ಸದ್ದಿಲ್ಲದೆ ಸರ್ಕಾರಿ ಕನ್ನಡ ಶಾಲೆಗೆ ಬೀಗ?: ಗದಗದ ಕೆಂಚಲಾಪೂರದಲ್ಲಿ 5 ದಿನಗಳಿಂದ ಸ್ಕೂಲ್ ಕ್ಲೋಸ್!
ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಕೆಂಚಲಾಪೂರದಲ್ಲಿ ಕಡಿಮೆ ವಿದ್ಯಾರ್ಥಿಗಳ ಸಂಖ್ಯೆ ಕಾರಣ ನೀಡಿ ಸರ್ಕಾರಿ ಕನ್ನಡ ಶಾಲೆಗೆ ಏಕಾಏಕಿ ಬೀಗ ಜಡಿಯಲಾಗಿದೆ. ಪೋಷಕರು ಮತ್ತು ಎಸ್ಡಿಎಂಸಿ ಗಮನಕ್ಕೆ ತಾರದೆ ಶಾಲೆ ಮುಚ್ಚಿರುವ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. ಶಿಕ್ಷಕರ ನಿರ್ಲಕ್ಷ್ಯದಿಂದಲೇ ಮಕ್ಕಳ ಸಂಖ್ಯೆ ಇಳಿದಿದೆ ಎಂದು ಆರೋಪಿಸಿ, ಶಿಕ್ಷಣ ಇಲಾಖೆ ವಿರುದ್ಧ ಪೋಷಕರು ಕಿಡಿಕಾರಿದ್ದಾರೆ.
ಗದಗ, ಆಗಸ್ಟ್ 25: ಲಕ್ಷ್ಮೇಶ್ವರ ಪಟ್ಟಣದ ಕೆಂಚಲಾಪೂರ ಪ್ರದೇಶದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಅಧಿಕಾರಿಗಳು ಬೀಗ ಜಡಿದಿದ್ದು, ಕಳೆದ ಐದು ದಿನಗಳಿಂದ ಶಾಲೆ ಬಂದ್ ಆಗಿದೆ. ಮಕ್ಕಳ ಸಂಖ್ಯೆ ಕಡಿಮೆ ಎಂದು 11 ಮಕ್ಕಳು ಓದುತ್ತಿದ್ದ ಶಾಲೆಯನ್ನು ಪೋಷಕರು, ಎಸ್ಡಿಎಂಸಿ ಆಡಳಿತದ ಗಮನಕ್ಕೆ ತಾರದೇ ಬಂದ್ ಮಾಡಲಾಗಿದೆ. ಜೊತೆಗೆ ಪೋಷಕರಿಗೆ ಗೋತ್ತಿಲ್ಲದೇ ವಿದ್ಯಾರ್ಥಿಗಳನ್ನು ಬೇರೆ ಶಾಲೆಗಳಿಗೆ ವರ್ಗಾವಣೆ ಮಾಡಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಶಾಲೆಗೆ ಬೀಗ ಬೀಳಲು ಶಿಕ್ಷಕರು, ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ. ಶಾಲೆಯ ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡಿಲ್ಲ. ಮಕ್ಕಳಿಗೆ ಪಾಠ ಮಾಡಬೇಕಿರೋ ಶಿಕ್ಷಕರು ಮೊಬೈಲ್ ನಲ್ಲಿ ಬ್ಯೂಸಿಯಾಗಿರುತ್ತಿದ್ದರು. ಶಾಲೆ ಆವರಣದಲ್ಲಿನ ಎಳನೀರು ಮಾರಾಟ ಮಾಡಿ ವ್ಯವಹಾರ ನಡೆಸುತ್ತಿದ್ದರು. ಹೀಗಾಗಿಯೇ ಮಕ್ಕಳ ಸಂಖ್ಯೆ ಕಡಿಮೆ ಆಗಿದೆ ಎಂದು ಆರೋಪಿಸಿ, ಶಾಲೆಯ ಪೀಠೋಪಕರಣ ಸ್ಥಳಾಂತರಕ್ಕೂ ಸ್ಥಳೀಯರು ಅಡ್ಡಿ ಪಡಿಸಿದ್ದಾರೆ. ಶಾಲೆಯನ್ನು ಪುನಃ ಆರಂಭ ಮಾಡಬೇಕು. ಇಲ್ಲವಾದರೆ ಉಗ್ರವಾದ ಹೋರಾಟ ನಡೆಸುತ್ತೇವೆ ಎಂದು ಪೋಷಕರು ಎಚ್ಚರಿಸಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
