ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ: ಹಲವೆಡೆ ಎಂಟ್ರಿ-ಎಕ್ಸಿಟ್ ಮುಚ್ಚಿದ್ದಕ್ಕೆ ಸ್ಥಳೀಯರ ಆಕ್ರೋಶ
ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇಯಲ್ಲಿ ಹಲವೆಡೆ ಎಂಟ್ರಿ-ಎಕ್ಸಿಟ್ ಪಾಯಿಂಟ್ಗಳನ್ನು ಮುಚ್ಚಿರುವುದು ಸ್ಥಳೀಯ ವಾಹನ ಸವಾರರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಟೋಲ್ ದರ ಹೆಚ್ಚಳದ ವಿವಾದದ ನಡುವೆ, ಸ್ಥಳೀಯರಿಗೆ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಪ್ರತ್ಯೇಕ ಟೋಲ್ಗಳನ್ನು ನಿರ್ಮಿಸುವಂತೆ ವಾಹನ ಸವಾರರು ಆಗ್ರಹಿಸುತ್ತಿದ್ದಾರೆ. ಇದರಿಂದ ಸಮಯ ಉಳಿತಾಯದ ಬದಲು ಸರ್ವಿಸ್ ರಸ್ತೆಯಲ್ಲಿ ನಿಧಾನಗತಿಯ ಸಂಚರಿಸಬೇಕಾದ ಸ್ಥಿತಿ ಉದ್ಭವಿಸಿದೆ.
ರಾಮನಗರ, ಸೆಪ್ಟೆಂಬರ್ 17: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಸದಾ ಒಂದಿಲ್ಲೊಂದು ವಿವಾದಗಳಿಂದಲೇ ಸುದ್ದಿಯಲ್ಲಿದೆ. ಈಗ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಹಲವು ಕಡೆಗಳಲ್ಲಿ ಎಕ್ಸ್ಪ್ರೆಸ್ವೇಗೆ ಸಂಪರ್ಕ ಕಲ್ಪಿಸುವ ಎಂಟ್ರಿ ಹಾಗೂ ಎಕ್ಸಿಟ್ ಪಾಯಿಂಟ್ಗಳನ್ನು ಮುಚ್ಚುತ್ತಿದ್ದು, ಇದು ಸ್ಥಳೀಯ ವಾಹನ ಸವಾರರು ಮತ್ತು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ರಾಮನಗರ, ಮಂಡ್ಯ, ಮೈಸೂರು ಜಿಲ್ಲೆಗಳನ್ನು ಹಾದು ಹೋಗುವ ಈ ಮಾರ್ಗದಲ್ಲಿ ಪ್ರತಿನಿತ್ಯ ಲಕ್ಷಾಂತರ ವಾಹನಗಳು ಸಂಚರಿಸುತ್ತವೆ. ಹಿಂದೆ ಟೋಲ್ ದರ ಹೆಚ್ಚಳ, ಸ್ಥಳೀಯರಿಗೆ ಟೋಲ್ ಸಂಗ್ರಹದ ವಿಚಾರದಲ್ಲಿ ಸಾಕಷ್ಟು ವಿವಾದಗಳು ನಡೆದಿದ್ದವು. ಈಗ ಎಂಟ್ರಿ-ಎಕ್ಸಿಟ್ ಬಂದ್ ಮಾಡುವುದರಿಂದ ಸ್ಥಳೀಯರು ಸರ್ವಿಸ್ ರಸ್ತೆಯಲ್ಲೇ ಸಂಚರಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಬೆಂಗಳೂರಿನಿಂದ ಬಿಡದಿಗೆ ಬರುವವರಿಗೆ ಸುಮಾರು 20 ಕಿಲೋಮೀಟರ್ ದೂರಕ್ಕೆ ಸಹ ಮೈಸೂರಿಗೆ ತೆರಳುವಷ್ಟೇ ದುಬಾರಿ ಟೋಲ್ ದರ ವಿಧಿಸಲಾಗುತ್ತಿದೆ. ಸರ್ವಿಸ್ ರಸ್ತೆಗಳಲ್ಲಿ ಗುಂಡಿಗಳು, ಹಂಪ್ಸ್ ಮತ್ತು ಹಳ್ಳಿಗಳಿಂದಾಗಿ ಪ್ರಯಾಣದ ಅವಧಿ ಹೆಚ್ಚುತ್ತಿದೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಸ್ಥಳೀಯರಿಗೆ ಅನುಕೂಲವಾಗುವಂತೆ ಟೋಲ್ ಪಾಯಿಂಟ್ಗಳನ್ನು ನಿರ್ಮಿಸಿ ಶುಲ್ಕ ಸಂಗ್ರಹಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.

