ನಟ, ನಿರ್ದೇಶಕ ಎಸ್. ನಾರಾಯಣ್ ಅವರು ಕಾಂಗ್ರೆಸ್ (Congress) ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. ವಿವಿಧ ಲೋಕಸಭಾ ಕ್ಷೇತ್ರಗಳಿಗೆ ಹೋಗಿ ಅವರು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಬೆಂಬಲ ನೀಡಿದ್ದಾರೆ. ಇಂದು (ಏಪ್ರಿಲ್ 30) ಅವರು ಬಾಗಲಕೋಟೆಯಲ್ಲಿ ಪ್ರಚಾರ ಮಾಡಿದ್ದಾರೆ. ಈ ವೇಳೆ ಅವರು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಆಗ ಅವರಿಗೆ ಶಿವಮೊಗ್ಗದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ಕುಮಾರ್ (Geetha Shivarajkumar) ಬಗ್ಗೆ ಪ್ರಶ್ನೆ ಕೇಳಲಾಗಿದೆ. ಶಿವಮೊಗ್ಗದ ಲೋಕಸಭಾ ಚುನಾವಣೆಯಲ್ಲಿ ಗೀತಾ ಶಿವರಾಜ್ಕುಮಾರ್ ಗೆದ್ದೇ ಗೆಲ್ಲುತ್ತಾರೆ ಎಂದು ಎಸ್. ನಾರಾಯಣ್ (S Narayan) ಭವಿಷ್ಯ ನುಡಿದಿದ್ದಾರೆ. ‘ಗೀತಾ ಶಿವರಾಜ್ಕುಮಾರ್ ಅವರು ಈ ಬಾರಿ ಶಿವಮೊಗ್ಗದಲ್ಲಿ ಗೆಲ್ಲುತ್ತಾರೆ. ಕಾರಣ ನಿಮಗೂ ಗೊತ್ತಿದೆ. ಒಳ್ಳೆಯ ಅಂತರದಲ್ಲೇ ಗೆಲ್ಲುತ್ತಾರೆ. ಆ ಕ್ಷೇತ್ರದಲ್ಲಿ ಇಬ್ಬರು ಪ್ರಭಾವಿಗಳ ನಡುವೆ ಘರ್ಷಣೆ ಇದೆ. ಅದು ಗೀತಾಗೆ ಅನುಕೂಲ ಆಗತ್ತೆ. ಈ ಹಿಂದೆ ಗೀತಾ ಅವರು ಅಲ್ಲಿ ಸೋಲು ಕಂಡಿದ್ದರು. ಆ ಸೋಲಿನ ಅನುಕಂಪ ಹೆಣ್ಣುಮಕ್ಕಳಿಗೆ ಇದೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಹೆಣ್ಮಕ್ಕಳು ಕಾಂಗ್ರೆಸ್ ಅಲ್ಲದೇ ಬೇರೆ ಯಾವುದೇ ಪಕ್ಷಕ್ಕೆ ಮತ ಹಾಕಬಾರದು ಅಂತ ನಿರ್ಧರಿಸಿದ್ದಾರೆ. ಬಂಗಾರಪ್ಪನವರು ಆ ಜಿಲ್ಲೆಗೆ ಬಹಳ ಕೊಡುಗೆ ನೀಡಿದ್ದಾರೆ. ನಾನು ಕೂಡ ಅದೇ ಜಿಲ್ಲೆಯ ಭದ್ರಾವತಿಯವನು. ಹಾಗಾಗಿ ನನಗೆ ಗೊತ್ತಿದೆ. ಅಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ’ ಎಂದು ಎಸ್. ನಾರಾಯಣ್ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.