ನನ್ನ ಮಾತು ಎಷ್ಟು ನಡೆಯುತ್ತೆ? ಎಷ್ಟು ನಡೆಯಲ್ಲ ಅನ್ನೋದು ನನಗೆ ಮಾತ್ರ ಗೊತ್ತು: ಮಾಜಿ ಸಿಎಂ ಮಾರ್ಮಿಕ ನುಡಿ
ನಾನೀಗ ಮುಖ್ಯಮಂತ್ರಿ ಅಲ್ಲ, ನನ್ನ ಮಾತು ಎಷ್ಟು ನಡೆಯುತ್ತೆ? ಎಷ್ಟು ನಡೆಯಲ್ಲ ಅನ್ನೋದು ನನಗೆ ಮಾತ್ರ ಗೊತ್ತು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬೇಸರ ಹೊರಹಾಕಿದ್ದಾರೆ. ನಿನ್ನೆಯಷ್ಟೇ ಬೆಂಗಳೂರಿನಲ್ಲಿ ಎಐಸಿಸಿ ನಾಯಕರಾದ ಕೆಸಿ ವೇಣುಗೋಪಾಲ್ ಹಾಗೂ ರಣದೀಪ್ ಸಿಂಗ್ ಸುರ್ಜೆವಾಲ ಜೊತೆ ಸಿದ್ದರಾಮಯ್ಯ ಪ್ರತ್ಯೇಕ ಮಾತುಕತೆ ನಡೆಸಿದ್ದರು. ಇದರ ಬೆನ್ನಲ್ಲೇ ಸಿದ್ದರಾಮಯ್ಯನವರ ಈ ರೀತಿಯ ಮಾರ್ಮಿಕ ಮಾತುಗಳನ್ನಾಡಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ಬೆಂಗಳೂರು, (ಸೆಪ್ಟೆಂಬರ್ 17) : ನಾನೀಗ ಮುಖ್ಯಮಂತ್ರಿ ಅಲ್ಲ, ನನ್ನ ಮಾತು ಎಷ್ಟು ನಡೆಯುತ್ತೆ? ಎಷ್ಟು ನಡೆಯಲ್ಲ ಅನ್ನೋದು ನನಗೆ ಮಾತ್ರ ಗೊತ್ತು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಮಾರ್ಮಿಕವಾಗಿ ಮಾತನಾಡಿದ್ದಾರೆ. ಬೆಂಗಳೂರಿನಲ್ಲಿಂದು ಮಾತನಾಡಿದ ಅವರು, ನಾನೀಗ ಮುಖ್ಯಮಂತ್ರಿ ಅಲ್ಲ. ನನ್ನ ಮಾತು ಈಗಲೂ ನಡೆಯುತ್ತೆ ಅಂತ ಬಹಳ ಜನ ಅಂದುಕೊಂಡಿದ್ದಾರೆ. ನಾನೂ ಹಾಗೇ ಅಂದುಕೊಂಡಿದ್ದೆ. ಆದ್ರೆ ನನ್ನ ಮಾತು ಎಷ್ಟು ನಡೆಯುತ್ತೆ, ಎಷ್ಟು ನಡೆಯಲ್ಲ ಅಂತ ನನಗೆ ಮಾತ್ರ ಗೊತ್ತು ಎಂದು ಹೇಳಿದ್ದಾರೆ.
ಸಿಎಂ ಆಗಿದ್ದಾಗ ಎಷ್ಟೇ ಟೀಕೆ ಮಾಡಿದ್ರೂ ಯಾರಿಗೂ ಕರೆ ಮಾಡಿಲ್ಲ. ಆದ್ರೆ ಸುಳ್ಳು ಆರೋಪ ಮಾಡಿದ್ರೆ ಮನಸ್ಸಿಗೆ ಬಹಳ ನೋವಾಗುತ್ತದೆ. ರಾಜ್ಯದಲ್ಲಿ ಮೌಢ್ಯ ಪ್ರತಿಬಂಧಕ ಕಾಯ್ದೆ ಜಾರಿಗೆ ತಂದಿದ್ದೇವೆ. ಇಂತಹ ಕಾಯ್ದೆ ಇದೆ ಎಂದು ಜನರಿಗೆ ಗೊತ್ತಿಲ್ಲವೆಂದು ಬೇಸರ ಹೊರಹಾಕಿದ ಸಿದ್ದರಾಮಯ್ಯ, ನಾನು ಸಿಎಂ ಆಗಿದ್ದಾಗ ನನ್ನ ಕಾರಿನ ಮೇಲೆ ಒಂದು ಕಾಗೆ ಕೂತಿತ್ತು. ಮುಂದಿನ ಬಜೆಟ್ ಮಂಡಿಸಲ್ಲವೆಂದು ಒಬ್ಬ ಪುರೋಹಿತ ಹೇಳಿದ್ರು. ಮತ್ತೊಬ್ಬರು ಬಜೆಟ್ ಮಂಡಿಸ್ತಾರೆ, ಆದ್ರೆ ಸಿಎಂ ಆಗಿರಲ್ಲ ಅಂದ್ರು. ಮಾಧ್ಯಮಗಳಲ್ಲಿ ಇಂತಹ ಸುದ್ದಿ ನೋಡಿ ಜನ ಚಪ್ಪಾಳೆ ತಟ್ಟುತ್ತಾರೆ. ಎಲ್ಲರೂ ಹುಷಾರಾಗಿ ಹೆಜ್ಜೆ ಇಡಿ ಎಂದಿದ್ದಾರೆ.

