Video: ಜಾತ್ರೆ ಸಮಯದಲ್ಲಿ ಮನೆಯಲ್ಲಿ ಒಲೆ ಹಚ್ಚುವಂತಿಲ್ಲ! ಗದಗ-ಬೆಟಗೇರಿ ಗ್ರಾಮದೇವತೆಗಳ ಜಾತ್ರೆಯ ವಿಶೇಷತೆ ತಿಳಿಯಿರಿ
ಗದಗ-ಬೆಟಗೇರಿ ಅವಳಿ ನಗರದಲ್ಲಿ ದ್ಯಾಮವ್ವ-ದುರ್ಗವ್ವ ಜಾತ್ರಾ ಮಹೋತ್ಸವ 18 ವರ್ಷಗಳ ನಂತರ ಅದ್ದೂರಿಯಾಗಿ ನೆರವೇರಿತು. ಒಂಬತ್ತು ದಿನಗಳ ಈ ಹಬ್ಬದಲ್ಲಿ ದೇವಿಯರನ್ನು ತವರು ಮನೆಯಿಂದ ಗಂಡನ ಮನೆಗೆ ಕಳುಹಿಸುವ ವಿಶೇಷ ಆಚರಣೆ ನಡೆಯಿತು. ಭವ್ಯ ಮೆರವಣಿಗೆ, 140 ಕ್ವಿಂಟಾಲ್ ಭಂಡಾರ ಎರಚಾಟ, ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತರನ್ನು ಆಕರ್ಷಿಸಿದವು.
ಗದಗ-ಬೆಟಗೇರಿ ಅವಳಿ ನಗರದ ಗ್ರಾಮ ದೇವತೆಯರಾದ ದ್ಯಾಮವ್ವ ಮತ್ತು ದುರ್ಗವ್ವನ ಜಾತ್ರಾ ಮಹೋತ್ಸವವು 18 ವರ್ಷಗಳ ನಂತರ ಅದ್ದೂರಿಯಾಗಿ ನೆರವೇರಿದೆ. ಸಾಮಾನ್ಯವಾಗಿ 12 ವರ್ಷಗಳಿಗೊಮ್ಮೆ ನಡೆಯುವ ಈ ಜಾತ್ರೆಯು ಕರೋನಾ ಹಿನ್ನೆಲೆಯಲ್ಲಿ ಈ ಬಾರಿ 18 ವರ್ಷಗಳ ಬಳಿಕ ಸಂಭ್ರಮದಿಂದ ಆಚರಿಸಲಾಯಿತು. ಒಂಬತ್ತು ದಿನಗಳ ಕಾಲ ನಡೆದ ಈ ಜಾತ್ರೆಯ ಕೊನೆಯ ದಿನದಂದು ದೇವಿಯರನ್ನು ಅವರ ತವರು ಮನೆಯಾದ ಒಕ್ಕಲಿಗೇರಿ ಓಣಿಯಿಂದ ಗಂಡನ ಮನೆಯಾದ ಕಿಲ್ಲಾ ಓಣಿಯ ದೇವಸ್ಥಾನಕ್ಕೆ ಕಳುಹಿಸುವ ವಿಶೇಷ ವಿಧಿ ವಿಧಾನ ನಡೆಯಿತು. ಈ ಆಚರಣೆಯನ್ನು ಲಕ್ಷಾಂತರ ಭಕ್ತರು ಕಣ್ತುಂಬಿಕೊಂಡರು. ಈ ಸಂದರ್ಭದಲ್ಲಿ ಭಕ್ತರು ಸುಮಾರು 140 ಕ್ವಿಂಟಾಲ್ ಭಂಡಾರವನ್ನು ದೇವಿಯರಿಗೆ ಅರ್ಪಿಸಿ, ಪರಸ್ಪರ ಎರಚಾಡುವ ಮೂಲಕ ಸಂಭ್ರಮಿಸಿದರು. ಬೆಳಗ್ಗೆ 11 ಗಂಟೆಗೆ ಆರಂಭವಾದ ಬೃಹತ್ ಮೆರವಣಿಗೆಯು ಕುದುರೆ, ಒಂಟೆ, 108 ಡೊಳ್ಳು ವಾದ್ಯಗಳು, ಜಾಂಜ್ ಮೇಳ ಸೇರಿದಂತೆ ವಿವಿಧ ವಾದ್ಯ ಮೇಳಗಳೊಂದಿಗೆ ರಾತ್ರಿ 10 ಗಂಟೆಯವರೆಗೂ ಸಾಗಿತು. ಈ ಜಾತ್ರೆಯಲ್ಲಿ ಯಾವುದೇ ಮನೆಗಳಲ್ಲಿ ಒಲೆ ಹೊತ್ತಿಸದೆ, ಚಪ್ಪಲಿ ಹಾಕದೆ ಓಡಾಡದಂತಹ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸಲಾಯಿತು. ಎಲ್ಲಾ ಜನಾಂಗದ ಜನರು ಈ ಪವಿತ್ರ ಜಾತ್ರೆಯಲ್ಲಿ ಭಕ್ತಿ ಭಾವದಿಂದ ಪಾಲ್ಗೊಂಡರು.
ಮತ್ತಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
