ಚರಿ ಮೂಡಿಸಿದರು. ಇದೇ ವೇಳೆ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೂ ಅವರು ಉತ್ತರಿಸಿದರು.

ಅಶ್ಲೀಲ ವಿಡಿಯೋ ಕೇಸ್​ನಲ್ಲಿ ಎಸ್​ಐಟಿಯಿಂದ ಪ್ರಜ್ವಲ್ ಬಂಧನ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಾಕಷ್ಟು ಆರೋಪಗಳು ಅವರ ಮೇಲಿದೆ. ಅದನ್ನು ಎದುರಿಸುವುದಕ್ಕಾಗಿ ಎಸ್​​ಐಟಿ ಮುಂದೆ ಹಾಜರಾಗುತ್ತಾರೆ. ಇದರಲ್ಲಿ ಷಡ್ಯಂತ್ರದ ವಿಚಾರ ಇಲ್ಲ. ಇದು ಸ್ವಯಂಕೃತ ಅಪರಾಧ ಅಷ್ಟೆ. ಪೆನ್​ಡ್ರೈವ್​ ಪ್ರಕರಣದ​ ಬಗ್ಗೆ ಎಸ್​ಐಟಿ ತನಿಖೆ ನಡೆಸುತ್ತಿದೆ. ಕಾನೂನು ಪ್ರಕಾರ ಏನು ತನಿಖೆ ಅಗಬೇಕಿದೆಯೋ ಅದರಂತೆ ಆಗಲಿದೆ ಎಂದರು.

ಇದನ್ನೂ ಓದಿ: ಮ್ಯೂನಿಕ್​ನಿಂದ ಬೆಂಗಳೂರು ವರೆಗೆ ಪ್ರಜ್ವಲ್: ಈ ಅವಧಿಯಲ್ಲಿ ಏನೇನಾಯ್ತು? ಇಲ್ಲಿದೆ ಸಂಪೂರ್ಣ ವಿವರ

ಪ್ರಕರಣ ಬೆಳಕಿಗೆ ಬಂದಾಗ ವಿದೇಶಕ್ಕೆ ತೆರಳಿ ತಲೆಮರೆಸಿಕೊಂಡಿದ್ದ ಅವರು 33 ದಿನಗಳು ಕಳೆದ ಮೇಲೆ ವಾಪಸ್ ಬಂದಿದ್ದಾರೆ. ಸಾಕ್ಷ್ಯ ನಾಶದ ಸಾಧ್ಯತೆ ಏನಾದರೂ ಇದೆಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸುರೇಶ್, ಆ ಬಗ್ಗೆ ನನಗೆ ಗೊತ್ತಿಲ್ಲ. ಎಸ್​ಐಟಿ ತನಿಖೆ ನಡೆಯಲಿ. ತನಿಖೆಯ ನಂತರ ಸತ್ಯಾಂಶ ಹೊರಬರಲಿದೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow us on