‘ಒಳ್ಳೆಯ ಅಂತರದಲ್ಲಿ ಗೀತಾ ಶಿವರಾಜ್​ಕುಮಾರ್​ ಗೆಲ್ಲುತ್ತಾರೆ’: ಭವಿಷ್ಯ ನುಡಿದ ಎಸ್​. ನಾರಾಯಣ್​

|

Updated on: Apr 30, 2024 | 8:40 PM

‘ಶಿವಮೊಗ್ಗದಲ್ಲಿ ಗೀತಾ ಶಿವರಾಜ್​ಕುಮಾರ್​ ಅವರು ದೊಡ್ಡ ಬಹುಮತ ಪಡೆದು ಗೆಲ್ಲುತ್ತಾರೆ. ಅದು ಖಂಡಿತಾ’ ಎಂದು ನಿರ್ದೇಶಕ ಎಸ್​. ನಾರಾಯಣ್​ ಹೇಳಿದ್ದಾರೆ. ಕಾಂಗ್ರೆಸ್​ ಅಭ್ಯರ್ಥಿಗಳ ಪರವಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅವರು ಪ್ರಚಾರ ಮಾಡುತ್ತಿದ್ದಾರೆ. ಚಿತ್ರರಂಗದ ಅನೇಕರು ಗೀತಾ ಶಿವರಾಜ್​ಕುಮಾರ್​ ಅವರಿಗೆ ಬೆಂಬಲ ನೀಡಿದ್ದಾರೆ. ಮೇ 7ರಂದು ಕರ್ನಾಟಕದಲ್ಲಿ 2ನೇ ಹಂತದ ಮತದಾನ ನಡೆಯಲಿದೆ.

ನಟ, ನಿರ್ದೇಶಕ ಎಸ್​. ನಾರಾಯಣ್​ ಅವರು ಕಾಂಗ್ರೆಸ್​ (Congress) ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. ವಿವಿಧ ಲೋಕಸಭಾ ಕ್ಷೇತ್ರಗಳಿಗೆ ಹೋಗಿ ಅವರು ಕಾಂಗ್ರೆಸ್​ ಅಭ್ಯರ್ಥಿಗಳಿಗೆ ಬೆಂಬಲ ನೀಡಿದ್ದಾರೆ. ಇಂದು (ಏಪ್ರಿಲ್​ 30) ಅವರು ಬಾಗಲಕೋಟೆಯಲ್ಲಿ ಪ್ರಚಾರ ಮಾಡಿದ್ದಾರೆ. ಈ ವೇಳೆ ಅವರು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಆಗ ಅವರಿಗೆ ಶಿವಮೊಗ್ಗದ ಕಾಂಗ್ರೆಸ್​ ಅಭ್ಯರ್ಥಿ ಗೀತಾ ಶಿವರಾಜ್​ಕುಮಾರ್ (Geetha Shivarajkumar)​ ಬಗ್ಗೆ ಪ್ರಶ್ನೆ ಕೇಳಲಾಗಿದೆ. ಶಿವಮೊಗ್ಗದ ಲೋಕಸಭಾ ಚುನಾವಣೆಯಲ್ಲಿ ಗೀತಾ ಶಿವರಾಜ್​ಕುಮಾರ್​ ಗೆದ್ದೇ ಗೆಲ್ಲುತ್ತಾರೆ ಎಂದು ಎಸ್​​. ನಾರಾಯಣ್​ (S Narayan) ಭವಿಷ್ಯ ನುಡಿದಿದ್ದಾರೆ. ‘ಗೀತಾ ಶಿವರಾಜ್​ಕುಮಾರ್​ ಅವರು ಈ ಬಾರಿ ಶಿವಮೊಗ್ಗದಲ್ಲಿ ಗೆಲ್ಲುತ್ತಾರೆ. ಕಾರಣ ನಿಮಗೂ ಗೊತ್ತಿದೆ. ಒಳ್ಳೆಯ ಅಂತರದಲ್ಲೇ ಗೆಲ್ಲುತ್ತಾರೆ. ಆ ಕ್ಷೇತ್ರದಲ್ಲಿ ಇಬ್ಬರು ಪ್ರಭಾವಿಗಳ ನಡುವೆ ಘರ್ಷಣೆ ಇದೆ. ಅದು ಗೀತಾಗೆ ಅನುಕೂಲ ಆಗತ್ತೆ. ಈ ಹಿಂದೆ ಗೀತಾ ಅವರು ಅಲ್ಲಿ ಸೋಲು ಕಂಡಿದ್ದರು. ಆ ಸೋಲಿನ ಅನುಕಂಪ ಹೆಣ್ಣುಮಕ್ಕಳಿಗೆ ಇದೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಹೆಣ್ಮಕ್ಕಳು ಕಾಂಗ್ರೆಸ್​ ಅಲ್ಲದೇ ಬೇರೆ ಯಾವುದೇ ಪಕ್ಷಕ್ಕೆ ಮತ ಹಾಕಬಾರದು ಅಂತ ನಿರ್ಧರಿಸಿದ್ದಾರೆ. ಬಂಗಾರಪ್ಪನವರು ಆ ಜಿಲ್ಲೆಗೆ ಬಹಳ ಕೊಡುಗೆ ನೀಡಿದ್ದಾರೆ. ನಾನು ಕೂಡ ಅದೇ ಜಿಲ್ಲೆಯ ಭದ್ರಾವತಿಯವನು. ಹಾಗಾಗಿ ನನಗೆ ಗೊತ್ತಿದೆ. ಅಲ್ಲಿ ಕಾಂಗ್ರೆಸ್​ ಗೆಲ್ಲುತ್ತದೆ’ ಎಂದು ಎಸ್​. ನಾರಾಯಣ್​ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow us on