ದೇಗುಲಕ್ಕೆ ನೀಡಿದ್ದ ಇನಾಂ ಜಾಗದಲ್ಲಿ ಪ್ರಜಾಸೌಧಕ್ಕೆ ಅಡಿಗಲ್ಲು: ಚರ್ಚೆಗೆ ಗ್ರಾಸವಾದ ಸಚಿವ ಬಸವರಾಜ ರಾಯರೆಡ್ಡಿ ನಡೆ
ಕೊಪ್ಪಳದ ಕುಕನೂರಿನ ರುದ್ರಮುನೀಶ್ವರ ಮಠದ ಭೂಮಿಯಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ ಸಚಿವ ಬಸವರಾಜ್ ರಾಯರೆಡ್ಡಿ ಅಡಿಗಲ್ಲು ಹಾಕಿದ್ದಾರೆ. ಇದು ಸರ್ಕಾರಕ್ಕೆ ಇನಾಂ ಆಗಿ ನೀಡಿದ ಮುಜರಾಯಿ ಇಲಾಖೆಯ ಸರ್ಕಾರಿ ಭೂಮಿ ಎಂದು ಅವರು ಸ್ಪಷ್ಟಪಡಿಸಿದ್ದು, ನ್ಯಾಯಾಲಯದ ತಡೆಯಾಜ್ಞೆ ತೆರವಾದ ಬಳಿಕ ಕಾಮಗಾರಿ ಆರಂಭಗೊಂಡಿದೆ. ಸರ್ಕಾರಿ ಕೆಲಸಗಳಿಗೆ ವಕ್ಫ್ ಆಸ್ತಿ ಕೂಡ ಬಳಸಬಹುದು ಎಂದು ರಾಯರೆಡ್ಡಿ ಹೇಳಿದ್ದಾರೆ.
ಕೊಪ್ಪಳ, ಸೆಪ್ಟೆಂಬರ್ 13: ಇನಾಂ ಭೂಮಿ ವ್ಯಾಪ್ತಿಯಲ್ಲಿರುವ ಕೊಪ್ಪಳ ಜಿಲ್ಲೆ ಕುಕನೂರು ಪಟ್ಟಣದಲ್ಲಿರುವ ರುದ್ರಮುನೇಶ್ವರ ದೇವಸ್ಥಾನದ ಜಾಗದಲ್ಲಿ ಕುಕನೂರು ತಾಲೂಕು ಕಚೇರಿ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದ್ದು, ಕಚೇರಿ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಗಿದೆ. ದೇಗುಲ ಅಥವಾ ಅರ್ಚಕರಿಗೆ ನೀಡಿದ್ದ ಇನಾಂ ಭೂಮಿಯಲ್ಲಿ ಸರ್ಕಾರಿ ಕಟ್ಟಡ ನಿಮರ್ಮಾಣ ವಿಚಾರವೀಗ ಹೊಸ ವಿವಾದಕ್ಕೆ ಕಾರಣವಾಗಿದೆ. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಬಸವರಾಜ ರಾಯರೆಡ್ಡಿ ಮುಜರಾಯಿ ಇಲಾಖೆ ಭೂಮಿಯನ್ನ ಸರ್ಕಾರಿ ಕೆಲಸಕ್ಕೆ ಬಳಸಬಹುದು. ಭೂಮಿ ಕೊಡುವುದಾದರೆ ನಾನೇ ಪೂಜೆ ಮಾಡುತ್ತೇನೆ. ಬೆಂಗಳೂರಲ್ಲಿ ನನಗೂ ಎರಡು ಎಕರೆ ಕೊಡಿ ಎಂದಿದ್ದಾರೆ. ರುದ್ರಮುನೇಶ್ವರ ಮಠದ ಆಸ್ತಿಯಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ ಅಂದಿನ ಜಿಲ್ಲಾಧಿಕಾರಿ ಸರ್ಕಾರಕ್ಕೆ ಪ್ರಪೋಸಲ್ ಕಳುಹಿಸಿದ್ದರು. ಅದಕ್ಕೀಗ ಸರ್ಕಾರ ಅಪ್ರೂವಲ್ ಕೊಟ್ಟಿದೆ. ಇದನ್ನು ಪ್ರಶ್ನಿಸಿ ರುದ್ರಮುನೇಶ್ವರ ಮಠದ ಟ್ರಸ್ಟ್ ಕೋರ್ಟ್ ಮೆಟ್ಟಿಲೇರಿತ್ತು. ಸದ್ಯ ಸ್ಟೇ ತೆರವುಗೊಳಿಸಿದ ಬಳಿಕ ಪ್ರಜಾಸೌಧ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಗಿದೆ. ವಕ್ಫ್ ಆಸ್ತಿ ಕೂಡ ಸರ್ಕಾರಿ ಕೆಲಸಕ್ಕೆ ಬಳಕೆ ಮಾಡಿಕೊಳ್ಳಬಹುದು. ರಾಜ್ಯದ ಹಲವು ಕಡೆ ವಕ್ಫ್ ಆಸ್ತಿ ಬಳಕೆ ಮಾಡಿಕೊಳ್ಳಲಾಗಿದೆ ಎಂದವರು ಸಮಜಾಯಿಷಿ ನೀಡಿದ್ದಾರೆ. ಹೀಗಿದ್ದರೂ ಈ ಹಿಂದೆ ಧರ್ಮದ ಬಗ್ಗೆ ಹೇಳಿಕೆ ನೀಡಿ ವಿವಾದ ಮೈಮೇಲೆ ಎಳೆದುಕೊಂಡಿದ್ದ ಸಚಿವರ ವಿರುದ್ಧ ಮತ್ತೊಮ್ಮೆ ಆಕ್ರೋಶ ವ್ಯಕ್ತವಾಗಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
